Navratri 2022: ಬೆಂಗಳೂರಿನ ವಿವಿಧೆಡೆ 2 ದಿನ ಮದ್ಯ ಮಾರಾಟ ನಿಷೇಧ
ಬೆಂಗಳೂರು, ಅ. 4: ದಸರಾ ಹಬ್ಬದ ನಿಮಿತ್ತ ನಗರದಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಕ್ಟೋಬರ್ 5ಬುಧವಾರ ಬೆಳಗ್ಗೆ 7 ಗಂಟೆಯಿಂದ ಅಕ್ಟೋಬರ್ 6 ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ಹಾಕಲಾಗಿದೆ.
ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಮಧ್ಯ ಬೆಂಗಳೂರು ಮತ್ತು ಈಶಾನ್ಯ ಬೆಂಗಳೂರಿನ ಹಲವು ಭಾಗಗಳಲ್ಲಿ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿಎಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ದಸರಾ 2022: ರಾವಣನಿಗೆ 10 ತಲೆಗಳು ಏಕೆ? ಇದರ ಅರ್ಥವೇನು?
ಬೆಂಗಳೂರಿನ ಎಲ್ಲೆಡೆ ಮದ್ಯ ಮಾರಾಟ ನಿಷೇಧ ಇರುವುದಿಲ್ಲ. ಕೆಲ ಅಯ್ದ ಸ್ಥಳಗಳಲ್ಲಿ ಕ್ರಮ ಜಾರಿಯಲ್ಲಿರುತ್ತದೆ. ನಿಷೇಧಿತ ವಲಯದಲ್ಲಿ ಯಾವುದೇ ಎಂಎಸ್ಐಎಲ್ ಅಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ಬಿಯರ್ ಮತ್ತು ವೈನ್ ಸ್ಟೋರ್ಗಳು ಮತ್ತು ಪಬ್ಗಳನ್ನು ಎರಡು ದಿನ ತೆರೆಯಲು ಅವಕಾಶ ಇರುವುದಿಲ್ಲ. ಆದರೆ, ಸ್ಟಾರ್ ಹೋಟೆಲ್ ಮತ್ತು ಕ್ಲಬ್ಗಳಲ್ಲಿ ಮದ್ಯ ಮಾರಾಟಕ್ಕೆ ತಡೆ ಇರುವುದಿಲ್ಲ.
ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?
ಉತ್ತರ ಬೆಂಗಳೂರು: ಆರ್ಟಿ ನಗರ, ಜೆಸಿ ನಗರ, ಸಂಜಯನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುತ್ತದೆ.
ಪೂರ್ವ ಬೆಂಗಳೂರು: ಭಾರತಿನಗರ, ಪುಲಕೇಶಿನಗರ, ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ.
ಮಧ್ಯ ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇದೆ.
ಈಶಾನ್ಯ ಬೆಂಗಳೂರು: ಅಮೃತಹಳ್ಳಿ ಮತ್ತು ಕೊಡಿಗೇಹಳ್ಳಿಯಲ್ಲಿ ಮದ್ಯ ಮಾರಾಟ ಇರುವುದಿಲ್ಲ.
ಈ ಮೇಲಿನ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರದಂದು ಪೊಲೀಸರು ಕಣ್ಗಾವಲು ಇರಿಸಲಿದ್ದು, ಮದ್ಯದಂಗಡಿ ತೆರೆದಿರದಂತೆ ಎಚ್ಚರ ವಹಿಸಲಿದ್ದಾರೆ.
ಉತ್ತರ ಭಾರತೀಯರ ಪ್ರಭಾವ
ಬೆಂಗಳೂರಿನಲ್ಲಿ ದಸರಾ, ನವರಾತ್ರಿ ಸಂಭ್ರಮ ಬಹಳ ಜೋರಾಗಿದೆ. ಬಂಗಾಳಿ, ಒಡಿಯಾ, ಅಸ್ಸಾಮೀ ಸಮುದಾಯದವರು ಬಹಳ ಸಂಖ್ಯೆಯಲ್ಲಿರುವುದರಿಂದ ನಗರದ ವಿವಿಧೆಡೆ ದುರ್ಗಾ ಪೆಂಡಾಲ್ಗಳು ಸ್ಥಾಪನೆಯಾಗಿರುವುದನ್ನು ಕಾಣಬಹುದು. ಬೆಂಗಳೂರಿನ ಸ್ಥಳೀಯರೂ ಕೂಡ ಇತ್ತೀಚಿನ ವರ್ಷಗಳಲ್ಲಿ ನವರಾತ್ರಿಯ ಹಬ್ಬದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚುತ್ತಿದೆ.
ಆಯುಧ ಪೂಜೆ ಸಂಭ್ರಮ
ಆಯುಧಪೂಜೆಯಾದ ಇಂದು ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ಅಂಗಡಿಗಳನ್ನು ಸ್ವಚ್ಛಗೊಳಿಸಿ ತೋರಣ ಕಟ್ಟಿ ಪೂಜೆ ಮಾಡಲಾಗಿದೆ. ವಾಹನಗಳಿಗೂ ಪೂಜೆ ಮಾಡಲಾಗುತ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಪೈಕಿ ಇಂದು ಆಯುಧಪೂಜೆಯಂದು ಹೂವಿಗೆ ವಿಪರೀತ ಬೇಡಿಕೆ ಬಂದಿದ್ದು, ಬೆಂಗಳೂರಿನಲ್ಲಿ ಒಂದು ಮೊಳ ಮಲ್ಲಿಗೆ ಹೂವು 80ರಿಂದ 150 ರೂವರೆಗೂ ಬೆಲೆಗೆ ಮಾರಾಟವಾಗುತ್ತಿದೆ.
ವಿಜಯದಶಮಿಗೆ ಪೊಲೀಸ್ ಕಣ್ಗಾವಲು
ವಿಜಯದಶಮಿಯಂದು ನಗರದ ವಿವಿಧೆಡೆ ರಾಮಲೀಲಾ ಮತ್ತು ರಾವಣದಹನ ಕಾರ್ಯಕ್ರಮಗಳು ನಡೆಯಲಿವೆ. ಆರ್ಟಿ ನಗರ, ಜೆಸಿ ನಗರ, ಹೆಬ್ಬಾಳ, ಡಿಜೆ ಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿಜಯದಶಮಿಯಂದು ಅನೇಕ ಮೆರವಣಿಗೆಗಳು ಹೋಗಲಿವೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೊಲೀಸರು ಮುಂಜಾಗ್ರತಾ ವ್ಯವಸ್ಥೆ ಏರ್ಪಡಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)