ಕರಾವಳಿ ಸಂಸ್ಕೃತಿ, ಕಲೆ ಪರಿಚಯಿಸುವ ನಮ್ಮೂರ ಹಬ್ಬಕ್ಕೆ ಬನ್ನಿ
ಬೆಂಗಳೂರು, ಫೆಬ್ರವರಿ 05: ಅಭಿನಂದನಾ ಸಾಂಸ್ಕೃತಿಕ ಸಂಸ್ಥೆ ಆರನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ "ನಮ್ಮೂರ ಹಬ್ಬ" ಅನ್ನು ಫೆಬ್ರವರಿ 9 ನೇ ಶನಿವಾರ ಹಾಗು ಫೆಬ್ರವರಿ 10ನೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ಟೋಲ್ ಸಮೀಪದ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ನಡೆಯಲಿದೆ.
ಇದು ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.
ಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬ
ಬಹುಸಂಸ್ಕೃತಿಯ ತವರುಮನೆಯಾಗಿರುವ ಬೆಂಗಳೂರು, ಮೂಲಗಳ ಭೇದವಿಲ್ಲದೆ ಎಲ್ಲ ಸಂಸ್ಕೃತಿ, ಭಾಷೆ, ಆಹಾರ ಹಾಗು ಜೀವನಕ್ರಮಕ್ಕೆ ಸೂರು ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿ ಸರಿಸುಮಾರು 15 ಲಕ್ಷದಷ್ಟು ಕರಾವಳಿಯ ಜನರಿದ್ದು ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ನಮ್ಮೂರ ಹಬ್ಬ ಹೊಂದಿದೆ.
ಶನಿವಾರ ಬೆಳಿಗ್ಗೆ 10:30ಕ್ಕೆ ಕಾರ್ಯಕ್ರಮವನ್ನು ಖ್ಯಾತ ಯಕ್ಷಗುರುಗಳಾದ ಬನ್ನಂಜೆ ಸಂಜೀವ ಸುವರ್ಣರವರು ಉದ್ಘಾಟಿಸಲಿದ್ದು ಗಣ್ಯರ ಸಮ್ಮುಖದಲ್ಲಿ ಈ ವರ್ಷದ ನಮ್ಮೂರ ಹಬ್ಬಕ್ಕೆ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ವಿದ್ಯುಕ್ತ ಚಾಲನೆ ದೊರಕಲಿದೆ.
ಸಚಿವರಾದ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದು ನಮ್ಮೊಡನೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಶಾಸಕರಾದ ಮುನಿರತ್ನ ನಾಯ್ಡು, ಸ್ಥಳಿಯ ಬಿಬಿಎಂಪಿ ಸದಸ್ಯರಾದ ನಳಿನಿ ಮಂಜುನಾಥ್, ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಕಂಬಳ ಆಯೋಜಕರಾದ ರೋಹಿತ್ ಹೆಗ್ಡೆ ಎರ್ಮಾಳು, ಡೈರಿ ಡೇ ಐಸ್ಕ್ರೀಮ್ ನಿರ್ದೇಶಕರಾದ ಸಿ.ಕೆ.ಚಂದ್ರಶೇಖರ್, ಆಕಾಶ್ ಎಂಟರ್ಪ್ರೈಸಸ್ ಆಡಳಿತ ನಿರ್ದೇಶಕರಾದ ರವೀಂದ್ರ ನಾಯಕ್, ಕೋತಾಸ್ ಕಾಫಿಯ ಆಡಳಿತ ನಿರ್ದೇಶಕರಾದ ನಿತಿನ್ ಸಿ.ಎಸ್ ಮತ್ತು ಎನ್ಸೈನ್ ಇಕ್ವಿಪ್ಮೆಂಟ್ ಆಡಳಿತ ನಿರ್ದೇಶಕರಾದ ದಿನೇಶ್ ವೈದ್ಯ ಅಂಪಾರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಜಯಂತ್ ಕಾಯ್ಕಿಣಿ ಅವರಿಗೆ 'ಕಿರೀಟ' ಪ್ರಶಸ್ತಿ
ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ನ ಪ್ರತಿಷ್ಠಿತ ಈ ವರ್ಷದ "ಕಿರೀಟ" ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಮತ್ತು ಲೇಖಕರಾದ ಜಯಂತ್ ಕಾಯ್ಕಿಣಿ ಹಾಗೂ ಯಕ್ಷಕೇಂದ್ರ ಉಡುಪಿ ಇವರಿಗೆ ನೀಡಲಿದ್ದೇವೆ. "ಕಿರೀಟ" ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಮಾನ್ಯ ಸಚಿವರುಗಳಾದ ಯು.ಟಿ.ಖಾದರ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ, ಖ್ಯಾತ ಲೇಖಕ ಜೋಗಿ, ಖ್ಯಾತ ಚಲನಚಿತ್ರ ನಿರ್ದೇಶಕರಾದ ಯೋಗರಾಜ ಭಟ್ರವರು ಉಪಸ್ಥಿತರಿರಲಿದ್ದಾರೆ. ಯುವ ನಿರ್ದೇಶಕ ಹಾಗೂ ಚಿತ್ರ ನಟ ರಿಷಭ್ ಶೆಟ್ಟಿ, ಬಿಗ್ ಬಾಸ್ ಸ್ಪರ್ಧಿಗಳಾದ ಧನರಾಜ್, ನವೀನ್ ಸಜ್ಜು ಹಾಗು ಇನ್ನಿತರರು ಜೊತೆಯಿರಲಿದ್ದಾರೆ.
ಕರಾವಳಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಸಾಧ್ಯತೆಗಳನ್ನು ತೆರೆದಿಟ್ಟ ರಿವರ್ ಫೆಸ್ಟ್
ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆ
ಎಂದಿನಂತೆ ಈ ಬಾರಿಯೂ ನಮ್ಮೂರ ಹಬ್ಬ ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಶನಿವಾರದಂದು ಮುಖ್ಯವಾಗಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರ ಸಾರಥ್ಯದಲ್ಲಿ ಯಕ್ಷಕೇಂದ್ರ ಉಡುಪಿಯವರಿಂದ ಯಕ್ಷ ಪದ ಧ್ವನಿ, ಪ್ರಶಾಂತ್ & ಗ್ರೂಪ್ ಕಡಿಯಾಳಿ ಅವರಿಂದ ನೃತ್ಯೋತ್ಸವ, ಸಂಗೀತ ನಿರ್ದೇಶಕರಾದ ಪ್ರವೀಣ್.ಡಿ.ರಾವ್ ಅವರ ನೇತ್ರತ್ವದಲ್ಲಿ ನಾಡಿನ ಹೆಮ್ಮೆಯ ಗಾಯಕರಾದ ಸುಪ್ರಿಯಾ ರಘುನಂದನ್, ವಿನಯ್ ನಾಡಿಗ್, ವಾರಿಜಾಶ್ರೀ ವೇಣುಗೋಪಾಲ್, ಗಣೇಶ್ ಕಾರಂತ್, ಅಖಿಲಾ ಪಜಿಮಣ್ಣು ಆಯ್ದ ಜನಪ್ರಿಯ ಭಾವಗೀತೆ ಹಾಗು ಸಿನೆಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿದ್ದಾರೆ. ಬೀಟ್ ಗುರೂಸ್ ಇವರಿಂದ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್ಬಂದಿ ಮನಸೆಳೆಯಲಿವೆ.
ಯಕ್ಷ ನೃತ್ಯ ರೂಪಕ, ನಗೆ ಹಬ್ಬ
ಭಾನುವಾರದಂದು ಮೆಲ್ಲೋ ಟ್ರೀಯವರ ಸಂಯೋಜನೆಯಲ್ಲಿ ಜನಪ್ರಿಯ ಗಾಯಕರಾದ ಅನನ್ಯ ಭಟ್, ಅನಿರುದ್ಧ್ ಶಾಸ್ತ್ರಿ, ಮೈತ್ರಿ ಅಯ್ಯರ್, ರಚನಾ ಚಂದ್ರಶೇಖರ್, ಲಿಖಿತ್ ಕರ್ಕೇರ ಅವರುಗಳು ವಿವಿಧ ಜನಪ್ರಿಯ ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ರಾಧಾಕೃಷ್ಣ ಉರಾಳ ಮತ್ತು ತಂಡದವರಿಂದ ಯಕ್ಷ ನೃತ್ಯ ರೂಪಕ, ಮನು ಹಂದಾಡಿಯವರ "ನಗೆ ಅಟ್ಟುಳಿ" ಹಾಗು ಕನ್ನಡದ ರಾಪ್ ಸ್ಟಾರ್ ಚಂದನ್ ಶೆಟ್ಟಿಯವರ ಕಾರ್ಯಕ್ರಮಗಳು ಈ ಬಾರಿಯ ನಮ್ಮೂರ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ.
ಸಹ್ಯಾದ್ರಿ ಉತ್ಸವ:ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿಕ್ಯಾಪ್ಟರ್ ಆಯೋಜನೆ
ಕಾರ್ಟೂನು ಹಬ್ಬ
ಕಾರ್ಟೂನು ಹಬ್ಬ: ಅಂತಾರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಕಾರ್ಟೂನು ಹಬ್ಬವು ವಿಶೇಷ ಆಕರ್ಷಣೆಯಾಗಿರಲಿದೆ.
ಚಪ್ಪರ: ನಮ್ಮೂರ ಹಬ್ಬದ ಬಯಲಿನ ಚಪ್ಪರದ ವೇದಿಕೆಯಲ್ಲಿ ಹಗಲಿಡೀ ಮೂಡಿಬರಲಿರುವ ಕರಾವಳಿಯ ವಿವಿಧ ಕಲೆಗಳ ಪ್ರದರ್ಶನವು ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣ ಮಾಡಲಿದೆ.
ಫೋಟೋ ಸಂತೆ, ಬಯಲಾಟ
ಫೋಟೋ ಸಂತೆ: ಖ್ಯಾತ ಛಾಯಚಿತ್ರಗಾರರಿಂದ ಸೆರೆಹಿಡಿಯಲ್ಪಟ್ಟ ಕರಾವಳಿಯ ಜನಜೀವನ ಮತ್ತು ಕಲೆಗಳ ಕುರಿತಾದ ಫೋಟೋಗಳ ಪ್ರದರ್ಶನ ನಮ್ಮೂರ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ.
ಬಯಲಾಟ: ಕಂಬಳದ ಓಟ, ದೋಣಿ ಓಟ ಇನ್ನಿತರ ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳು, ವಯಸ್ಕರರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಚಿತ್ರಕಲಾ ಹಾಗು ಮುದ್ದು ಕಂದಮ್ಮಗಳಿಗೆ ವೇಷ ಸ್ಪರ್ಧೆ 'ಮಕ್ಕಳ್ ಯಾಸ' ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಸಲಿದೆ.
ನಮ್ಮೂರ ಸಂತೆ, ತಿಂಡಿ ಹೈಲೈಟ್ಸ್
ನಮ್ಮೂರ ಸಂತೆ: ಕರಾವಳಿಯಿಂದ ತಂದ ತಾಜಾ ತರಕಾರಿಗಳು, ಅಪರೂಪದ ಗೃಹೋಪಯೋಗಿ ವಸ್ತುಗಳು ಪ್ರದರ್ಶನದ ಜೊತೆಗೆ ಮಾರಾಟಕ್ಕೆ ಲಭ್ಯವಿರಲಿದೆ.
ನಮ್ಮೂರ ತಿಂಡಿ: ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ನಮ್ಮೂರ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ.