ನಾರಾಯಣ ಆಸ್ಪತ್ರೆ ಉಳಿಸಿದ ಬೇಬಿ ಪ್ಯಾಪಿಲಾನ್ ವಿಶ್ವದ ಪವಾಡ ಶಿಶು
ನಗರದ ನಾರಾಯಣ ಹೆಲ್ತ್ ನ ವೈದ್ಯರು ವಿಶ್ವದ ಮೊಟ್ಟಮೊದಲ ಪಿಡಿಎ ಸ್ಟೆಂಟಿಂಗ್ ಹಾಗೂ ಈ ಪ್ರಾಂತದ ಮೊದಲ ಥೊರಾಕೋಪೇಗಸ್ ಅವಳಿಗಳನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಪ್ರತ್ಯೇಕಿಸಿ ಬೇಬಿ ಪ್ಯಾಪಿಲಾನ್ನ ಜೀವ ರಕ್ಷಿಸಿದ್ದಾರೆ. ಮಾರಿಷಸ್ ಮೂಲದ ಬೇಬಿ ಪ್ಯಾಪಿಲಾನ್ ಅಂಟಿಕೊಂಡಿದ್ದ ಅವಳಿಗಳಲ್ಲೊಂದಾಗಿದ್ದು, ತನ್ನ ಸಹೋದರಿ ಜತೆ ಹೃದಯವನ್ನು ಹಂಚಿಕೊಂಡಿತ್ತು.
ಇಯಾನ್ ಪ್ಯಾಪಿಲಾನ್ ದಂಪತಿಯ ಈ ಅವಳಿ ಮಕ್ಕಳು ಥೊರಾಕೋಪೇಗಸ್ ಅವಳಿಗಳು. ಸಾಮಾನ್ಯವಾಗಿ ಇಂಥ ಥೊರಾಕೋಪೇಗಸ್ ಅವಳಿಗಳಲ್ಲಿ, ಕುತ್ತಿಗೆಯಿಂದ ಹೊಟ್ಟೆಯ ಮೇಲ್ಭಾಗದ ವರೆಗೆ ದೇಹ ಪರಸ್ಪರ ಅಂಟಿ ಕೊಂಡಿರುತ್ತದೆ. ಆದರೆ ಈ ಪ್ರಕರಣದಲ್ಲಿ ಒಂದೇ ಹೃದಯವನ್ನು ಪರಸ್ಪರ ಹಂಚಿಕೊಂಡಿದ್ದವು.
ಪಾರ್ಶ್ವವಾಯುಪೀಡಿತ 102 ವರ್ಷದ ವ್ಯಕ್ತಿ ರಕ್ಷಿಸಿದ ನಾರಾಯಣ ಆಸ್ಪತ್ರೆ
ಪ್ರತಿ ಮಗುವು ಪ್ರತ್ಯೇಕವಾಗಿ ನಾಲ್ಕು ಹೃದಯ ಚೇಂಬರ್ ಗಳು ಹೊಂದಿರುವ ಬದಲಾಗಿ, ಒಟ್ಟಾಗಿ ಏಳು ಚೇಂಬರ್ ಗಳನ್ನು ಹೊಂದಿದ್ದವು. ಈ ಅವಳಿಯನ್ನು ಉಳಿಸಲು ತಜ್ಞರ ಆರೈಕೆ ಅಗತ್ಯವಾಗಿದ್ದ ಹಿನ್ನೆಲೆಯಲ್ಲಿ, ಮಾರಿಷಸ್ ಆರೋಗ್ಯ ಇಲಾಖೆ, ವಿದೇಶಿ ಆಸ್ಪತ್ರೆಗಳನ್ನು ಸಂಪರ್ಕಿಸಿತು.
ಸಂಕೀರ್ಣ ಶಿಶುವೈದ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ಅಪಾರ ಅನುಭವ ಹೊಂದಿದ್ದ ನಾರಾಯಣ ಹೆಲ್ತ್ ಸಿಟಿಯ ವೈದ್ಯರ ತಂಡ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿತು.
ನಾರಾಯಣ ಹೆಲ್ತ್ ಸಿಟಿ ಟ್ರೆಡ್ ಮಿಲ್ ಮೇಲೆ ಮಾಜಿ ಕ್ರಿಕೆಟರ್ ವಾಕಿಂಗ್
ಒಂದೇ ಹೃದಯವನ್ನು ಪರಸ್ಪರ ಹಂಚಿಕೊಂಡಿದ್ದ ಈ ಅವಳಿಗಳು ಸರಾಗವಾಗಿ ಉಸಿರಾಡುವ ಸ್ಥಿತಿಯಲ್ಲಿ ಕೂಡಾ ಇರಲಿಲ್ಲ. ಪ್ರಯಾಣದುದ್ದಕ್ಕೂ ಇವರ ಉಸಿರಾಟಕ್ಕೆ ಆಮ್ಲಜನಕಕ್ಕಾಗಿ ಆ್ಯಂಬು ಬ್ಯಾಗನ್ನು ಬಳಸಲಾಗಿತ್ತು.
ಶಿಶುಗಳು ನಾರಾಯಣ ಹೃದಯಾಲಯ ತಲುಪಿದ ತಕ್ಷಣ
ಈ ಅವಳಿ ಶಿಶುಗಳು ನಾರಾಯಣ ಹೃದಯಾಲಯ ತಲುಪಿದ ತಕ್ಷಣ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ, ಮೂತ್ರಶಾಸ್ತ್ರ ತಜ್ಞ ಮತ್ತು ನಿರ್ದೇಶಕರಾದ ಡಾ.ಆಶ್ಲೆ ಡಿಕ್ರೂಜ್, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಅಂಗಾಂಗ ಕಸಿ ತಜ್ಞ ಡಾ.ಸಂಜಯ್ರಾವ್, ಮಕ್ಕಳ ಹೃದ್ರೋಗ ತಜ್ಞ ಮತ್ತು ಎಲೆಕ್ಟ್ರೊಫಿಜಿಯಾಲಜಿ ತಜ್ಞ ಡಾ.ಶ್ರೀಶ ಶಂಕರ್ ಮೈಯಾ, ತೀವ್ರ ನಿಗಾ ಸೇವೆಗಳ ಸಲಹಾ ತಜ್ಞ ಹಾಗೂ ಎಕ್ಸ್ಟ್ರಾ ಕಾರ್ಪೊರಲ್ ಜೀವಬೆಂಬಲ ವ್ಯವಸ್ಥೆ ವಿಭಾಗದ ಮುಖ್ಯಸ್ಥ ಡಾ.ರಿಯಾನ್ ಶೆಟ್ಟಿ, ಅನಸ್ತೇಶಿಯಾ ತಜ್ಞ ಹಾಗೂ ತೀವ್ರ ನಿಗಾ ಘಟಕದ ಸಲಹಾ ತಜ್ಞ ಡಾ.ಗಣೇಶ್ ಸಂಬಂದಮೂರ್ತಿ, ನವಜಾತ ಶಿಶು ತಜ್ಞರಾದ ಡಾ ಹರಿಣಿ ಶ್ರೀಧರನ್ ನೇತೃತ್ವದ ತಂಡ ಅವಳಿಗಳ ಆರೋಗ್ಯವನ್ನು ಕೂಲಂಕುಷವಾಗಿ ಪರೀಕ್ಷಿಸಿತು.
ಮಕ್ಕಳು ಪರಸ್ಪರ ಹಂಚಿಕೊಂಡ ಹೃದಯವನ್ನು ಹೊಂದಿದ್ದು
ಮಕ್ಕಳು ಪರಸ್ಪರ ಹಂಚಿಕೊಂಡ ಹೃದಯವನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಹಾಗೂ ಅವು ಬದುಕಿ ಉಳಿಯುವ ಸಾಧ್ಯತೆ ಕ್ಷೀಣವಾಗಿದ್ದ ಹಿನ್ನೆಲೆಯಲ್ಲಿ, ಈ ಪೈಕಿ ಕನಿಷ್ಠ ಒಂದು ಮಗುವನ್ನಾದರೂ ಉಳಿಸಲು ತಜ್ಞ ವೈದ್ಯರ ತಂಡ ಮಾರ್ಗೋಪಾಯಗಳನ್ನು ಚರ್ಚಿಸಿದರು. ಪೋಷಕರು ಒಪ್ಪಿಗೆ ನೀಡಿದ ಬಳಿಕ, ತಜ್ಞವೈದ್ಯರ ತಂಡ ಚಿಕಿತ್ಸಾ ಪ್ರಕ್ರಿಯೆ ಆರಂಭಿಸಿತು. ಮಕ್ಕಳನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಡಾ.ರಿಯಾನ್ ಶೆಟ್ಟಿ ಮತ್ತು ಡಾ.ಗಣೇಶ್ ಸಂಬಂದಮೂರ್ತಿಯವರ ನೇತೃತ್ವದ ತೀವ್ರ ನಿಗಾ ಘಟಕದ ತಜ್ಞರು ಮಕ್ಕಳು ತ್ವರಿತವಾಗಿ ಸ್ಥಿರ ಆರೋಗ್ಯ ಸ್ಥಿತಿ ಹೊಂದಲು ಕಾರಣವಾದರು. ಮಕ್ಕಳ ದೇಹಸ್ಥಿತಿ ಸ್ಥಿರವಾದ ಬಳಿಕ ಹೃದಯ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಪಿಡಿಎ ಸ್ಟೆಂಟಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು.
ಪಿಡಿಎ (ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಸ್) ಸ್ಟೆಂಟಿಂಗ್
ಪಿಡಿಎ (ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಸ್) ಸ್ಟೆಂಟಿಂಗ್ ಬಗ್ಗೆ ವಿವರ ನೀಡಿದ ಮಕ್ಕಳ ಹೃದಯರೋಗ ಮತ್ತು ಎಲೆಕ್ಟ್ರೋಫಿಜಿಯಾಲಜಿ ತಜ್ಞ ಡಾ.ಶ್ರೀಶ ಶಂಕರ್ ಮಯ್ಯ, "ಮಕ್ಕಳ ಹೃದಯ ಪರಸ್ಪರ ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ತೆರೆದ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಇದಲ್ಲದೇ ಮಕ್ಕಳ ಹೃದಯದಲ್ಲಿ ಕೀವು ತುಂಬಿಕೊಂಡಿತ್ತು ಹಾಗು ಅವು ಪರಸ್ಪರ ಅಂಟಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಅತ್ಯಂತ ಸಂಕೀರ್ಣವಾಗಿತ್ತು ಹಾಗೂ ಯಾವುದೇ ಶಸ್ತ್ರಚಿಕಿತ್ಸೆಗೆ ಸೂಕ್ತ ಪ್ರಕರಣವಾಗಿರಲಿಲ್ಲ. ಪಿಡಿಎ (ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಸ್) ಸ್ಟೆಂಟಿಂಗ್ ಎನ್ನುವುದು ಶಸ್ತ್ರಚಿಕಿತ್ಸೆಯಲ್ಲದ ವಿಧಾನವಾಗಿದ್ದು, ಇದರಲ್ಲಿ ಪಿಡಿಎಯಲ್ಲಿ ಸ್ಟೆಂಟ್ ಅಳವಡಿಸಿ, ಹೃದಯದಿಂದ ಹರಿಯುವ ರಕ್ತವನ್ನು ನಿರ್ವಹಿಸಲಾಗುತ್ತದೆ. ಈ ಚಿಕಿತ್ಸೆ ಯಶಸ್ವಿಯಾಯಿತು ಹಾಗೂ ಸೂಕ್ತ ಪ್ರಮಾಣದ ಆಮ್ಲಜನಕ ಇವರಿಗೆ ದೊರೆಯಲಾರಂಭಿಸಿತು" ಎಂದು ಹೇಳಿದರು.
ಥೊರಾಕೋಪೇಗಸ್ ಪ್ರತ್ಯೇಕತೆ ಚಿಕಿತ್ಸೆ
ಈ ಚಿಕಿತ್ಸೆ ಯಶಸ್ವಿಯಾದರೂ, ಅಂಟಿಕೊಂಡೇ ಎರಡೂ ಜೀವಗಳು ಇದ್ದ ಹಿನ್ನೆಲೆಯಲ್ಲಿ ವೈದ್ಯರು ಪ್ರತ್ಯೇಕಗೊಳಿಸುವ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಈ ಮಕ್ಕಳು ಅವಳಿಗಳಾಗಿದ್ದರೂ, ಈ ಪೈಕಿ ಒಂದು ಮಗುವಿಗೆ ಸರಿಪಡಿಸಲಾಗದ ಸಂಕೀರ್ಣ ಜನ್ಮಜಾತ ಸಮಸ್ಯೆಗಳು ಇದ್ದವು. ಅನಾರೋಗ್ಯಪೀಡಿತ ಮಗು ಹೊರೆ ಎನಿಸಿದ ಹಿನ್ನೆಲೆಯಲ್ಲಿ ಪೋಷಕರು ಹಾಗೂ ವೈದ್ಯರು ಆರೋಗ್ಯವಂತ ಮಗುವನ್ನು ಉಳಿಸಲು ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದರು. ಯಶಸ್ವಿಯಾಗಿ ಮಕ್ಕಳನ್ನು ಪ್ರತ್ಯೇಕಗೊಳಿಸಲಾಯಿತು. ಅವಳಿಗಳ ಪೈಕಿ ಉಳಿದುಕೊಳ್ಳುವ ಮಗುವಿಗೆ ದೇಹದ ಮೇಲ್ಭಾಗ ಪುನರ್ ರಚನೆಗಾಗಿ ತ್ಯಾಗ ಮಾಡಿದ ಮಗುವಿನ ಅಂಗಾಂಶಗಳನ್ನು ಬಳಸಿಕೊಳ್ಳಲಾಯಿತು.
ಈ ಪ್ರಕರಣದ ಬಗ್ಗೆ ವಿವರ ನೀಡಿದ ಡಾ.ಆಶ್ಲೆ ಡಿಕ್ರೂಜ್, "ಪರಸ್ಪರ ಅಂಟಿಕೊಂಡಿರುವ ಅವಳಿಗಳು ಬದುಕಿ ಉಳಿಯುವ ಸಾಧ್ಯತೆ ಕನಿಷ್ಠ. ಹೃದಯಹಂಚಿಕೊಂಡು ಹುಟ್ಟಿದ ಸಯಾಮಿ ಅವಳಿಗಳು ಬದುಕಿ ಉಳಿಯುವ ಅನುಪಾತ ಇನ್ನೂ ಕಡಿಮೆ. ಥೊರಾಕೋಪೇಗಸ್ ಪ್ರತ್ಯೇಕತೆ ಚಿಕಿತ್ಸೆಯಲ್ಲಿ ಉಳಿದ ಈ ಮಗು ವಿಶ್ವದ ಮೂರನೇ ಪವಾಡಶಿಶುವಾಗಿದೆ" ಎಂದು ಹೇಳಿದರು. ಚಿತ್ರದಲ್ಲಿ ಡಾ. ದೇವಿಶೆಟ್ಟಿ.