ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಪದಗ್ರಹಣ: ಗೈರಾದ ಪ್ರಮುಖ ನಾಯಕರು
ಬೆಂಗಳೂರು, ಆಗಸ್ಟ್ 27: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅಧಿಕಾರ ಸ್ವೀಕರಿಸಿದ್ದಾರೆ.
ಆರ್ಎಸ್ಎಸ್ನ ಪೂರ್ಣಾವಧಿ ಪ್ರಚಾರಕರಾಗಿ 12 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದು, ಪ್ರಖರ ಹಿಂದುವಾದಿ ಎಂದು ಹೆಸರಾಗಿದ್ದಾರೆ. ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಬಿಜೆಪಿಯಲ್ಲೇ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ, ಅಧಿಕೃತ ಘೋಷಣೆ
ಬಿಜೆಪಿಯಲ್ಲಿ ಹಲವು ಹಿರಿಯ ನಾಯಕರಿದ್ದರೂ ಸಂಸದರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಪದಗ್ರಹಣ ವೇದಿಕೆಗೆ ಬಂದು ನಿಮಿಷದಲ್ಲಿ ಜಗದೀಶ್ ಶೆಟ್ಟರ್ ವಾಪಸಾಗಿದ್ದಾರೆ.
ಕಾಡು ಮಲ್ಲೇಶ್ವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಟೀಲ್
ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ನಳಿನ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಜೊತೆಯಾದರು. ಕಾಡು ಮಲ್ಲೇಶ್ವರದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ನಂತರ ಬಿಜೆಪಿ ಕಚೇರಿಗೆ ನಾಯಕರು ಆಗಮಿಸಿದ್ದರು.
ಯಡಿಯೂರಪ್ಪ ಅವರಿಂದ ಅಧಿಕಾರ ಹಸ್ತಾಂತರ
ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲು ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಕಚೇರಿ ಎದುರಿನ ರಸ್ತೆಯಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಬಿಜೆಪಿ ಹೊಸ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಿಚಯ
ಕೇವಲ ಗೋವಿಂದ ಕಾರಜೋಳ ಹೆಸರು ಹೇಳಿದ ಯಡಿಯೂರಪ್ಪ
ಪದಗ್ರಹಣ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹೆಸರು ಪ್ರಸ್ತಾಪ ಮಾಡುವಾಗ ಕೇವಲ ಗೋವಿಂದ ಕಾರಜೋಳ ಹೆಸರನ್ನು ಮಾತ್ರ ಹೇಳಿದ್ದಾರೆ, ಇನ್ನುಳಿದ ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಹೆಸರಾಗಲಿ ಇಬ್ಬರ ಹೆಸರನ್ನೂ ಪ್ರಸ್ತಾಪ ಮಾಡದೇ ಇರುವುದು ಆಶ್ಚರ್ಯ ಮೂಡಿಸಿದೆ.
ನಳಿನ್ ಕುಮಾರ್ ಪದಗ್ರಹಣಕ್ಕೆ ಗೈರಾದ ಪ್ರಮುಖರು
ನಳಿನ್ ಕುಮಾರ್ ಕಟೀಲ್ ಪದಗ್ರಗಣ ಕಾರ್ಯಕ್ರಮಕ್ಕೆ ಆರ್ ಅಶೋಕ್, ಶ್ರೀರಾಮುಲು ಗೈರಾಗಿದ್ದಾರೆ. ಆರ್ ಅಶೋಕ್ ಮುಖ್ಯಮಂತ್ರಿ ಕಾರಿನಲ್ಲೇ ಬಂದರೂ ಕಾರ್ಯಕ್ರಮಕ್ಕೆ ಬಂದಿಲ್ಲ, ದೇವಸ್ಥಾನದಲ್ಲಿಯೇ ಶುಭ ಹಾರೈಸಿ ಹೊರಟಿದ್ದಾರೆ. ಆದರೆ ಶ್ರೀರಾಮುಲು ಮಾತ್ರ ಕಾರ್ಯಕ್ರಮಕ್ಕೆ ಬಂದಿಲ್ಲ.ಆದರೆ ಅವರಿಬ್ಬರೂ ಗೈರಾಗಲೂ ಖಾತೆ ಹಂಚಿಕೆ ಹಿಂದಿರುವ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆ.ಬಿಜೆಪಿ ರಾಜ್ಯಾಧ್ಯಕ್ಷರ ಪದಗ್ರಹಣ ವೇದಿಕೆಗೆ ಬಂದು ನಿಮಿಷದಲ್ಲಿ ಜಗದೀಶ್ ಶೆಟ್ಟರ್ ವಾಪಸಾಗಿದ್ದಾರೆ.