ಭಾರತ ಇಂದು ಬೆಳಗುತ್ತಿರುವುದು ನೀವು ಹಾಕಿದ ಮತದಿಂದ: ಮೋದಿ
ಬೆಂಗಳೂರು, ಏಪ್ರಿಲ್ 13: ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಮೊದಲಿಗೆ ಅಗಲಿದ ತಮ್ಮ ಮಿತ್ರ ಅನಂತ್ಕುಮಾರ್ ಹಾಗೂ ಮಾಜಿ ಶಾಸಕ ವಿಜಯ್ ಕುಮಾರ್ ಅವರನ್ನು ನೆನಪಿಸಿಕೊಂಡರು.
ಬೆಂಗಳೂರು ಸದಾ ಅತೀವ ಪ್ರೀತಿಯನ್ನು ತಮಗೆ ನೀಡಿದೆ ಎಂದ ಮೋದಿ, ತಾವು ನೀಡಿದ ಮತದಿಂದಲೇ ಭಾರತವು ಇಂದು ವಿದೇಶಗಳಲ್ಲಿ ತಲೆ ಎತ್ತಿ ನಡೆಯುವಂತಾಗಿದೆ, ವಿಶ್ವದಾದ್ಯಂತ ಗೌರವ ದೊರೆಯುತ್ತಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ನ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಗಾಂಧಿ ಕುಟುಂಬದವರು ತಮ್ಮ ಕುಟುಂಬ ಸದಸ್ಯರಿಗೆ ಹಲವು ಸ್ಮಾರಕಗಳನ್ನು ಮಾಡಿದ್ದಾರೆ, ಆದರೆ ಸೈನ್ಯ ಕೇಳಿದ್ದ ಬುಲೆಟ್ ಪ್ರೂಫ್ ಜಾಕೆಟ್ ಸಹ ಅವರಿಗೆ ಕೊಡಲು ಸಾಧ್ಯವಾಗಿರಲಿಲ್ಲ, ಅದನ್ನು ನೀಡಲು ನಮ್ಮ ಸರ್ಕಾರವೇ ಬರಬೇಕಾಯಿತು ಎಂದು ಹೇಳಿದರು.
ಕಾಂಗ್ರೆಸ್ನ ಪ್ರಣಾಳಿಕೆಯನ್ನು ಕಠಿಣ ಮಾತುಗಳಲ್ಲಿ ಟೀಕಿಸಿದ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆ, ಸೈನಿಕರ ವಿಶೇಷ ಅಧಿಕಾರವನ್ನು ವಾಪಸ್ ಪಡೆಯುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿದೆ, ಕಾಶ್ಮೀರದಿಂದ ಸೈನ್ಯವನ್ನು ವಾಪಸ್ ಪಡೆಯುತ್ತೇವೆ ಎಂದಿದೆ, ಇದೆಲ್ಲ ಪಾಕಿಸ್ತಾನ ಮಾತನಾಡುವ ಭಾಷೆ ಎಂದು ಮೋದಿ ಹೇಳಿದರು. ಇಂತಹಾ ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ಮೋದಿ ಹೇಳಿದರು.
ನಮ್ಮ ಆಡಳಿತದಲ್ಲಿ ಸ್ಪೋಟಗಳು ನಡೆದಿಲ್ಲ: ಮೋದಿ
ಯುಪಿಎ ಆಡಳಿತದಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಸ್ಫೋಟಗಳು ನಡೆದವು ಆದರೆ ನಮ್ಮ ಆಡಳಿತದಲ್ಲಿ ದೊಡ್ಡ ಸ್ಪೋಟಗಳು ಎಲ್ಲೂ ಆಗಲಿಲ್ಲ, ನಮ್ಮ ಆಡಳಿತದಲ್ಲಿ ಉಗ್ರರ ವಿರುದ್ಧ ಅಂಕುಶ ಹಾಕಿದ್ದೇವೆ, ಮನೆಗೆ ನುಗ್ಗಿ ಹೊಡೆಯುವ ಶಕ್ತಿ ಸಂಪಾದಿಸಿದ್ದೇವೆ, ಆದರೆ ಇದು ಸಹ ಕಾಂಗ್ರೆಸ್ಗೆ ಜೀರ್ಣವಾಗುತ್ತಿಲ್ಲ, ಅವರು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ಗೆ ಸಾಕ್ಷ್ಯ ಕೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.
'ಜಾಮೀನನ ಮೇಲೆ ಇರುವವನನ್ನು ನಂಬಬೇಡಿ'
ಕಾಂಗ್ರೆಸ್ಗೆ ಸಾಕಷ್ಟು ಅವಕಾಶ ಇತ್ತು ಆದರೆ ಅವರು ಅದನ್ನು ಬಳಸಿಕೊಳ್ಳಲಿಲ್ಲ, ಇಷ್ಟು ವರ್ಷ ಮಾಡಲಾಗದ ಬಡತನ ನಿವಾರಣೆಯನ್ನು ಈಗ ಮಾಡುತ್ತೇವೆ ಎನ್ನುತ್ತಿದ್ದಾರೆ, ರಾಹುಲ್ ಅವರ ಹೆಸರು ಹೇಳದ ಮೋದಿ ಕಾಂಗ್ರೆಸ್ ನ ನಾಯಕರೊಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ ಅವರನ್ನು ನೀವು ನಂಬುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಐಟಿ ದಾಳಿ ವಿರುದ್ಧ ಪ್ರತಿಭಟನೆ: ಮೋದಿ ವ್ಯಂಗ್ಯ
ಐಟಿ ದಾಳಿ ಬಗ್ಗೆ ಇಲ್ಲಿನ ನಾಯಕರು ಬೀದಿಗೆ ಇಳಿದಿದ್ದಾರೆ, ಅವರು ತಪ್ಪು ಮಾಡಿಲ್ಲವೆಂದರೆ ಏಕೆ ಹೆದರಬೇಕು, ನಾನು ಸಿಎಂ ಆಗಿದ್ದಾಗ ನನ್ನನ್ನು ಸಾಮಾನ್ಯ ಪೊಲೀಸರು 100 ಗಂಟೆ ವಿಚಾರಣೆ ನಡೆಸಿದ್ದರು, ಆದರೆ ಕಾನೂನಿನ ಮುಂದೆ ನಾನು ಸಾಮಾನ್ಯನೆಂದು ಕಾನೂನಿನ ಪಾಲನೆ ಮಾಡಿದ್ದೆ ಎಂದು ಮೋದಿ ಹೇಳಿದರು.
'ಕರ್ನಾಟಕದಲ್ಲಿ 30% ಸರ್ಕಾರ ಇದೆ'
ಕರ್ನಾಟಕದಲ್ಲಿ ಸಿಎಂ ಮೇಲೆ ಸೂಪರ್ ಸಿಎಂ ಒಬ್ಬರು ಇದ್ದಾರೆ. ಈ ಹಿಂದೆ ರಾಜ್ಯದಲ್ಲಿ ಇದ್ದ 10% ಕಮಿಷನ್ ಹೋಗಿ 30% ಕಮಿಷನ್ ಸರ್ಕಾರ ಆಡಳಿತ ಅಸ್ಥಿತ್ವಕ್ಕೆ ಬಂದಿದೆ ಎಂದ ಮೋದಿ, ದೇಶವನ್ನು ಲೂಟಿ ಹೊಡೆದ ಯಾರನ್ನೂ ಬಿಡುವುದಿಲ್ಲ, ಇನ್ನು ಮುಂದೆ ಯಾರೂ ಲೂಟಿ ಹೊಡೆಯಲು ಬಿಡುವುದಿಲ್ಲ ಎಂದರು ಮೋದಿ. ಬೆಂಗಳೂರಿಗರು ಹೆಚ್ಚಿಗೆ ಮತ ಹಾಕಲು ಸಹ ಇದೇ ವೇಳೆ ಮೋದಿ ಹೇಳಿದರು.