ಆವಲಹಳ್ಳಿ ಜಂಕ್ಷನ್ ನಲ್ಲಿ ಕೆಲಸಕ್ಕೆ ಬಾರದ ಪೊಲೀಸ್!
ಬೆಂಗಳೂರು, ಸೆಪ್ಟೆಂಬರ್ 16 : ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಆವಲಹಳ್ಳಿ ಪೆಟ್ರೋಲ್ ಬಂಕ್ ಜಂಕ್ಷನ್ ಬಳಿ ಪ್ರತಿನಿತ್ಯ ಸಂಭವಿಸುವ ಟ್ರಾಫಿಕ್ ಜಾಮ್ ಬಗ್ಗೆ ಏಕೆ ನಿರ್ಲಕ್ಷ್ಯವೋ? ವಾಹನ ಸಂಚಾರಿಗಳಿಗೆ ಇಲ್ಲಿ ನಿತ್ಯನಕರ!
ಕಥೆ 2 : ಆವಲಹಳ್ಳಿ ಪೆಟ್ರೋಲ್ ಬಂಕ್ ವೃತ್ತದ ವೃತ್ತಾಂತ
ಮೈಸೂರು ರಸ್ತೆ, ನಾಯಂಡಹಳ್ಳಿ, ಗಿರಿನಗರ ಮತ್ತು ಹನುಮಂತನಗರಗಳ ಕಡೆಯಿಂದ ಸೇರುವ, ಎಸ್ಸಾರ್ ಪೆಟ್ರೋಲ್ ಬಂಕ್ ಬಳಿಯ ಈ ಪುಟ್ಟ ಚೌಕದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆಯ ಗೋಳು.
ಬೆಳಗಿನ ಹೊತ್ತಿನಲ್ಲಾದರೆ ಜನರಿಗೆ ಲಗುಬಗನೆಯಿಂದ ಕಚೇರಿಗೆ ಹೋಗುವ ಧಾವಂತ, ಸಂಜೆಯಾದರೆ ಅದೇ ರಸ್ತೆ ಹಾಯ್ದುಕೊಂಡು ಹೋಗುವ ಜನರಿಗೆ ಮನೆಗೆ ಬೇಗನೆ ಹೋಗಿ ಸೇರುವ ತವಕ. ಆದರೆ, ಅಷ್ಟು ಸರಳವಾಗಿ ದಾಟಿಹೋಗಲು ವಾಹನ ಸಂಚಾರಿಗಳು ಬಿಡಬೇಕಲ್ಲ?
ನಾಮೊದಲು ಹೋಗಬೇಕು, ನಾಮೊದಲು ದಾಟಬೇಕು ಎನ್ನುವ ಧಾವಂತದಲ್ಲಿ ಪ್ರತಿದಿನ ದಟ್ಟಣೆ ತಪ್ಪಿದ್ದಲ್ಲ. ಆದರೆ, ಇದನ್ನು ಸುಗಮವಾಗಿ ನಿಭಾಯಿಸಲು ಪೊಲೀಸ್ ಪೇದೆ ಇದ್ದರೆ ತಾನೆ? ತಿಂಗಳಲ್ಲಿ ಒಂದು ಬಾರಿ ಪೊಲೀಸ್ ಟೋಪಿ ಕಂಡರೆ ಅವತ್ತು ಸೂರ್ಯ ಬೇರೆ ದಿಕ್ಕಿನಲ್ಲಿ ಹುಟ್ಟಿರುತ್ತಾನೆಂದೇ ಅರ್ಥ.
ಇಷ್ಟಾದರೂ ವಾಹನ ಸಂಚಾರ ದಟ್ಟಣೆಯನ್ನು ನಿಭಾಯಿಸುತ್ತಿರುವವರು ಯಾರು ಗೊತ್ತಾ ಟ್ರಾಫಿಕ್ ಕಮಿಷನರ್ ಸಾಹೇಬರೆ? ಅವರು ಅಲ್ಲೇ ಅಡ್ಡಾಡುವ ಸ್ಥಳೀಯರು. ಅಲ್ಲಿ ಆಗುತ್ತಿರುವ ದಟ್ಟಣೆಯನ್ನು ನೋಡಲಾರದೆ ತಾವೇ ಬಾಯಲ್ಲಿ ಶೀಟಿ ಹಿಡಿದುಕೊಂಡು, ಟ್ರಾಫಿಕ್ ನಿಭಾಯಿಸುತ್ತಾರೆ.
ಆವಲಹಳ್ಳಿ ಜಂಕ್ಷನ್ ನಿಂದ ಮೈಸೂರು ರಸ್ತೆಗೆ ಹೋಗುವ ದಾರಿ ಒನ್ ವೇ. ಬಟ್ ಹೂ ಕೇರ್ಸ್? ಹ್ಯಾಗಿದ್ರೂ ಪೊಲೀಸ್ ಇರಲ್ಲ. ಇದ್ದರೂ ಒನ್ ವೇನಲ್ಲಿ ಸಾಗುತ್ತಿರುವವರನ್ನು ಎಂದೂ ಹಿಡಿದಿದ್ದಿಲ್ಲ. ಹಿಡಿಯುವುದು ಹಾಳಾಗಿ ಹೋಗಲಿ, ಒಂದೇ ಒಂದು ಬಾರಿಯೂ ಆ ದಾರಿಯಲ್ಲಿ ಹೋಗಲಾರದಂತೆ ತಡೆದದ್ದೂ ಇಲ್ಲ.
ಪ್ರತಿದಿನ ಸಂಜೆ ಟ್ರಾಫಿಕ್ ಜಾಮ್ ಅನ್ನು ನಿಭಾಯಿಸುತ್ತಿರುವ ಯುವಕರನ್ನು ಕಂಡರೆ ಅಯ್ಯೋ ಪಾಪ ಅನ್ನಿಸುತ್ತದೆ, ಕೆಲಸಕ್ಕೆ ಬಾರದ ಟ್ರಾಫಿಕ್ ಪೊಲೀಸರ ಮೇಲೆ ಹಿಡಿಶಾಪ ಹಾಕಬೇಕನ್ನಿಸುತ್ತದೆ ಅಂತಾರೆ ಈ ಗೋಳನ್ನು ದಿನನಿತ್ಯ ನೋಡುವ ಹಿರಿಯರೊಬ್ಬರು.
ಅಲ್ಲೊಂದು ಸಿಗ್ನಲ್ ಹಾಕಿಬಿಟ್ಟರೆ ಹೆಚ್ಚಿನ ಗೋಳು ಇರುವುದಿಲ್ಲ. ಜೊತೆಗೊಂದು ಸಿಸಿಟಿವಿಯನ್ನೂ ಅಳವಡಿಸಿದರೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಮೇಲೆ ದಂಡ ಹೇರುವ ಸಂಪ್ರದಾಯವನ್ನೂ ಪೊಲೀಸ್ ಇಲಾಖೆ ಪಾಲಿಸಿದರೆ ಸ್ವಲ್ಪ ಮಟ್ಟಿಗೆ ನಿಯಮ ಪಾಲಿಸುವ ನಾಗರಿಕರು ನಿರಾಳತೆ ಅನುಭವಿಸಬಹುದು.