ನಕಲಿ ಜಾತಿ ಪ್ರಮಾಣಪತ್ರದಿಂದ ಸರ್ಕಾರಿ ನೌಕರಿ ಪಡೆದವರಿಗೆ ಕಾದಿದೆ ಸಂಕಷ್ಟ
ಬೆಂಗಳೂರು, ಜ. 09: ಪರಿಶಿಷ್ಟ ವರ್ಗಗಳ ಜನರಿಗೆ ಮೀಸಲಾಗಿರುವ ಸರ್ಕಾರಿ ಹುದ್ದೆ, ಸೌಲಭ್ಯಗಳನ್ನು ನಕಲಿ ಎಸ್ಟಿ ಜಾತಿ ಪ್ರಮಾಣಪತ್ರದ ಮೂಲಕ ಬೇರೆಯವರು ಪಡೆದು ಕೊಳ್ಳುವುದು ಕರ್ನಾಟಕದಲ್ಲಿ ಹೆಚ್ಚಾಗಿದೆಯಾ? ಹೌದು ಎನ್ನುತ್ತಿದೆ "ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ(NCST)'.
ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ವಾಲ್ಮೀಕಿ ಶ್ರೀ, ರಾಮುಲು
ಖೊಟ್ಟಿ ಪ್ರಮಾಣಪತ್ರದಿಂಧ ಸರ್ಕಾರದ ಸೌಲಭ್ಯ ಹಾಗೂ ಸರ್ಕಾರಿ ನೌಕರಿ ಪಡೆದುಕೊಳ್ಳುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂಬ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಯಿ ಹೇಳಿದ್ದಾರೆ. ಖೊಟ್ಟಿ ಜಾತಿಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯ ಗಿಟ್ಟಿಸಿಕೊಳ್ಳುವವರ ಮೇಲೆ ಶೀಘ್ರ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ನಕಲಿ ಜಾತಿ ಪ್ರಮಾಣಪತ್ರ ಪಡೆಯುವುದರಲ್ಲಿ ಮೇಲ್ವರ್ಗದ ಪಂಡಿತರೂ ಇದ್ದಾರೆ
ಕರ್ನಾಟಕ ರಾಜ್ಯದಲ್ಲಿ ಖೊಟ್ಟಿ ಜಾತಿ ಪ್ರಮಾಣಪತ್ರದ ಮೂಲಕ ಸರ್ಕಾರಿ ಸೌಲಭ್ಯ, ನೌಕರಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆಘಾತಕಾರಿ ವಿಷಯವನ್ನು ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಯಿ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖೊಟ್ಟಿ ಎಸ್ಟಿ ಜಾತಿ ಪ್ರಮಾಣಪತ್ರದಿಂದ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಕರ್ನಾಟಕದಲ್ಲೂ ಹೆಚ್ಚಾಗಿದೆ. ಹಾಗೇ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರದ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಗಿರಿಜನ, ನಕಲಿ ಜಾತಿಪ್ರಮಾಣ ಪತ್ರದ ಮೂಲಕ ಬುಡಕಟ್ಟು ಜನರಿಗೆ ಮೀಸಲಾದ ಹುದ್ದೆಗಳನ್ನು ಪಡೆದುಕೊಂಡವರ ಮೇಲೆ ತಕ್ಷಣ ಕ್ರಮಕ್ಕೆ ಮುಂದಾಗಿದ್ದೇವೆ. ರಾಜ್ಯ ಸರ್ಕಾರದ ಸಹಾಯದಿಂದ ಅಂಥವರ ಮೇಲೆ ತಕ್ಷಣಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ ಲಕ್ಷಾಂತರ ಜನರು ನಕಲಿ ಜಾತಿಪ್ರಮಾಣ ಪತ್ರದ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮೇಲ್ಜಾತಿಗೆ ಸೇರಿರುವ ಪಂಡಿತರೂ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರದಿಂದ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ನಕಲಿ ಜಾತಿ ಪ್ರಮಾಣಪತ್ರ ಪಡೆದ ಎಲ್ಲರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ನಂದಕುಮಾರ್ ಸಾಯಿ ಎಚ್ಚರಿಕೆ ಕೊಟ್ಟಿದ್ದಾರೆ.
ಸಿಎಂ ಭೇಟಿ ಮಾಡಿ ಮೀಸಲಾತಿ ಹೆಚ್ಚಳಕ್ಕೆ ಮನವಿ
ಕರ್ನಾಟಕದಲ್ಲಿ ಬುಡಕಟ್ಟು ಜನರ ಪ್ರಮಾಣ ಶೇಕಡಾ 7 ರಷ್ಟಿದೆ, ಆದರೆ ಮಿಸಲಾತಿ ಕಡಿಮೆ ಇದೆ ಎಂದು ನಂದಕುಮಾರ್ ಸಾಯಿ ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯದಲ್ಲಿ ಶೇಕಡಾ 7 ರಷ್ಟು ಇರುವ ಜನರಿಗೆ ಕೇವಲ ಶೇಕಡಾ 3 ರಷ್ಟು ಮೀಸಲಾತಿ ಸಕಾಗುವುದಿಲ್ಲ. ಹಾಗಾಗಿ ಅದನ್ನು ಶೇ. 7.5 ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಮೀಸಲಾತಿ ಹೆಚ್ಚಿಸುವುದರ ಬಗ್ಗೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಮ್ಮನ್ನು ಭೇಟಿ ಮಾಡಿದ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ ಅಧ್ಯಕ್ಷ ನಂದಕುಮಾರ್ ಸಾಯಿ ಅವರಿಗೆ ಸಿಎಂ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಿತಿ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದಾರೆ.
ಸಮುದಾಯಕ್ಕೆ ಸೇರಿದ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಮನವಿ
ಗಿರಿಜನರ ನೇಮಕಾತಿ ಪ್ರಮಾಣ ಕಡಿಮೆ ಇದೆ. ಗಿರಿಜನ ಬುಡಕಟ್ಟು ಜನರಿಗೆ ಮೀಸಲಾದ ಹುದ್ದೆಗಳಲ್ಲಿ ಇನ್ನೂ ಶೇಕಡಾ 50 ರಷ್ಟು ಹುದ್ದೆಗಳು ಖಾಲಿ ಇವೆ. ಎಸ್ಟಿ ಸಮುದಾಯಕ್ಕೆ ಸೇರಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ನಂದಕುಮಾರ್ ಸಾಯಿ ಮನವಿ ಮಾಡಿಕೊಂಡಿದ್ದಾರೆ. ಇದಲ್ಲದೆ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಕೊರತೆ ಇದೆ. ಗಿರಿಜನ ಬುಡಕಟ್ಟು ಪ್ರದೇಶದಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಅವುಗಳ ಶೀಘ್ರ ಭರ್ತಿಗೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಎಸ್ಟಿ ಸಮುದಾಯದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ನಂದಕುಮಾರ್ ಸಾಯಿ ಸೂಚಿಸಿದ್ದಾರೆ.
ಇದಲ್ಲದೆ ಪಾರಂಪರಿಕ ಆರೋಗ್ಯ ಪದ್ದತಿ ಮಾಡುವವರಿಗೆ ಸೂಕ್ತ ತರಬೇತಿ ಕೊಟ್ಟು, ಅವರ ಆರೋಗ್ಯ ಪದ್ಧತಿಯನ್ನು ಆಯುಷ್ ಇಲಾಖೆ ಮೂಲಕ ಪ್ರೋತ್ಸಾಹ ನೀಡುವಂತೆ ಸೂಚಿಸಿದ್ದಾರೆ. ಆರೋಗ್ಯ ಇಲಾಖೆ ಗುಡ್ಡಗಾಡು ಪ್ರದೇಶದಲ್ಲಿ ಮಾಡಿರುವ ಮೊಬೈಲ್ ಆರೋಗ್ಯ ವಾಹನ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡುವಂತೆ ಸಾಯಿ ಸೂಚಿಸಿದ್ದಾರೆ.
ಭಗವಾನ್ ಹನುಮಾನ್ ಎಸ್ಟಿ ಸಮುದಾಯಕ್ಕೆ ಸೇರಿದವನು ಎಂದಿದ್ದ ಸಾಯಿ
ಛತ್ತೀಸಗಡ ಮೂಲದ ಬಿಜೆಪಿಯ ಎಸ್ಟಿ ಸಮುದಾಯದ ನಾಯಕ ನಂದಕುಮಾರ್ ಸಾಯಿ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ ಅಧ್ಯಕ್ಷ ನಂದಕುಮಾರ್ ಸಾಯಿ. ಅವರು ಈ ಹಿಂದೆ ಹನುಮಂತ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂಬ ಹೇಳಿಕೆ ಕೊಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.
ಅದಕ್ಕೂ ಮೊದಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಹನುಮಂತ ಒಬ್ಬ ಅರಣ್ಯವಾಸಿ, ಎಲ್ಲ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.