ಚಿಕ್ಕಮಗಳೂರಿನ ಸರಗಳ್ಳ ವೇದಾವತಿ ನದಿ ಪುನಶ್ಚೇತನದ ರೂವಾರಿ
ಬೆಂಗಳೂರು, ಡಿಸೆಂಬರ್ 4 : ಚಿಕ್ಕಮಗಳೂರಿನಲ್ಲಿ ಸರಗಳ್ಳತನದಲ್ಲಿ ದಾಖಲೆಯನ್ನೇ ಸೃಷ್ಟಿಸಿದ್ದ, ಈಗ ಪರಿವರ್ತಿತನಾದ ಓರ್ವ ವ್ಯಕ್ತಿಯು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ವೇದಾವತಿ ನದಿಯ ಪುನಶ್ಚೇತನ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದ್ದಾರೆ.
ಛತ್ತೀಸ್ ಘಡದ ಓರ್ವ ಎಲೆಕ್ಟ್ರಿಷಿಯನ್ ತನ್ನ ಇಡೀ ಹಳ್ಳಿಯು ಪೂರ್ಣವಾಗಿ ಬಹಿರಂಗ ಶೌಚ ಮುಕ್ತವಾಗಿಸಲು ಪ್ರೇರೇಪಿಸಿದ್ದು, ಆತನ ರಾಜ್ಯದಲ್ಲಿ ಈ ರೀತಿಯ ಕಾರ್ಯ ಮೊದಲನೆಯದ್ದಾಗಿದೆ.
ಆಂಧ್ರಪ್ರದೇಶದ ಪರಿವರ್ತಿತನಾದ ಮದ್ಯ ವ್ಯಸನಿಯೋರ್ವರು ತಮ್ಮ ರಾಜ್ಯದ ಮುಖ್ಯಮಂತ್ರಿಗಳಿಂದ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಶಸ್ತಿಯನ್ನು ಪಡೆದರು. ಅವರು ಮಾದಕ ವ್ಯಸನ ಮುಕ್ತಿ ಕಾರ್ಯಗಳನ್ನು ಮಾಡಿದ್ದಲ್ಲದೆ, ಅನೇಕ ಹಳ್ಳಿಗಳಲ್ಲಿ ಶುದ್ಧ ನೀರನ್ನು ತರುವುದರಲ್ಲೂ ಯಶಸ್ವಿಗಳಾದರು.
ಗ್ರಾಮೀಣ ಭಾರತವನ್ನು ಪರಿವರ್ತಿಸಲು ಯುವಕರು ಹೊಂದಿದ್ದ ಬದ್ಧತೆಯು ಅದ್ಭುತವಾದದ್ದು. 26 ರಾಜ್ಯಗಳಿಂದ ಬಂದಿದ್ದ 2600 ಯುವಾಚಾರ್ಯರು ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಪ್ರಥಮ "ರಾಷ್ಟ್ರೀಯ ಗ್ರಾಮೀಣ ಯುವಕರ ಸಮಾವೇಶದಲ್ಲಿ" ಭಾಗವಹಿಸಿದರು.
"ವ್ಯಕ್ತಿ ವಿಕಾಸ್ ಸೇ ರಾಷ್ಟ್ರ ವಿಕಾಸ್" ಎಂಬ ಆರ್ಟ್ ಆಫ್ ಲಿವಿಂಗ್ ನ ಯುವಕ ನಾಯಕತ್ವ ತರಬೇತಿಯಡಿಯಲ್ಲಿ (ವೈಎಲ್ಟಿಪಿ) ರೂಪಿಸಲಾದ ಈ ಎರಡು ದಿವಸಗಳ ಸಮಾವೇಶದಲ್ಲಿ, ಭಾರತದ 6.5 ಲಕ್ಷ ಹಳ್ಳಿಗಳಿಗೆ ಒಂದು ಯುವಾಚಾರ್ಯರನ್ನು ತಯಾರಿಸಿ, ಅವರು ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಆಳವಾದ ಸಾಮಾಜಿಕ ಪರಿವರ್ತನೆಯನ್ನು ತರುವ ಯೋಜನೆಗಳ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಾರೆ ಎಂಬ ಗುರಿಯನ್ನು ಹೊಂದಲಾಗಿದೆ.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ ಶ್ರೀ ಶ್ರೀ ರವಿಶಂಕರರು, "ಯುವಕರ ಲಕ್ಷಣಗಳೆಂದರೆ ಉತ್ಸಾಹ, ಸವಾಲುಗಳನ್ನು ಎದುರಿಸಲು ಸಿದ್ಧತೆ ಮತ್ತು ಜೀವನದಲ್ಲೊಂದು ಗುರಿ. ಈ ಮೂರೂ ಇದ್ದರೆ ನೀವು ಯಶಸ್ವಿಗಳಾಗುತ್ತೀರಿ. ಭಾರತವು ಸ್ವ ಉದ್ದಿಮೆತನವನ್ನು ಮತ್ತು ಕುಶಲ ತರಬೇತಿಯನ್ನು ಅಪಾರ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಯುವಕರಿಗೆ ಕಿವಿಮಾತು ಹೇಳಿದರು.
ವೈಎಲ್ಟಿಪಿಯ ಅಡಿಯಲ್ಲಿ 2,22,568 ನಾಯಕರು ಆರ್ಟ್ ಆಫ್ ಲಿವಿಂಗ್ ನ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. 33 ನದಿಗಳ ಪುನಶ್ಚೇತನ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. 22 ಲಕ್ಷ ರೈತರಿಗೆ ಸಹಜ ಕೃಷಿಯಲ್ಲಿ ತರಬೇತಿ ನೀಡಿದ್ದಾರೆ. ಅನೇಕ ಮಾದರಿ ಹಳ್ಳಿಗಳನ್ನು ತಯಾರಿಸುವಲ್ಲಿ ಮುಂದಾಗಿದ್ದಾರೆ. ತಮ್ಮ ಸಮುದಾಯಗಳನ್ನು ಬಹಿರಂಗ ಶೌಚ ಮುಕ್ತವಾಗಿ ಮಾಡಿದ್ದಾರೆ. ಸಾವಿರಾರು ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಿದ್ದಾರೆ ಮತ್ತು 3,50,000 ಕೈದಿಗಳ ಪುನಶ್ಚೇತನದಲ್ಲಿ ಸಹಾಯ ಮಾಡಿದ್ದಾರೆ.
ಸ್ಫೂರ್ತಿದಾಯಕವಾದ ಕಥೆಗಳನ್ನು ಪರಸ್ಪರ ಹಂಚಿಕೊಳ್ಳುವುದರೊಂದಿಗೆ, ತಜ್ಞರು ಅವರಿಗೆ ಸಹಜ ಕೃಷಿ, ಗ್ರಾಮೀಣ ಬ್ಯಾಂಕ್, ನದಿಗಳ ಪುನಶ್ಚೇತನ, ಮಾದರಿ ಹಳ್ಳಿಗಳ ನಿರ್ಮಾಣದ ಬಗ್ಗೆಯೂ ತರಬೇತಿ ನೀಡುತ್ತಲಿದ್ದಾರೆ. ತರಬೇತಿ ಪಡೆದವರು ಯುವಾಚಾರಯರಾಗಿದ್ದು, ಮಾದಕ ವ್ಯಸನ ಮುಕ್ತಿ, ಮಾದರಿ ಹಳ್ಳಿ ನಿರ್ಮಾಣ, ನದಿ ಪುನಶ್ಚೇತನ, ಗಿಡ ನೆಡುವಂತಹ ಪರಿಸರ ಸ್ನೇಹಿ ಕಾರ್ಯ, ಪರಂಪರೆಯ ಸಂರಕ್ಷಣೆ, ಇತ್ಯಾದಿ ಕಾರ್ಯಗಳಲ್ಲಿ ತೊಡಗುತ್ತಾರೆ.