ಇನ್ಫಿ ಸಿಒಒ ವೇತನ ಹೆಚ್ಚಳ ಪ್ರಮಾಣಕ್ಕೆ ನಾರಾಯಣ ಮೂರ್ತಿ ಅಸಮಾಧಾನ
ಇನ್ಫೋಸಿಸ್ ಸಿಒಒ ಯುಬಿ ಪ್ರವೀಣ್ ರಾವ್ ವೇತನ ಹೆಚ್ಚಳ ಪ್ರಮಾಣಕ್ಕೆ ಸಂಬಂಧಿಸಿದಂತೆ ಕಂಪೆನಿ ಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಿದರೆ ನಂಬಿಕೆ ಕಳೆದುಕೊಳ್ತೀವಿ ಅಂತಲೂ ಎಚ್ಚರಿಸಿದ್ದಾರೆ
ಬೆಂಗಳೂರು, ಏಪ್ರಿಲ್ 3: ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯು.ಬಿ.ಪ್ರವೀಣ್ ರಾವ್ ಅವರ ವೇತನ ಹೆಚ್ಚಳಕ್ಕೆ ನಿರ್ದೇಶಕರ ಮಂಡಳಿ ಒಪ್ಪಿಗೆ ಸೂಚಿಸಿರುವುದು 'ಸರಿಯಾಗಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಉದ್ಯೋಗಿಗಳು ಆಡಳಿತ ವ್ಯವಸ್ಥೆ ಮತ್ತು ನಿರ್ದೇಶಕ ಮಂಡಳಿಯ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಎಂದಿದ್ದಾರೆ. ಈ ಬಗ್ಗೆ ಇ ಮೇಲ್ ಮಾಡಿರುವ ಅವರು, ಆಡಳಿತದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಪರವಾಗಿ ಮಂಡಳಿ ವರ್ತಿಸಿದ್ದು, ಇನ್ಫೋಸಿಸ್ ಆಡಳಿತ ವ್ಯವಸ್ಥೆ ತಳ ಮಟ್ಟ ತಲುಪಿದೆ. ಇಂಥ ಸಂದರ್ಭದಲ್ಲಿ ಇಷ್ಟು ವೇತನ ಹೆಚ್ಚಳ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.[ನಾರಾಯಣ ಮೂರ್ತಿ ವಿವಾದ: ಇನ್ಫಿ ಷೇರು ಮೌಲ್ಯ ಕುಸಿತ]
ಆಡಳಿತ ಮಂಡಳಿಯಲ್ಲಿ ಮೇಲ್ ಸ್ತರದವರಿಗೆ ಶೇ 60ರಿಂದ 70ರಷ್ಟು ವೇತನ ಹೆಚ್ಚಳ ಮಾಡಿ, ಕಂಪೆನಿಯ ಇತರ ಉದ್ಯೋಗಿಗಳಿಗೆ ಶೇ 6-8ರಷ್ಟು ವೇತನ ಹೆಚ್ಚಳ ಮಾಡಿರುವುದು ನನ್ನ ಅಭಿಪ್ರಾಯದಲ್ಲಿ ಸರಿಯಲ್ಲ ಎಂದು ಅವರು ಹೇಳಿದ್ದಾರೆ. "ಪ್ರವೀಣ್ ರಂಥ ಸಭ್ಯರು (ಕಳೆದ ಮೂವತ್ತು ವರ್ಷಗಳಿಂದ ಇನ್ಫೋಸಿಸ್ ಮೌಲ್ಯಗಳನ್ನು ಗಮನಿಸುತ್ತಿರುವವರು) ಯಾವ ಆತ್ಮಸಾಕ್ಷಿ ಇಟ್ಟುಕೊಂಡು ತಮಗಿಂತ ಕಿರಿಯರಿಗೆ ಹೇಳ್ತಾರೆ?
"ನೀವು ಕಂಪೆನಿಗಾಗಿ ಶ್ರಮ ಪಡಬೇಕು. ಕಂಪೆನಿಗೆ ಖರ್ಚು ಉಳಿಸಲು ಹಾಗೂ ಲಾಭದ ಪ್ರಮಾಣದಲ್ಲಿ ಹೆಚ್ಚು ಮಾಡಲು ತ್ಯಾಗ ಮಾಡಬೇಕು ಅಂತ ಹೇಗೆ ಹೇಳ್ತಾರೆ? ನನಗೆ ಹಲವಾರು ಮೇಲ್ ಗಳು ಬರುತ್ತಿವೆ. ಈ ನಿರ್ಣಯ ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಕಂಪೆನಿಯ ಈ ಹಿಂದಿನ ಯಾವ ನಿರ್ಣಯಕ್ಕೂ ಇಂಥ ಅಸಮಾಧಾನ ಕೇಳಿಬಂದಿರಲಿಲ್ಲ" ಎಂದು ಹೇಳಿದ್ದಾರೆ.[ಒಳ್ಳೆ ಜನರು ಕೂಡ ಕೆಲವು ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ]
"ಪ್ರವೀಣ್ ಅವರನ್ನು 1985ರಲ್ಲಿ ನೇಮಕ ಮಾಡಿದ್ದು ನಾನೇ. ನಾನು ಇನ್ಫೋಸಿಸ್ ನಲ್ಲಿ ಇರುವವರೆಗೆ ಅವರ ಬೆಳವಣಿಗೆಗೆ ಸಹಕಾರ ನೀಡಿದ್ದೇನೆ. ಪ್ರವೀಣ್ ಮೂಲೆಗುಂಪಾಗಿದ್ದರು. ಕ್ರಿಶ್, ಶಿಬು ಹಾಗೂ ನಾನು ಪ್ರವೀಣ್ ನನ್ನು ಪ್ರೋತ್ಸಾಹಿಸಿ, ಮಂಡಳಿಗೆ ಸೇರ್ಪಡೆ ಮಾಡಿದೆವು. ವಿಶಾಲ್ ಸಿಕ್ಕಾ ಸಿಇಒ ಆದಾಗ ಪ್ರವೀಣ್ ನನ್ನು ಸಿಒಒ ಮಾಡಿದೆವು. ಈಗಿನ ನನ್ನ ಆಕ್ಷೇಪದಲ್ಲಿ ಪ್ರವೀಣ್ ನ ಗುರಿ ಮಾಡಿಕೊಂಡಿದ್ದು ಏನೂ ಇಲ್ಲ" ಎಂದಿದ್ದಾರೆ.