ಬಿಜೆಪಿಗೆ ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಟ್ಟ ವೃತ್ತಾಂತ ಹೇಳಿದ ಸಿದ್ದು!
ಬೆಂಗಳೂರು, ಜೂನ್ 15: ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸಂವಿಧಾನತ್ಮಕವಾಗಿ ಪ್ರತಿಭಟಿಸುವ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸುಮ್ಮನೆ ಕರೆಸಿ ಕಿರುಕುಳವನ್ನು ನೀಡುತ್ತಿದೆ. ಇದನ್ನು ಖಂಡಿಸಿ ನಾಳೆ(ಜೂನ್16) ರಂದು ರಾಜಭವನ ಚಲೋ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.
ಬಿಜೆಪಿ ಸರ್ಕಾರದ ವಿರುದ್ದ ಡಿಕೆ ಶಿವಕುಮಾರ್ ಗರಂ; ಐಟಿಯವರು ಹಿಂದೆಯೇ ಈ ಕೇಸ್ ಅನ್ನು ಕ್ಲೋಸ್ ಮಾಡಿದ್ದರು. ಸುಬ್ರಹ್ಮಣ್ಯಸ್ವಾಮಿ ಕಂಪ್ಲೇಂಟ್ ಕೊಟ್ಟರು ಅಂತಾ ಹೀಗೆ ಮಾಡುತ್ತಿದ್ದಾರೆ. ಕಿರುಕುಳ ಕೊಡಬಾರದು ಅಂತಾ ಕೋರ್ಟ್ ಹೇಳಿದರೂ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಕರೆಂಟ್ ವ್ಯಾಲ್ಯೂ ಲೆಕ್ಕ ಹಾಕಿ ತೋರಿಸುತ್ತಿದ್ದಾರೆ. 2000 ಕೋಟಿ ಅಂತಾ ಬಿಂಬಿಸುತ್ತಿದ್ದಾರೆ. ಬಿಜೆಪಿ ನಾಯಕರ ತಲೆಯಲ್ಲಿ ಸಗಣಿ ತುಂಬಿದೆ ಯಾರು ಯಾರೂ ಮಾತಾಡ್ತಾರೆ. ನನ್ನ ಬಳಿ ಚರ್ಚೆಗೆ ಬರಲಿ, ಯಾವ ಆಸ್ತಿ ಕೂಡ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಫಿಡವಿಟ್ನಲ್ಲಿ ಘೋಷಣೆ ಮಾಡಿಕೊಂಡಿಲ್ಲ. ಈ ಆಸ್ತಿಗಳನ್ನು ಟ್ರಸ್ಟಿಯಾಗಿ ನಾವು ನೋಡಿಕೊಳ್ಳುತ್ತಿದ್ದೇವೆ. ಒಂದು ಫಾರ್ಮ್ ಹೌಸ್ ಬಿಟ್ಟರೆ ಇರುವುದಕ್ಕೆ ಒಂದು ಮನೆ ಇಲ್ಲ ಅವರಿಗೆ ಅಹಮದಾಬಾದ್ನಲ್ಲಿರೋ ಮನೆಯನ್ನು ದಾನ ಮಾಡಿದ್ದಾರೆ.
"20 ಸಾವಿರ ಕೋಟಿ ಬೆಲೆಯ ಮನೆ ಕೊಟ್ಟಿದ್ದಾರೆ, ಅದನ್ನು ಮ್ಯೂಸಿಯಂ ಮಾಡಿದ್ದಾರೆ. ಅಂಥ ಕುಟುಂಬಕ್ಕೆ ಮನಿ ಲಾಂಡರಿಂಗ್ ಮಾಡಿದ್ದಾರೆ. ಅಂತೀರಲ್ಲಾ, ನಾಚಿಕೆ ಆಗಲಿಲ್ಲವೇ ನಿಮಗೆ. ಜೈಲಿಗೆ, ಕೇಸಿಗೆ ನಾವು ಹೆದರಲ್ಲ ಎಲ್ಲದಕ್ಕೂ ರೆಡಿಯಾಗಿದ್ದೇವೆ. ರಾಹುಲ್ ಗಾಂಧಿ ಕೂಡ ಉತ್ತರ ಕೊಡುತ್ತಾರೆ" ಎಂದು ಡಿ. ಕೆ. ಶಿವಕುಮಾರ್ ಬಿಜೆಪಿ ವಿರುದ್ದ ಗರಂ ಆದರು.
ರಾಜಭವನ ಚಲೋ ಶತಃಸಿದ್ಧ; ನಮ್ಮ ಪಾರ್ಟಿ ಕಚೇರಿ ನಮಗೆ ದೇವಸ್ಥಾನ. ನಮ್ಮ ಕಚೇರಿಗೂ ಹೋಗುವುದಕ್ಕೂ ಬಿಡದೇ ಅರೆಸ್ಟ್ ಮಾಡಿದ್ದಾರೆ. ಇದ್ಯಾವ ಪೊಲೀಸ್ ವ್ಯವಸ್ಥೆ?. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಷ್ಟೇ ಸುಳ್ಳು ಕೇಸ್ ಹಾಕಿದರೂ ಸತ್ಯ ಮುಚ್ಚಿ ಹಾಕುವುದಕ್ಕೆ ಸಾಧ್ಯವಿಲ್ಲ ಸೂರ್ಯ ಹುಟ್ಟುವುದು, ಮುಳುಗುವುದು ಎಷ್ಟು ಸತ್ಯಾವೋ ಬಿಜೆಪಿಗೂ ಅದೇ ರೀತಿ ಆಗುತ್ತದೆ.
ಮೀಟಿಂಗ್ ಮಾಡುವುದಕ್ಕೆ ಬಿಡುತ್ತಿಲ್ಲ. ದನಗಳನ್ನು ಎಳೆದುಕೊಂಡು ಹೋಗುವ ರೀತಿ ಹೋಗುತ್ತಿದ್ದಾರೆ. ಗುರುವಾರ ಕಾಂಗ್ರೆಸ್ ಕಚೇರಿಯಿಂದ ರಾಜಭವನ ಮುತ್ತಿಗೆ. ಹಾಲಿ, ಮಾಜಿ, ಎಂಪಿ, ಎಂಎಲ್ಸಿಗಳೆಲ್ಲ ಭಾಗಿಯಾಗುತ್ತಾರೆ. ಜಿಲ್ಲಾ ಘಟಕಗಳಲ್ಲೂ ಪ್ರತಿಭಟನೆಗಳು ಮಾಡಲಿದ್ದೇವೆ, ನೀವೆಷ್ಟು ಕೇಸ್ ಬೇಕಾದರೂ ಹಾಕಿ, ಜೈಲಿಗಾದರೂ ಹಾಕಿ, ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ.
"ಬಿಜೆಪಿ ಮುಖಂಡರ ಒಬ್ಬೇ ಒಬ್ಬನ ಮೇಲೂ ಕೇಸ್ ಹಾಕಿಲ್ಲ, ನಮ್ಮನ್ನ ಮಾನಸಿಕವಾಗಿ ಕುಗ್ಗಿಸಲು ನಿಮ್ಮಿಂದ ಆಗಲ್ಲ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಸಂವಿಧಾನಿಕ ಹಕ್ಕನ್ನು ಹತ್ತಿಕ್ಕುತ್ತಿದೆ ಬಿಜೆಪಿ; "ಕಳೆದ ಮೂರು ದಿನಗಳಿಂದ ರಾಹುಲ್ ಗಾಂಧಿ ವಿಚಾರಣೆ ಮಾಡುತ್ತಿದ್ದಾರೆ. ಪ್ರತೀ ದಿನ 9-10 ಗಂಟೆಗಳ ಕಾಲ ವಿಚಾರಣೆ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಇವರೆಲ್ಲಾ ಟ್ರಸ್ಟಿ ಅಷ್ಟೇ ಸುಳ್ಳು ಕೇಸ್ ಹಾಕಿದ್ದಾರೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಕಾನೂನು ಪ್ರಕ್ರಿಯೆ ಬಗ್ಗೆ ನಮ್ಮ ವಿರೋಧ ಇಲ್ಲ ರಾಜಕೀಯ ದ್ವೇಷದಿಂದ ಕಿರುಕುಳ ಕೊಡುತ್ತಿದ್ದಾರೆ. ಬ್ರಿಟಿಷ್ ಅವರ ಕಾಲದಲ್ಲೂ ಇಂಥ ಘಟನೆಗಳು ನಡೆದಿಲ್ಲ. ನಾನು ಇತಿಹಾಸ ಓದಿದ್ದೇನೆ ದೇಶಕ್ಕಾಗಿ ಜೈಲಿಗೆ ಹೋಗಿದ್ದಾರೆ, ತ್ಯಾಗ, ಬಲಿದಾನ ಮಾಡಿದ್ದಾರೆ. ಎಐಸಿಸಿ ಧ್ಯೇಯೋದ್ದೇಶಗಳ ಮೇಲೆಯೇ ದೌರ್ಜನ್ಯ ಮಾಡುತ್ತಿದ್ದಾರೆ. ಇದನ್ನು ಪೊಲೀಸ್ ರಾಜ್ಯ ಅಂತಾ ಕರೆಯಬೇಕಾ?. ಅಘೋಷಿತ ತುರ್ತು ಪರಿಸ್ಥಿತಿ ಅಂತಾ ಕರೆಯಬೇಕಾ?. ಎಐಸಿಸಿ ಕಚೇರಿಗೆ ಪೊಲೀಸರು ನುಗ್ಗಿ, ಹೊಡೆದು ಓಡಿಸಿದ್ದಾರೆ. ಇಂಥ ಘಟನೆ ಯಾವತ್ತಾದರೂ ನಡೆದಿತ್ತೇ?. ಪ್ರತಿಭಟನೆ ಮಾಡುವುದು ಸಂವಿಧಾನಾತ್ಮಕ ಹಕ್ಕು. ಸಂವಿಧಾನ ಎಂಬುವುದು ಮೂಲಭೂತವಾದ ಹಕ್ಕು. ಸರ್ಕಾರಕ್ಕೆ ಅಧಿಕಾರವಿಲ್ಲ. ಕಾನೂನುಗಳನ್ನು ಹತ್ತಿಕ್ಕುವುದು ಪ್ರತಿಭಟನೆ ಹತ್ತಿಕ್ಕುವುದು ಸರಿಯಲ್ಲ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಗೇಡುಗಾಲ ಬಂದಿದೆ ಎಂದ ಸಿದ್ದು; "ಬಿಜೆಪಿಗೆ ಕೇಡುಗಾಲ ಬಂದಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಎನ್ನುವಂತೆ ಆಗುತ್ತದೆ. ರಾಜಭವನ ಮುತ್ತಿಗೆ ಹಾಕಲಿದ್ದೇವೆ. ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ, ಬಿಪಿಯ ಅಂಗ ಸಂಸ್ಥೆಗಳು ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಅಮಿತ್ ಶಾ, ನರೇಂದ್ರ ಮೋದಿ ಸ್ವಾತಂತ್ರದ ಫಲಾನುಭವಿಗಳು ಅದಕ್ಕೋಸ್ಕರವೇ ತುರ್ತು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ದೆಹಲಿ ನಡೆಯುತ್ತಿರುವ ಘಟನೆಯನ್ನು ಪ್ರದೇಶ ಕಾಂಗ್ರೆಸ್ ಖಂಡಿಸುತ್ತದೆ. ಜನ ದಂಗೆಯೇಳುವ ಕಾಲ ಸಮೀಪಿಸುತ್ತಿದೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.