ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಕಾರ್ನಾಡ್
ಬೆಂಗಳೂರು, ನ. 10: ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡನ್ನು ಒಗ್ಗೂಡಿಸಿದ ಆತನಿಗೆ ಸರಿಸಾಟಿಯಾದ ಕನ್ನಡಿಗ ಮತ್ತೊಬ್ಬನಿಲ್ಲ, 300 ವರ್ಷಗಳಲ್ಲಿ ಇಂಥ ಕನ್ನಡಿಗ ಹುಟ್ಟೇ ಇಲ್ಲ. ಈತನ ಹೆಸರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟು ಗೌರವ ಸೂಚಿಸಬೇಕಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಲಾಗಿದೆ. ಕೆಂಪೇಗೌಡ ಸ್ವಾತಂತ್ರ್ಯ ಸೇನಾನಿ ಅಲ್ಲ, ದೇವನಹಳ್ಳಿಯಲ್ಲೇ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದು ಸೂಕ್ತ ಎಂದರು.[ಟಿಪ್ಪು ಸುಲ್ತಾನ್ ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?]
ಟಿಪ್ಪುವಿನಂಥ ಕನ್ನಡಿಗ ಮತ್ತೊಬ್ಬನಿಲ್ಲ: ಟಿಪ್ಪು ಸುಲ್ತಾನ್ ನನ್ನ ಜೀವನದ ಭಾಗವೇ ಆಗಿದ್ದಾನೆ. ಟಿಪ್ಪು ಒಬ್ಬ ರಾಜಕೀಯ ವ್ಯಕ್ತಿ ಮಾತ್ರವಲ್ಲ. ಆತ ಕನ್ನಡ ಸಾಹಿತ್ಯದ ಒಂದು ಭಾಗ. ರಂಗಭೂಮಿಯ ಒಂದು ಭಾಗ. ಟಿಪ್ಪುಗೆ ಸರಿಸಾಟಿಯಾಗಿ ಹುಟ್ಟಿದ ಮತ್ತೊಬ್ಬ ಕನ್ನಡಿಗ ಕಳೆದ ಮುನ್ನೂರು ವರ್ಷಗಳಲ್ಲಿ ಹುಟ್ಟಿಲ್ಲ ಎಂದು ಹೇಳಿದರು.
ನನ್ನ ಹೇಳಿಕೆ ವಿವಾದಕ್ಕೆ ಕಾರಣವಾಗಬಹುದು, ಆದ್ರೂ ಪರವಾಗಿಲ್ಲ. ಟಿಪ್ಪು ಮುಸ್ಲಿಂ ಅನ್ನೋ ಕಾರಣಕ್ಕೆ ಕೆಲವರು ವಿರೋಧ ಮಾಡ್ತಿದ್ದಾರೆ. ಇದರಿಂದ ಟಿಪ್ಪುಗೆ ಅನ್ಯಾಯವಾಗಿದೆ. ಒಂದು ವೇಳೆ ಹಿಂದೂವಾಗಿದ್ದರೆ ಮಹಾರಾಷ್ಟ್ರದಲ್ಲಿ ಶಿವಾಜಿಗೆ ಸಿಗುವ ಮರ್ಯಾದೆ ಸಿಗುತ್ತಿತ್ತು ಎಂದರು.[ಕೊಡಗು ಬಂದ್, ಕಲ್ಲು ತೂರಾಟದಲ್ಲಿ ಗಾಯಗೊಂಡ ವ್ಯಕ್ತಿ ಸಾವು]
ಟಿಪ್ಪು ಈ ನಾಡಿನ ಮೊದಲ ಸ್ವಾತಂತ್ರ್ಯ ಸೇನಾನಿ. ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ. ಡಾ. ಅಬ್ದುಲ್ ಕಲಾಂ, ನಾಸಾದಲ್ಲಿ ಟಿಪ್ಪು ಸುಲ್ತಾನ್ರನ್ನು ಮಿಸೈಲ್ ಮ್ಯಾನ್ ಅಂತಾ ಬಣ್ಣಿಸಿದ್ದಾರೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಜನ್ಮದಿನ ಆಚರಿಸಲಾಗುತ್ತಿದೆ. ಆದ್ರೆ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ತಪ್ಪಲ್ಲ ಎಂದು ಹೇಳಿದರು. [ಮಂಗಳೂರಲ್ಲಿ ಟಿಪ್ಪು ಜಯಂತಿಗೆ ಅಡ್ಡಿ, ಪೋಸ್ಟರ್ ಗೆ ಚಪ್ಪಲಿ ಹಾರ]
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸುವುದಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್, ಸಮಾಜ ಸುಧಾರಕ ಬಸವೇಶ್ವರ, ಮೈಸೂರಿನ ದಿವಾನರಾಗಿದ್ದ ಸರ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಪರಿಗಣಿಸಲಾಗಿತ್ತು. ಕೊನೆಗೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಒನ್ ಇಂಡಿಯಾ ಸುದ್ದಿ)