ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಹೊಸ ಕಾನೂನು
ಬೆಂಗಳೂರು, ಫೆ. 13: ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರದ ವಾಸನೆಯಿದೆ ಎಂಬ ಆರೋಪಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಜೊತೆಗೆ ಕುಲಪತಿಗಳ ನೇಮಕಾತಿಯಲ್ಲಿ ವಿವಿಧ ಲಾಬಿಗಳು ನಡೆಯುತ್ತವೆ ಎಂಬ ಆರೋಪಗಳಿಗೆ ಕಡಿಮೆ ಏನಿಲ್ಲ. ಕುಲಪತಿಗಳ ನೇಮಕದಲ್ಲಿ ಪಾರದರ್ಶಕತೆ ತರಲು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿಸಿಎಂ ಡಾ. ಅಶ್ವತ್ಥನಾರಾಯಣ ಕುಲಪತಿಗಳ ನೇಮಕಾತಿ ಕಾನೂನಿಗೆ ತಿದ್ಉಪಡಿ ತರುವ ವಿಚಾರವನ್ನು ತಿಳಿಸಿದ್ದಾರೆ. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲಿ ಸಾಕಷ್ಟು ಗೊಂದಲ ಇದ್ದು, ಕುಲಪತಿಗಳ ಆಯ್ಕೆಗೆ ಪ್ರತಿ ಬಾರಿಯೂ ಶೋಧನಾ ಸಮಿತಿ ರಚಿಸಲಾಗುತ್ತಿದೆ. ಇದರಿಂದ ಕುಲಪತಿಗಳ ನೇಮಕ ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕುಲಪತಿಗಳ ನೇಮಕ ಸಂಬಧ ವಿವಿ ಕಾಯ್ದೆಯಲ್ಲಿನ ಅಂಶವನ್ನು ಹಿಂಪಡೆದು, ಹೊಸ ಕಾನೂನು ರೂಪಿಸಲಾಗುತ್ತದೆ. ಅದರಂತೆ, ಎಲ್ಲ ಅರ್ಹ ಪ್ರೊಫೆಸರ್ಗಳ ಪಟ್ಟಿ ಸಿದ್ಧಪಡಿಸಲು ಸಮಿತಿ ರಚಿಸಲಾಗುತ್ತಿದೆ. ಈ ಮೂಲಕ ಸರಳ, ಪಾರದರ್ಶಕ ಹಾಗೂ ಗೌರವಾನ್ವಿತವಾಗಿ ಕುಲಪತಿಗಳ ಆಯ್ಕೆ ಸಾಧ್ಯವಾಗಲಿದೆ. ಇದರಿಂದ ವಿಶ್ವವಿದ್ಯಾಲಯ ಸೇರಿದಂತೆ ನಮ್ಮೆಲ್ಲರ ಗೌರವ ಹೆಚ್ಚುವುದು ಎಂದರು.
ಭ್ರಷ್ಟಾಚಾರ ಮುಕ್ತ ಶಿಕ್ಷಣ ನಮ್ಮ ಗುರಿ
ಶಿಕ್ಷಣ ವ್ಯವಸ್ಥೆ ಭ್ರಷ್ಟ ಮುಕ್ತವಾಗಬೇಕು. ಉಪನ್ಯಾಸಕರ ನೇಮಕಕ್ಕೆ ಪಾರದರ್ಶಕ ವ್ಯವಸ್ಥೆ ತರಲಾಗಿದ್ದು, ಕುಲಪತಿಗಳ ನೇಮಕದಲ್ಲೂ ಪಾರದರ್ಶಕ ವ್ಯವಸ್ಥೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಗುತ್ತಿದೆ. ವಿಶ್ವವಿದ್ಯಾಲಯಗಳು ಭ್ರಷ್ಟ ಮುಕ್ತವಾದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು
ಕಾಲೇಜುಗಳ ನಿರ್ವಹಣೆಗೆ ಏಕೀಕೃತ ವ್ಯವಸ್ಥೆ
ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆಗೆ ಏಕೀಕೃತ ವ್ಯವಸ್ಥೆ (ಯೂನಿಫೈಡ್ ಯೂನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟೆಮ್) ರೂಪಿಸಲಾಗುವುದು. ಇದರಲ್ಲೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ಆನ್ಲೈನ್ ವೇದಿಕೆಯೂ ಇರಲಿದೆ. ಇ-ಆಡಳಿತದ ಮೂಲಕ ಈ ವ್ಯವಸ್ಥೆ ಜಾರಿ ತಂದು ಮೌಲ್ಯಮಾಪನ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸದ್ಭಳಕೆ ಆಗಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ
ಎಲ್ಲ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವಂತಾಗಬೇಕು. ಇದಲ್ಲದೇ ಉದ್ಯಮ ನಿರ್ಮಾಣ, ಹೊಸ ಉದ್ಯಮ ಆರಂಭ ಮಾಡುವ ಬಗ್ಗೆಯೂ ಮಾಹಿತಿ ದೊರೆತಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕಾಣಲು ಸಾಧ್ಯ. ಪಠ್ಯಕ್ರಮ ಸರಳ ಸುಲಭವಾಗಿದ್ದು, ಪ್ರಸ್ತುತವಾಗಿರಬೇಕು. ಯಾವ ಉದ್ದೇಶಕ್ಕೆ ಅಧ್ಯಯನ ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ವಿದ್ಯಾರ್ಥಿಗಳಿರಬೇಕು. ಜ್ಞಾನವರ್ಧನೆಗಾಗಿ ಅಧ್ಯಯನ ಹಾಗೂ ಜೀವನೋಪಾಯಕ್ಕೆ ಕಲಿಕೆ- ಇವುಗಳಲ್ಲಿ ವ್ಯತ್ಯಾಸ ಇದೆ. ವಿದೇಶಗಳಲ್ಲಿ ಅಕಾಡೆಮಿಕ್ ಡಿಗ್ರಿ ಹಾಗೂ ಪ್ರೊಫೆಶನಲ್ ಡಿಗ್ರಿ ಪಡೆಯುವ ಅವಕಾಶ ಇದೆ. ಇಂಥ ವ್ಯವಸ್ಥೆ ನಿಮ್ಮ ವಿವಿಯಿಂದಲೇ ಆರಂಭವಾಗಲಿ ಎಂದು ಅವರು ಸಲಹೆ ನೀಡಿದರು.
ಬೆಂಗಳೂರು ಉತ್ತರ ವಿವಿಯಿಂದಲೇ ನಾಲೆಡ್ಜ್ ಸಿಟಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣದ ಜತೆಯಲ್ಲೇ 'ನಾಲೆಡ್ಜ್ ಸಿಟಿ' ಸ್ಥಾಪಿಸುವ ಉದ್ದೇಶವಿದೆ, ವಿಶೇಷವೆಂದರೆ ವಿಶ್ವವಿದ್ಯಾಲಯದಿಂದಲೇ ನಾಲೆಡ್ಜ್ ಸಿಟಿ ನಿರ್ಮಾಣ ಕಾರ್ಯ ಆಗುವುದು. ಅದರ ಎಲ್ಲ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಕ್ಕೆ ವಹಿಸಲಾಗುತ್ತದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಎಲ್ಲ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವಂತಾಗಬೇಕು. ಇದಲ್ಲದೇ ಉದ್ಯಮ ನಿರ್ಮಾಣ, ಹೊಸ ಉದ್ಯಮ ಆರಂಭ ಮಾಡುವ ಬಗ್ಗೆಯೂ ಮಾಹಿತಿ ದೊರೆತಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಕಾಣಲು ಸಾಧ್ಯ. ಪಠ್ಯಕ್ರಮ ಸರಳ ಸುಲಭವಾಗಿದ್ದು, ಪ್ರಸ್ತುತವಾಗಿರಬೇಕು. ಯಾವ ಉದ್ದೇಶಕ್ಕೆ ಅಧ್ಯಯನ ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ವಿದ್ಯಾರ್ಥಿಗಳಿರಬೇಕು. ಜ್ಞಾನವರ್ಧನೆಗಾಗಿ ಅಧ್ಯಯನ ಹಾಗೂ ಜೀವನೋಪಾಯಕ್ಕೆ ಕಲಿಕೆ- ಇವುಗಳಲ್ಲಿ ವ್ಯತ್ಯಾಸ ಇದೆ. ವಿದೇಶಗಳಲ್ಲಿ ಅಕಾಡೆಮಿಕ್ ಡಿಗ್ರಿ ಹಾಗೂ ಪ್ರೊಫೆಶನಲ್ ಡಿಗ್ರಿ ಪಡೆಯುವ ಅವಕಾಶ ಇದೆ. ಇಂಥ ವ್ಯವಸ್ಥೆ ಶಿವಮೊಗ್ಗ ವಿಶ್ವವಿದ್ಯಾಲಯದಿಂದಲೇ ಆರಂಭವಾಗಲಿ ಎಂದರು.