ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ
ಬೆಂಗಳೂರು, ಅಕ್ಟೋಬರ್ 25; ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶ ಸೇರಿದಂತೆ ಎಲ್ಲ ಬಗೆಯ ನಾಮಫಲಕಗಳು ಕನ್ನಡದಲ್ಲೇ ಇರಬೇಕೆಂಬ ಕಡ್ಡಾಯ ನಿಯಮ ನವೆಂಬರ್ 1ರಿಂದ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಅನುಷ್ಠಾನಗೊಳ್ಳಲಿದೆ ಎಂದು ಕನ್ನಡ ಪರ ಹೋರಾಟಗಾರ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಸಿಗಬೇಕು ಹಾಗೂ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂಬ ಹಲವು ದಶಕಗಳ ಹೋರಾಟದ ಫಲವಾಗಿ ನಾಮಫಲಕಗಳನ್ನು ಕನ್ನಡದಲ್ಲೇ ಅಳವಡಿಸುವ ಕಾನೂನು ರೂಪಿಸಲಾಗಿದೆ. ನವೆಂಬರ್ 1ರಿಂದ ಈ ನಿಯಮ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್
ಕನ್ನಡದಲ್ಲೇ ನಾಮಪಳಕ ಇರಬೇಕು ಎಂಬ ನಿಯಮಕ್ಕೆ ಕೆಲವು ಕಾನೂನು ತೊಡಕುಗಳು ಎದುರಾಗಿದ್ದವು ಆದರೆ ನೆಲದ ಭಾಷೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕಾನೂನು ಕೂಡ ನೆಲದ ಕಾನೂನಿಗೆ ವಿರುದ್ಧವಾಗಿ ಇರಲಾರದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಕಾನೂನು ತೊಡಕಿನ ಸೂಕ್ತ ಪರಿಹಾರಕ್ಕೆ ಒಪ್ಪಿಕೊಂಡಿದ್ದು, ಕನ್ನಡಕ್ಕೆ ಮಹತ್ವದ ಪ್ರಾಶಸ್ತ್ಯ ರಾಜ್ಯೋತ್ಸವದ ದಿನದಂದು ದಕ್ಕಲಿದೆ.
ನಾಮಫಲಕದಲ್ಲಿ ಕನ್ನಡವೇ ಪ್ರಧಾನ, ಸುತ್ತೋಲೆ ಹಿಂದಕ್ಕೆ?
ಈ ದಿಸೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮುಖ್ಯವಾಗಿ ಕನ್ನಡ ಅನುಷ್ಠಾನಕ್ಕೆ ವಯಕ್ತಿಕ ಆಸ್ಥೆ ತೋರುತ್ತಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ಅವರನ್ನು ಅಭಿನಂದಿಸುವೆ ಎಂದರು.
ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ
ಒಂದು ವೇಳೆ ನವೆಂಬರ್ 1ರಿಂದ ಕನ್ನಡ ನಾಮಫಲಕ ಕಡ್ಡಾಯ ನಿಯಮ ಜಾರಿಯಾಗದಿದ್ದರೆ ಕಾನೂನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಸರ್ಕಾರದ ವಿರುದ್ಧ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.