ಪಕ್ಷ ಏನೇ ನಿರ್ಧಾರ ಕೈಗೊಳ್ಳಲಿ, ದೇಶಕ್ಕಾಗಿ ದುಡಿಯೋಣ : ತೇಜಸ್ವಿನಿ
ಬೆಂಗಳೂರು, ಮಾರ್ಚ್ 25 : ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲು ತಡ ಮಾಡುತ್ತಿರುವುದು, ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ತಳಮಳವನ್ನು ಉಂಟು ಮಾಡಿದೆ.
ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಮನದಲ್ಲಿ ಏನಿದೆಯೋ ಯಾರಿಗೂ ತಿಳಿದಿಲ್ಲ. ಬರೀ ಊಹಾಪೋಹದ ಮಾತುಗಳು ಕೇಳಿಬರುತ್ತಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೂತೂಹಲ ತಡೆದುಕೊಳ್ಳಲಾರದ ಅನಂತ್ ಕುಮಾರ್ ಅವರ ನೂರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸೋಮವಾರ ತೇಜಸ್ವಿನಿ ಅವರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. ಅವರಿಗೆ ಸಿಕ್ಕಿದ್ದು, ದೇಶ ಪಕ್ಷಕ್ಕಿಂತ ವ್ಯಕ್ತಿಗಿಂತ ಮುಖ್ಯ ಎಂಬ ಭರವಸೆ ಮಾತ್ರ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಸಸ್ಪೆನ್ಸ್ ಮುಂದುವರಿಕೆ
ಈ ಬಗ್ಗೆ ಟ್ವೀಟಿಸಿರುವ ತೇಜಸ್ವಿನಿ ಅನಂತ್ ಕುಮಾರ್ ಅವರು, "ನೂರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ನಮ್ಮ ಮನೆಗೆ ಇಂದು ಭೇಟಿ ನೀಡಿದರು. ಅನಂತ್ ಕುಮಾರ್ ಅವರ ನಂಬಿಕೆ ಇದಾಗಿತ್ತು : ದೇಶ ಮೊದಲು, ಪಕ್ಷ ಮತ್ತು ನಾನು ನಂತರ. ಕೇಂದ್ರ ನಾಯಕತ್ವ ಏನೇ ನಿರ್ಧಾರ ತೆಗೆದುಕೊಳ್ಳಲಿ ಇದೇ ಹಾದಿಯಲ್ಲಿ ಸಾಗೋಣ ಮತ್ತು ದೇಶಕ್ಕಾಗಿ ಕೆಲಸ ಮಾಡೋಣ" ಎಂದು ಹೇಳಿದ್ದಾರೆ.
Today hundreds of our anxious well wishers & BJP karyakartas visited our house.
— Chowkidar Tejaswini AnanthKumar (@Tej_AnanthKumar) March 25, 2019
I told them AnanthKumar ji always believed in:
Nation First, Party Next, I Last.
On the same lines let's all abide by the decision of the central leadership & work towards#NamoAgain #ಮೋದಿಮತ್ತೊಮ್ಮೆ pic.twitter.com/60JGcnQVAD
ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಘೋಷಣೆಯನ್ನು ಇಲ್ಲಿಯವರೆಗೆ ತಡೆ ಹಿಡಿದಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಇದನ್ನು ತುಂಬಾ ಮೊದಲೇ ನಿರ್ಧಾರ ಮಾಡಬೇಕಾಗಿತ್ತು ಮತ್ತು ತೇಜಸ್ವಿನಿ ಅವರೇ ಸೂಕ್ತ ಅಭ್ಯರ್ಥಿ. ಆಂತರಿಕ ಕಚ್ಚಾಟದಿಂದ ನಾವು ಜಯನಗರ ಉಪ ಚುನಾವಣೆಯಲ್ಲಿ ಸೋತೆವು. ಈಗಲೂ ಹಾಗಾಗದಿರಲಿ ಎಂದು ತೇಜಸ್ವಿನಿ ಅಭಿಮಾನಿಗಳು ಹೇಳುತ್ತಿದ್ದಾರೆ.
ಮೇಡಂ ಸರಿಯಾಗಿಯೇ ಹೇಳಿದ್ದೀರಿ. ನೀವು 80ರ ದಶಕದಿಂದಲೂ, ಹುಬ್ಬಳ್ಳಿಯ ಕಾಲೇಜು ದಿನಗಳಿಂದಲೂ ಅತ್ಯಂತ ಶಿಸ್ತಿನ ವಿದ್ಯಾರ್ಥಿಯಾಗಿದ್ದಿರಿ. ನೀವು ಎಬಿವಿಪಿಯ ದಕ್ಷ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೀರಿ. ದೇವರು ಇಚ್ಛಿಸಿದರೆ ನೀವು ಈಗಲೂ ಕೂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಗಲೂಬಹುದು ಎಂದು ಮತ್ತೊಬ್ಬರು ಸಾಂತ್ವನದ ಮಾತನಾಡಿದ್ದಾರೆ.
ಬೆಂಗಳೂರು ದಕ್ಷಿಣದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ವ್ಯಕ್ತಿಚಿತ್ರ
ಆದರೆ, ತೇಜಸ್ವಿನಿ ಅನಂತ್ ಕುಮಾರ್ ಅವರು ಆಡಿರುವ ಮಾತುಗಳು, ಅವರಿಗೆ ಟಿಕೆಟ್ ಸಿಗಲಾರದೇನೋ ಎಂಬ ಸೂಚನೆ ನೀಡುವಂತಿವೆ. ತೇಜಸ್ವಿನಿ ಅವರು ಅನಂತ್ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸ್ಪರ್ಧಿಸಲು ಸಿದ್ಧರಿಲ್ಲ, ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಅವರೇ ಜನಪ್ರಿಯತೆ ಗಳಿಸಿದ್ದಾರೆ. ಆದರೆ, ಯುವ ನಾಯಕ ತೇಜಸ್ವಿ ಸೂರ್ಯ ಅವರ ಬಗ್ಗೆ ಆರೆಸ್ಸೆಸ್ಸಿಗೆ ಒಲವಿದ್ದಂತೆ ತೋರುತ್ತಿದೆ. ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೂಡ ಕೇಳಿಬರುತ್ತಿದೆ.