ಭೂಸ್ವಾದೀನ ಕಾಯ್ದೆ ತಿದ್ದುಪಡಿ; ರಾಷ್ಟ್ರೀಯ ಹೆದ್ದಾರಿ ಬಂದ್
ಬೆಂಗಳೂರು, ಜೂನ್ 8: ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಜೂನ್ 10, ಸೋಮವಾರದಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆದ್ದಾರಿ ತಡೆ ಮಾಡುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಕೇಳಿದ್ದಷ್ಟು ಸಿಕ್ಕಿಲ್ಲ, ಸಂಪೂರ್ಣ ನ್ಯಾಯ ದಕ್ಕಿಲ್ಲ, ಹೋರಾಟ ನಿಲ್ಲಲ್ಲ
2013ರ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಇದು ರೈತವಿರೋಧಿಯಾಗಿದೆ. ರೈತರಿಗೆ ಈ ತಿದ್ದುಪಡಿಯು ಮರಣಶಾಸನವಾಗಿದೆ. ಆದ್ದರಿಂದ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಈ ಮೂಲಕ ಸರ್ಕಾರದ ಗಮನವನ್ನು ಸೆಳೆಯಲು ಯತ್ನಿಸಲಾಗುತ್ತಿದೆ. ಈ ಚಳುವಳಿಯು ರೈತನ ಬದುಕಿನ ಹೋರಾಟ ಎಂದು ಅವರು ಹೇಳಿದ್ದಾರೆ.
ಕಾಯ್ದೆಯ ಪ್ರಕಾರ, ರೈತರ ಜಮೀನು ಪಡೆಯುವಾಗ ಅವರ ಅನುಮತಿ ಮೇರೆಗೆ ಭೂಸ್ವಾಧೀನಪಡಿಸಿಕೊಂಡು ಅವಶ್ಯಕ ಪರಿಹಾರ ಹಣ ನೀಡಬೇಕು. ಪರಿಹಾರ ಹಣ ರೈತರಿಗೆ ತೃಪ್ತಿಕರವಲ್ಲದಿದ್ದ ಪಕ್ಷದಲ್ಲಿ ನ್ಯಾಯಾಲಯದ ಮೊರೆಹೋಗಬಹುದಿತ್ತು. ಆದರೆ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.