ಬಿಎಸ್ವೈ ಭೇಟಿಗೆ ಸಮಯ ನೀಡದ ಮೋದಿ, ದೆಹಲಿಗೆ ಪ್ರಯಾಣ ಮುಂದೂಡಿಕೆ
ಬೆಂಗಳೂರು, ಸೆಪ್ಟೆಂಬರ್ 18: ಸಿಎಂ ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕಾಗಿತ್ತು. ಮೋದಿ ಅವರು ಯಡಿಯೂರಪ್ಪ ಅವರಿಗೆ ಸಮಯ ನೀಡದ ಕಾರಣ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ.
ಮೋದಿ ಅವರು ಸಮಯ ನೀಡದ ಕಾರಣ ಯಡಿಯೂರಪ್ಪ ಅವರು ಸೆಪ್ಟೆಂಬರ್ 20 ಕ್ಕೆ ದೆಹಲಿಗೆ ಹೋಗಿ ಮೋದಿ ಅವರನ್ನು ಭೇಟಿ ಆಗಲಿದ್ದಾರೆ.
ಹೈಕಮಾಂಡ್ ಅಂಗಣದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿದ್ದ 'ರಾಜ ಮರ್ಯಾದೆ' ಕಮ್ಮಿ ಆಯಿತೇ?
ಮೋದಿ ಅವರನ್ನು ಭೇಟಿಯಾಗಿ ನೆರೆ ಪರಿಹಾರದ ಬಗ್ಗೆ ಮಾತುಕತೆ ನಡೆಸಲು ಸಿಎಂ ಯಡಿಯೂರಪ್ಪ ಬಯಸಿದ್ದರು. ಆದರೆ ಏಕೋ-ಏನೋ ಮೋದಿ ಅವರು ರಾಜ್ಯದ ನೆರೆ ಪೀಡತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ ಎಂಬ ಅನುಮಾನ ಇಂದಿನ ಅವರ ನಡೆಯಿಂದ ಮೂಡುತ್ತಿದೆ.
ಕೆಲವು ದಿನಗಳ ಹಿಂದೆಯೂ ಯಡಿಯೂರಪ್ಪ ಅವರು ನೆರೆ ಪರಿಹಾರದ ಬಗ್ಗೆ ಚರ್ಚಿಸಲು ಮೋದಿ ಅವರ ಸಮಯ ಕೇಳಿದ್ದರು. ಆದರೆ ಅಂದೂ ಮೋದಿ ಅವರು ಸಮಯ ನೀಡಿರಲಿಲ್ಲ. ಈಗ ಮತ್ತೊಮ್ಮೆ ಯಡಿಯೂರಪ್ಪ ಅವರಿಗೆ ಮುಖಭಂಗ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ ಅಪ್ರತಿಮ ತಂತ್ರಗಾರಿಕೆಗೆ ಇಬ್ಬರು ಸಚಿವರು ಕುಂತಲ್ಲೇ 'ಥಂಡಾ'
ಮೋದಿ ಬಳಿ ನೆರೆ ಪರಿಹಾರ ಕೇಳಿ ತಿಂಗಳೇ ಕಳೆದಿದೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರು ಆಗಮಿಸಿ ನೆರೆ ವೀಕ್ಷಣೆ ಮಾಡಿದ್ದಾರೆ. ಕೇಂದ್ರದಿಂದ ತಂಡವೊಂದು ಬಂದು ವರದಿಯನ್ನೂ ನೀಡಿದೆ. ಆದರೆ ಇನ್ನೂ ಸಹ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ ಕೇಂದ್ರ. ಈ ಬಗ್ಗೆ ಮಾತನಾಡಲೆಂದೇ ಯಡಿಯೂರಪ್ಪ ಅವರು ಮೋದಿ ಭೇಟಿಗೆ ಅವಕಾಶ ಕೇಳಿದ್ದರು.