ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸಂಚಾರಿ ಪೇದೆಯ ಮದುವೆ ಆಮಂತ್ರಣ
ನೆಲಮಂಗಲ, ಡಿಸೆಂಬರ್ 16: ಸಂಚಾರಿ ಕಾನ್ಸ್ಟೆಬಲ್ ಮಂಜುನಾಥ್ ನೀಡಿರುವ ಈ ಮದುವೆ ಆಮಂತ್ರಣವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮದುವೆ ಆಮಂತ್ರಣ ಪತ್ರಿಕೆಯೆಂದರೆ ಕುಟುಂಬದವರ ಹೆಸರಿರುತ್ತದೆ, ದೇವರ ಫೋಟೊವಿರುತ್ತದೆ. ಆದರೆ ಈ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಟ್ರಾಫಿಕ್ ನಿಯಮಗಳಿವೆ. ಸಂಚಾರಿ ಪೊಲೀಸ್ ಠಾಣೆಯ ಪ್ರಕಟಣೆಗಳಿವೆ. ಇದಕ್ಕೆ ಹಿರಿಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆಮಂತ್ರಣ ಮುದ್ರಿಸಿ ಆಹ್ವಾನ ನೀಡಿದ್ದಾರೆ. ಇಂದು ಹಾಗೂ ನಾಳೆ ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.
ತಾವು ಕೆಲಸ ನಿರ್ವಹಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಗಳಿಂದ ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರು, ಇದು ಮಂಜುನಾಥ್ ಮೇಲೆ ತೀವ್ರ ಪ್ರಭಾವ ಬೀರಿತ್ತು.
Recommended Video
ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಬೋರ್ಡ್ ಡಿಸೈನ್ ಮಾಡಿಸಿದ್ದಾರೆ. ಜಿ ಮಂಜುನಾಥ್ ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದಾರೆ. ಅವರು ಐದು ವರ್ಷಗಳಿಂದ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.