ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಯಿ, ಸ್ತನ ಕ್ಯಾನ್ಸರ್ ತಪಾಸಣೆ
ಆನೇಕಲ್, ಆಗಸ್ಟ್ 18: : ನಾರಾಯಣ ಹೆಲ್ತ್ ತನ್ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ(ಸಿಎಸ್ಆರ್) ವತಿಯಿಂದ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಸಮಸ್ಯೆ ಬರದಂತೆ ತಡೆಗಟ್ಟುವ ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿತ್ತು.
ತರಬೇತಿ ಪಡೆದ ಸಮುದಾಯ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು, ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆಯನ್ನು ನಡೆಸಿದರು. ಸುಮಾರು 350 ಅಂಗನವಾಡಿ ಕಾರ್ಯಕರ್ತೆಯರು ತಪಾಸಣೆಗೆ ಒಳಗಾದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಾರಾಯಣ ಹೆಲ್ತ್ನ ಮೊಬೈಲ್ ಮ್ಯಾಮೊಗ್ರಫಿ ಸೇವೆಗೆ 55 ಅಂಗನವಾಡಿ ಕಾರ್ಯಕರ್ತೆಯರು ಒಳಪಟ್ಟರು. ತಪಾಸಣೆಗೆ ಒಳಗಾದ ಮಹಿಳೆಯರಲ್ಲಿ ಕೆಲವರಿಗೆ ಹೆಚ್ಚಿನ ರೋಗ ತಪಾಸಣೆ/ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಹಮ್ಮಿಕೊಂಡಿದ್ದ ಈ ಜಾಗೃತಿ ಕಾರ್ಯಕ್ರಮವು, ಆನೇಕಲ್ ತಾಲ್ಲೂಕಿನ ಜನಸಾಮಾನ್ಯರಲ್ಲಿ ಪರಿಣಾಮಕಾರಿಯಾದ ತಿಳಿವಳಿಕೆ ಮೂಡಿಸಲು ನೆರವಾಯಿತು.