ಬುದ್ಧಿಮಾಂದ್ಯ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೂತನ ಕೇಂದ್ರ
ಕೇಂದ್ರವನ್ನು ಅಖಿಲ ಭಾರತ ನೇತ್ರವಿಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಡಾ. ಸಂತಾನ್ ಗೋಪಾಲ್ ಹಾಗೂ ಚಿತ್ರ ನಟಿ ನಭಾ ನಟೇಶ್ ಅವರು ಜಂಟಿಯಾಗಿ ಉದ್ಘಾಟಿಸಿದರು.
ಬೆಂಗಳೂರು, ಏಪ್ರಿಲ್ 4: ನಗರದಲ್ಲಿರುವ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ಕೇಂದ್ರವನ್ನು ಏಪ್ರಿಲ್ 3ರಂದು ಉದ್ಘಾಟಿಸಲಾಯಿತು.
ಸ್ವಯಂ ಸೇವಾ ಸಂಘಟನೆಯಾದ ಸೂರ್ಯ ವತಿಯಿಂದ ಆರಂಭಗೊಂಡಿರುವ ಈ ಕೇಂದ್ರಕ್ಕೆ 'ಮೈಲ್ ಸ್ಟೋನ್ - ಆ್ಯನ್ ಅರ್ಲಿ ಇನ್ವೆಂಷನ್ ಆ್ಯಂಡ್ ಟ್ರಾನ್ಸ್ ಫಾರ್ಮೇಷನ್ ಸೆಂಟರ್' ಎಂದು ಹೆಸರಿಡಲಾಗಿದೆ.
ನೂತನ ಸೌಲಭ್ಯಗಳೊಂದಿಗೆ ಬುದ್ಧಿಮಾಂದ್ಯ ಮಕ್ಕಳಿಗೆ ನೆರವಾಗುವ ಗುರಿಯೊಂದಿಗೆ ಆರಂಭಗೊಂಡಿರುವ ಈ ಕೇಂದ್ರವನ್ನು ಅಖಿಲ ಭಾರತ ನೇತ್ರವಿಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಡಾ. ಸಂತಾನ್ ಗೋಪಾಲ್ ಹಾಗೂ ಚಿತ್ರ ನಟಿ ನಭಾ ನಟೇಶ್ ಅವರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರ ಐ ಫೌಂಡೇಷನ್ ನ ಮುಖ್ಯಸ್ಥರಾದ ಡಾ. ಕೌಶಿಕ್ ಮುರಳಿ, ''ಸೂರ್ಯ ಸ್ವಯಂ ಸೇವಾ ಸಂಘದಿಂದ ಈ ಹೊಸ ಕೇಂದ್ರ ಸ್ಥಾಪನೆ ಸಾಧ್ಯವಾಗಿದೆ. ಹಾಗಾಗಿ, ಆ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ. ಸುಮಾರು ಏಳೂವರೆ ಲಕ್ಷದಲ್ಲಿ ಸ್ಥಾಪಿಸಲಾಗಿರುವ ಈ ಸಂಸ್ಥೆಯಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗಾಗಿ ಕಂಪ್ಯೂಟರ್ ಆಧಾರಿತ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇತ್ತೀಚೆಗೆ ಬುದ್ಧಿ ಮಾಂದ್ಯ ಮಕ್ಕಳ ಚಿಕಿತ್ಸಾ ಸಂಶೋಧನಾ ಕ್ಷೇತ್ರದಲ್ಲಿ ಆಗಿರುವ ನೂತನ ಆವಿಷ್ಕಾರಗಳ ಆಧಾರಿತ ಚಿಕಿತ್ಸಾ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿವೆ'' ಎಂದು ವಿವರಿಸಿದರು.
ಉದ್ಘಾಟನೆಯ ನಂತರ, ಬುದ್ಧಿಮಾಂದ್ಯ ಮಕ್ಕಳಿಂದ ಹಾಗೂ ಅವರ ಪೋಷಕರು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.