ಫುಟ್ಪಾತ್ನಲ್ಲಿ ವಾಹನ ನಿಲ್ಲಿಸಿದರೆ ಗಂಟೆ 50 ರೂ.ನಂತೆ ಫೈನ್ ಬೀಳುತ್ತೆ!
ಬೆಂಗಳೂರು,ಜೂ. 16: ರಾಜಧಾನಿಯಲ್ಲಿ ಎಲ್ಲೆಂದರೆ ಅಲ್ಲಿ ಕಾರು, ಬೈಕ್ ನಿಲ್ಲಿಸಿದರೆ ನೋ ಪಾರ್ಕಿಂಗ್ ದಂಡ ಮಾತ್ರ ಬೀಳುತ್ತಿತ್ತು. ಇನ್ಮುಂದೆ ಎರಡು ದಂಡ ಬೀಳಲಿದೆ. ಪಾದಚಾರಿ ಮಾರ್ಗದ ಮುಂದೆ ವಾಹನ ನಿಲ್ಲಿಸಿ ಸಾರ್ವಜನಿಕರ ಪ್ರಯಾಣಕ್ಕೆ ಅಡ್ಡಿ ಪಡಿಸಿದರೆ ನೋ ಪಾರ್ಕಿಂಗ್ ದಂಡದ ಜತೆಗೆ ಪ್ರತಿ ಗಂಟೆಗೆ 50 ರೂ. ನಂತೆ ಹೊಸ ದಂಡ ಬೀಳಲಿದೆ. ಇದರ ಜತೆಗೆ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುವವರಿಗೂ ಪ್ರತ್ಯೇಕ ದಂಡ ಬೀಳಲಿದೆ.
ಹೈಕೋರ್ಟ್ ತೀರ್ಪು ಆಧರಿಸಿ ಹೊಸ ದಂಡ
ಹೊಸ ದಂಡಾಸ್ತ್ರವನ್ನು ಅತಿ ಶೀಘ್ರದಲ್ಲಿಯೇ ಬೆಂಗಳೂರಿನ ಜನರಿಗೆ ಪರಿಚಯಿಸಲು ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ದಂಡವನ್ನು ಪರಿಚಯಿಸಿರುವುದು ಸರ್ಕಾರವಲ್ಲ, ಹೈಕೋರ್ಟ್. ಪಾದಚಾರಿ ಮಾರ್ಗ ಒತ್ತುವರಿ, ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಕುರಿತು 2019 ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವರಿಗೆ ಮತ್ತು ವಾಹನ ನಿಲ್ಲಿಸಿ ಜನರಿಗೆ ಅಡ್ಡಿ ಪಡಿಸುವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದ ಮೇಲೆ ವಹಿವಾಟು ನಡೆಸಿದರೆ, ಅಥವಾ ವಾಹನ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದರೆ ಹೊಸ ದಂಡ ವಿಧಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಗಂಟೆಗೆ 50 ರೂ.ನಂತೆ ಹೊಸ ದಂಡ
ನ್ಯಾಯಾಲಯದ ಅದೇಶದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಮಾಡುವರ ವಿರುದ್ಧ ಹೊಸ ದಂಡ ಪ್ರಯೋಗ ಮಾಡುವಂತೆ ಒಳಾಡಳಿತ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ. ಸಂಚಾರ ಮುಕ್ತ ತೆರವಿಗೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಅಥವಾ ಇಟ್ಟುಕೊಂಡರೆ, ಅಂತಹ ವಾಹನ ಮಾಲೀಕರಿಗೆ ಸ್ಥಳದಲ್ಲಿ ಇರುವವರೆಗೆ ಪ್ರತಿ ಗಂಟೆಗೆ 50 ರೂ. ನಂತೆ ದಂಡ ವಿಧಿಸಲು ಒಳಾಡಳಿತ ಇಲಾಖೆ ಸೂಚಿಸಿದೆ. ಪಾದಚಾರಿ ಮಾರ್ಗ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುವ ರೀತಿ ವಾಹನ ಚಲಾವಣೆ ಮಾಡಿದರೆ ಅಥವಾ ನಿಲ್ಲಿಸಿದರೆ ಅಂಥ ವಾಹನಗಳ ಮೇಲೆ ಕ್ರಮ ಜರುಗಿಸಬೇಕು. ಜತೆಗೆ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿರುವರನ್ನು ತೆರವುಗೊಳಿಸುವ ಜತೆಗೆ ದಂಡ ವಿಧಿಸಿ ಕ್ರಮ ಜರುಗಿಸುವಂತೆ ಸಿಬ್ಬಂದಿ ಮತ್ತು ಒಳಾಡಳಿತ ಇಲಾಖೆ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಗೆ ಸೂಚನೆ ನೀಡಿದೆ.
ಪದಚಾರಿ ಒತ್ತುವರಿ ತೆರವು ಜತೆಗೆ ದಂಡ
ಪಾದಚಾರಿ ಮಾರ್ಗದಲ್ಲಿ ಏನಾದರೂ ಅಕ್ರಮ ವ್ಯಾಪಾರ ಮಾಡುವರಿಗೂ ಭಾರೀ ದಂಡ ಬೀಳಲಿದ್ದು, ಅತಿ ಶೀಘ್ರದಲ್ಲಿಯೇ ಹೊಸ ದಂಡದ ಬಿಸಿ ಪರಿಚಯಿಸಲು ಪೊಲೀಸರು ಸನ್ನದ್ದರಾಗಿದ್ದಾರೆ. ಅಂದಹಾಗೆ ಇದು ಪೊಲೀಸ್ ಇಲಾಖೆ ರೂಪಿಸಿರುವ ನಿಯಮವಲ್ಲ. ರಾಜಧಾನಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ, ವಾಹನಗಳ ದಟ್ಟಣೆ, ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಸಾರ್ವಜನಿಕರ ಓಟಾಟಕ್ಕೆ ಅಡ್ಡಿ ಪಡಿಸುವುದನ್ನು ಕಡಿವಾಣ ಹಾಕಲು ಹೈಕೋರ್ಟ್ ಆದೇಶದ ಮೇರೆಗೆ ಬಂದಿರುವ ಹೊಸ ಆದೇಶ. ಈ ಹೊಸ ದಂಡದ ನಿಯಮ ಜಾರಿಗೆ ಬಂದಲ್ಲಿ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿದರೆ ಒಂದು ತಾಸಿಗೆ 50 ರೂ. ನಂತೆ ದಂಡ ಬೀಳಲಿದೆ. ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುವ ಜತೆಗೆ ದಂಡವೂ ಬೀಳಲಿದ್ದು, ಬಿಬಿಎಂಪಿ ಅಧಿಕಾರಿಗಳಿಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ನೋ ಪಾರ್ಕಿಂಗ್ ಸಮಸ್ಯೆ
ರಾಜಧಾನಿಯಲ್ಲಿ ವಾಹನ ದಟ್ಟಣೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಇದರ ಜತೆಗೆ ಸಿಕ್ಕ ಸಿಕ್ಕ ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸುವುದು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯ. ಇದರಿಂದ ಜನ ಸಾಮಾನ್ಯರು ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ, ಕೆ.ಅರ್. ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ ಜನ ಸಂದಣಿ ಪ್ರದೇಶದಲ್ಲಿ ಕಾಲಿಡಲು ಆಗದಂತೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಜನ ಸಾಮಾನ್ಯರು ಓಡಾಡಲು ಆಗದಂತಹ ಪರಿಸ್ಥಿತಿ ಇದೆ. ಇನ್ನು ಬೆಂಗಳೂರಿನಲ್ಲಿರುವ ವಾಹನಗಳಿಗೆ ಅನುಗುಣವಾಗಿ ನಿಲ್ದಾಣಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವಕಾಶ ಮಾಡಿಕೊಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಇದರಿಂದ ಅನಿವಾರ್ಯವಾಗಿ ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸುವುದು ಅನಿವಾರ್ಯವಾಗಿಬಿಟ್ಟಿದೆ.
ಪಾದಚಾರಿ ಮಾರ್ಗದ ಕಿರಿಕಿರಿ
ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಚಿಲ್ಲರೆ ಅಂಗಡಿಗಳ ವಹಿವಾಟು. ಕೆಲವರು ಬದುಕಿಗಾಗಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡರೆ, ಇನ್ನೂ ಕೆಲವರು ಓಡಾಡುವರನ್ನು ಟಾರ್ಗೆಟ್ ಮಾಡಿ ಪುಟ್ ಪಾತ್ ಅತಿಕ್ರಮಿಸಿಕೊಂಡಿದ್ದಾರೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಪುಟ್ ಪಾತ್ಗಳನ್ನು ಒತ್ತುವರಿ ಮಾಡಿಕೊಂಡೇ ವಹಿವಾಟು ಮಾಡುವುದೇ ದೊಡ್ಡ ಮಾಫಿಯಾ ಆಗಿ ಬದಲಾಗಿ ಬಿಟ್ಟಿದೆ. ಫುಟ್ ಪಾತ್ ನಲ್ಲಿ ಅಂಗಡಿ ಇಡುವರಿಂದಲೂ ಹಫ್ತಾ ವಸೂಲಿ ಮಾಡುವ ದಂಧೆಗಳು ಬೆಂಗಳೂರಿನಲ್ಲಿ ಕಡಿಮೆಯಿಲ್ಲ. ಇದು ಬೆಂಗಳೂರಿನ ಪುಟ್ ಪಾತ್ ಒತ್ತುವರಿಯ ವಾಸ್ತವ ಸಂಗತಿ.
Recommended Video
ಸಂವಿಧಾನ ಹಕ್ಕು ಉಲ್ಲಂಘನೆ
ಇನ್ನು ಪಾದಚಾರಿ ಮಾರ್ಗ ಒತ್ತುವರಿ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿ ಜನರ ಸಂಚಾರಕ್ಕೆ ಅಡ್ಡಿ ಪಡಿಸುವುದು ಸಂವಿಧಾನದ ಹಕ್ಕು ಉಲ್ಲಂಘನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ದಂಡಾಸ್ತ್ರ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಮೋಟಾರು ವಾಹನ ಕಾಯ್ದೆ ಹಾಗೂ ಮುನಿಸಿಪಲ್ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸಿ ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ನಾಗರಿಕರ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹೈಕೋರ್ಟ್ ಸೂಚಿಸಿದೆ.