ಚಿಕ್ಕಪೇಟೆಯಿಂದ ಮೆಜೆಸ್ಟಿಕ್ಗೆ ಬಂದಳು ಕಾವೇರಿ!
ಬೆಂಗಳೂರು, ಜೂನ್ 09 : ಚಿಕ್ಕಪೇಟೆಯಿಂದ-ಮೆಜೆಸ್ಟಿಕ್ ನಡುವಿನ ನಮ್ಮ ಮೆಟ್ರೋ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ 'ಕಾವೇರಿ' ಟಿಬಿಎಂ ಯಂತ್ರ ಹೊರಬಂದಿದೆ. ಸೆಪ್ಟೆಂಬರ್ನಲ್ಲಿ ಉತ್ತರ-ದಕ್ಷಿಣ ಕಾರಿಡಾರ್ನ ಪುಟ್ಟೇನಹಳ್ಳಿ-ನ್ಯಾಷನಲ್ ಕಾಲೇಜು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
2015ರ ಮಾರ್ಚ್ನಲ್ಲಿ ಚಿಕ್ಕಪೇಟೆಯಿಂದ ಸುರಂಗ ಕೊರೆಯಲು ಆರಂಭಿಸಿದ್ದ ಟಿಬಿಎಂ (Tunnel Boring Machine) ಕಾವೇರಿ, ಬುಧವಾರ ಸಂಜೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸಿತು. ನಮ್ಮ ಮೆಟ್ರೋದ ಅಧಿಕಾರಿಗಳು, ಕಾರ್ಮಿಕರು ಹೂ ಮಳೆ ಸುರಿಸಿ, ಚಪ್ಪಾಳೆಯೊಂದಿಗೆ ಸಂತಸದಿಂದ ಕಾವೇರಿಯನ್ನು ಬರಮಾಡಿಕೊಂಡರು. [ಸಂಪಿಗೆ ರಸ್ತೆ-ಮೆಜೆಸ್ಟಿಕ್ ಸುರಂಗ ಪೂರ್ಣ]
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮುಂತಾದವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ತನಕ ಒಟ್ಟು 747 ಮೀಟರ್ ಸುರಂಗ ಮಾರ್ಗವನ್ನು ಕಾವೇರಿ ಕೊರೆದಿದೆ. [ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?]
ಸೆಪ್ಟೆಂಬರ್ನಲ್ಲಿ ಪ್ರಾಯೋಗಿಕ ಸಂಚಾರ : ಈ ಸುರಂಗ ಮಾರ್ಗ ಪೂರ್ಣಗೊಂಡಿದ್ದರಿಂದ ಉತ್ತರ-ದಕ್ಷಿಣ ಕಾರಿಡಾರ್ನ ಸಂಪರ್ಕ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿನ ಪುಟ್ಟೇನಹಳ್ಳಿ-ನ್ಯಾಷನಲ್ ಕಾಲೇಜು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್ನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. [ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]
ಪೀಣ್ಯದಿಂದ ರೈಲು ಬರಬೇಕು : ಮಾಧ್ಯಮಗಳ ಜೊತೆ ಮಾತನಾಡಿದ ಪ್ರದೀಪ್ ಸಿಂಗ್ ಖರೋಲಾ ಅವರು, 'ಪುಟ್ಟೇನಹಳ್ಳಿ-ನ್ಯಾಷನಲ್ ಕಾಲೇಜು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಪೀಣ್ಯ ಡಿಪೋದಿಂದ ರೈಲು ಬೋಗಿಗಳನ್ನು ಸಾಗಿಸಬೇಕು' ಎಂದರು.
'ಪೀಣ್ಯದಿಂದ ಸಂಪಿಗೆ ರಸ್ತೆ-ಚಿಕ್ಕಪೇಟೆ-ಕೆ.ಆರ್.ಮಾರುಕಟ್ಟೆ-ನ್ಯಾಷನಲ್ ಕಾಲೇಜು ತನಕ ಹಳಿ ಹಾಕಬೇಕು. ಅಲ್ಲಿಯ ತನಕ ಪ್ರಾಯೋಗಿಕ ಸಂಚಾರ ಸಾಧ್ಯವಿಲ್ಲ. ಸೆಪ್ಟೆಂಬರ್ 15ರ ವೇಳೆಗೆ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ನವೆಂಬರ್ನಲ್ಲಿ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ' ಎಂದು ಹೇಳಿದರು.