ಡಿಜೆ ಹಳ್ಳಿ ಗಲಭೆಗೆ ನವೀನ್ ಫೇಸ್ಬುಕ್ ಪೋಸ್ಟ್ ಕಾರಣವಲ್ಲ: ಸಚಿವ ಅರವಿಂದ್ ಲಿಂಬಾವಳಿ!
ಬೆಂಗಳೂರು, ಫೆ. 25: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬೆಂಗಳೂರಿನ ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ನವೀನ್ ಹಾಕಿದ್ದ ಫೇಸ್ಬುಕ್ ಕಮೆಂಟ್ ಕಾರಣವಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಅವರು ಹೇಳಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, ನವೀನ್ ಫೇಸ್ಬುಕ್ನಲ್ಲಿ ಕಮೆಂಟ್ ಹಾಕುವ ಮೊದಲೇ ಕೃಷ್ಣಜನ್ಮಾಷ್ಟಮಿಯಂದು ಹಿಂದೂ ಧರ್ಮ ಮತ್ತು ದೇವತೆಗಳನ್ನು ಅವಹೇಳನ ಮಾಡಿ ಫೈರೋಜ್ ಪಾಷ ಎಂಬ ಎಸ್ಡಿಪಿಐ ಕಾರ್ಯಕರ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಎಂದು ಅರವಿಂದ್ ಲಿಂಬಾವಳಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಎಸ್ಡಿಪಿಐ ಕಾರ್ಯಕರ್ತ ಫೈರೋಜ್ ಪಾಷ ಮಾಡಿದ್ದ ಫೇಸ್ಬುಕ್ ಪೋಸ್ಟ್ಗೆ ನವೀನ್ ಕೇವಲ ಕಮೆಂಟ್ ಮೂಲಕ ತನ್ನ ಪ್ರತಿಕ್ರಿಯೆ ಹಾಕಿದ್ದ. ಅದನ್ನೇ ಆಧಾರವಾಗಿಟ್ಟುಕೊಂಡು ಜನರನ್ನು ಉದ್ರಿಕ್ತಗೊಳಿಸಿ ಗಲಭೆ ಮಾಡಿಸಲಾಗಿದೆ. ಇದನ್ನೇ ನಾವು ಬಿಜೆಪಿಯಿಂದ ನೇಮಕವಾಗಿದ್ದ ಸತ್ಯಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದೆವು. ನಮ್ಮ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊಟ್ಟಿದ್ದೇವು. ಈಗ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲೂ ಇವೆ ಅಂಶಗಳನ್ನೇ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡುವಂತೆಯೂ ನಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದೆವು ಎಂದು ಅರವಿಂದ್ ಲಿಂಬಾವಳಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ: 2020ರ ಆ.11ರಂದು ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಯಲ್ಲಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಅವರ ಅಳಿಯ ನವೀನ್ ಮನೆ, ಪೊಲೀಸ್ ಮತ್ತು ಖಾಸಗಿ ವಾಹನಗಳು ಸೇರಿ ಹಲವು ವಾಹನಗಳು, ಮನೆಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದರು.
Recommended Video
ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿಸಿರುವ ಎನ್ಐಎ ಬಾಬ್ರಿ ಮಸೀದಿ ಕುರಿತು ಸುಪ್ರೀಂ ತೀರ್ಪು, ಸಿಎಎ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ತ್ರಿವಳಿ ತಲಾಕ್ ರದ್ದು ವಿಚಾರವಾಗಿ ಕೇಂದ್ರ ಸರಕಾರದ ವಿರುದ್ಧ ಹಿಂದೂ ಸಮುದಾಯವನ್ನು ಕೆರಳಿಸಲು ಎಸ್ಡಿಪಿಐ ಮತ್ತು ಪಿಎಫ್ಐನ ಮುಖಂಡರು ಸಂಚು ನಡೆಸಿದ್ದರು. ಆ ಸಂಚಿನ ಹಿನ್ನೆಲೆಯಲ್ಲಿ ಡಿ.ಜೆ ಹಳ್ಳಿ ಗಲಭೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.