ನಮ್ಮ ಮೆಟ್ರೋಗೆ ಬೀಡಿ ಸಿಗರೇಟು ಕಳ್ಳರ ಕಾಟ !
ಬೆಂಗಳೂರು, ಫೆಬ್ರವರಿ 23: ಬೀಡಿ ಸಿಗರೇಟಿಗಾಗಿ ಕಬ್ಬಿಣ ಕದಿಯುವ ಕಳ್ಳರ ಕಾಟ ಕಾಟಕ್ಕೆ ನಮ್ಮ ಮೆಟ್ರೋ ಸಂಸ್ಥೆ ಹೈರಾಣಿ ಹೋಗಿದೆ. ಮೆಟ್ರೋ ಕಾಮಗಾರಿಗೆ ಹಾಕಿರುವ ಕಬ್ಬಿಣದ ಸಾಮಾನು ರಾತ್ರೋ ರಾತ್ರಿ ಖಾಲಿಯಾಗುತ್ತಿವೆ. ಬೌನ್ಸ್ ಬೈಕ್ ನಲ್ಲಿ ಬರುವ ಕಳ್ಳರು ನಮ್ಮ ಮೆಟ್ರೋ ಕಾಮಗಾರಿಗೆ ಹಾಕಿರುವ ಸಾಮಾನು ಕದ್ದು ಮಾರಾಟ ಮಾಡುತ್ತಿದ್ದಾರೆ. ಒಂದು ತಿಂಗಳಿಂದ ಈಚೆಗೆ ಬರೋಬ್ಬರಿ 23 ಲಕ್ಷ ರೂಪಾಯಿ ಮೌಲ್ಯದ ಮೆಟ್ರೋ ವಸ್ತುಗಳನ್ನು ಮಾಯ ಮಾಡಿದ್ದಾರೆ !
ಬೀಡಿ ಸಿಗರೇಟಿಗಾಗಿ ಕಬ್ಬಿಣದ ಉಪಕರಣ ಕದಿಯುವ ಕಳ್ಳರ ಕಾಟಕ್ಕೆ ಬೇಸತ್ತ ನಮ್ಮ ಮೆಟ್ರೋ ಸಂಸ್ಥೆ ಪೊಲೀಸರ ಮೊರೆ ಹೋಗಿದೆ. ಬೈಯಪ್ಪನಹಳ್ಳಿ, ಮಹದೇವಪುರ, ರಾಮಮೂರ್ತಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಣಿ ದೂರುಗಳನ್ನು ದಾಖಲಿಸಿದೆ. ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಕಾರಣಾಂತರಗಳಿಂದ ಕಾಮಗಾರಿ ಮಂದ ಗತಿಯಲ್ಲಿ ಸಾಗುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಬ್ಬಿಣ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕುಡಿತಕ್ಕೆ, ಬೀಡಿ ಸಿಗರೇಟಿಗಾಗಿ ಕದಿಯುವ ಈ ಕಳ್ಳರು ಸತತವಾಗಿ ಕದ್ದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಮಾಯ ಮಾಡಿದ್ದಾರೆ.
ಮೆಟ್ರೋ ವಸ್ತುಗಳು ಕದ್ದಿರುವ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪಡೆದು ಪರಿಶೀಲಿಸಿದಾಗ, ರಾತ್ರಿ ವೇಳೆ ಕಳ್ಳರು ಬೌನ್ಸ್ ಬಾಡಿಗೆ ಬೈಕ್ ನಲ್ಲಿ ಬಂದು ಮೆಟ್ರೋ ಕಬ್ಬಿಣದ ಸಾಮಾನು ಕದಿಯುತ್ತಿರುವುದು ಗೊತ್ತಾಗಿದೆ. ಕೂಡಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ನಮ್ಮ ಮೆಟ್ರೋ ಸಂಸ್ಥೆ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ, ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ದೊಡ್ಡ ಕಳ್ಳರನ್ನು ಹಿಡಿಯಲಿಕ್ಕೆ ಪೊಲೀಸರಿಗೆ ಸಮಯವಿಲ್ಲ. ಇನ್ನು ಚಿಲ್ಲರೆ ಕಳ್ಳರನ್ನು ಹಿಡಿಯಲಿಕ್ಕೆ ಸಮಯ ಎಲ್ಲಿ. ಹೀಗಾಗಿ ಸಹಜವಾಗಿ ನಿರ್ಲಕ್ಷಿಸಿದ್ದಾರೆ. ಚಿಲ್ಲರೆ ಕಳ್ಳರ ಉಪಟಳಕ್ಕೆ ನಮ್ಮ ಮೆಟ್ರೋ ಸಂಸ್ಥೆ ಹೈರಾಣಿ ಹೋಗಿದೆ.