ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ
ಬೆಂಗಳೂರು, ಏಪ್ರಿಲ್ 14: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಲಾಕ್ ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಇದರಿಂದಾಗಿ ನಮ್ಮ ಮೆಟ್ರೋ ಸಂಚಾರವೂ ಸ್ಥಗಿತಗೊಂಡಿದೆ.
ಮಂಗಳವಾರ ಸಂಜೆ ಬಿಎಂಆರ್ಸಿಎಲ್ ಈ ಕುರಿತು ಆದೇಶ ಹೊರಡಿಸಿದೆ. ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್, ವಾಣಿಜ್ಯ ಚಟುವಟಿಕೆ ಸಹ ಇರುವುದಿಲ್ಲ ಎಂದು ಹೇಳಿದೆ.
ಮುಂದಿನ ಆದೇಶ ಅಥವ ಮೇ 3ರ ತನಕ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುವುದಿಲ್ಲ. ಮೆಟ್ರೋ ರೈಲು, ಹಳಿಗಳ ನಿರ್ವಹಣೆಗಾಗಿ ಪ್ರತಿದಿನ ಪರೀಕ್ಷಾರ್ಥವಾಗಿ ಎರಡು ರೈಲುಗಳು ಸಂಚಾರ ನಡೆಸಲಿವೆ. ಇವುಗಳಲ್ಲಿ ಕನಿಷ್ಠ ಸಿಬ್ಬಂದಿ ಪ್ರಯಾಣ ಮಾಡಲಿದ್ದಾರೆ.
ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ರೈಲು ಸಂಚಾರ ನಡೆಸಲಿದೆ. ಮೆಟ್ರೋ ಸೇವೆಯನ್ನು ಚಾಲನೆಯಲ್ಲಿ ಇಡಲು ಪರೀಕ್ಷಾರ್ಥ ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೇಳಿದೆ.
ಬೆಂಗಳೂರು ನಗರದಲ್ಲಿ ನೇರಳೆ ಮೈಸೂರು ರಸ್ತೆ-ಬೈಯಪ್ಪನಹಳ್ಳಿ, ಹಸಿರು ಮಾರ್ಗ ನಾಗಸಂದ್ರ-ಯೆಲಚೇನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತದೆ. ಈಗ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ರೈಲುಗಳ ಸಂಚಾರವೂ ರದ್ದುಗೊಂಡಿದೆ.