ಚಿತ್ರ ರಂಗದಲ್ಲೂ ವಿಕೇಂದ್ರೀಕರಣ ಅಗತ್ಯವಿದೆ: ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಜೂನ್ 28: ನಾಲ್ಕು ವಲಯಗಳಲ್ಲಿ ಸಿನಿಮೋತ್ಸವ ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಚಿತ್ರ ಸಮಾಜ ನಿರ್ಮಾಣ ಮಾಡುವ ಮೂಲಕ ಎಲ್ಲಾ ಬಗೆಯ ಸಿನಿಮಾಗಳ ಪ್ರೀತಿಯನ್ನು ಕೊಂಡೊಯ್ಯುತ್ತೇನೆ ಎಂದು ಕನ್ನಡಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ವಾರ್ತಾಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಭಿರುಚಿಯ ಸಿನಿಮಾಗಳು ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಮಾತ್ರ ಬಿಡುಗಡೆಯಾದರೆ ಸಾಲದು ಹಳ್ಳಿಗಳನ್ನು ತಲುಪಬೇಕು, ರಾಜಕೀಯ ವಿಕೇಂದ್ರೀಕರಣ ಮಾತ್ರವಲ್ಲ ಸಿನಿಮಾ ಕೂಡ ಈಗ ವಿಕೇಂದ್ರೀಕರಣಗೊಳ್ಳುವ ಅಗತ್ಯವಿದೆ ಎಂದರು.
ಜೀವನದ ಸಿದ್ಧಾಂತವೇ ಇರಲಿ, ಐಟಂ ಸಾಂಗೇ ಇರಲಿ, ಹಂಸಲೇಖರನ್ನ ಮೀರಿಸೋರಿಲ್ಲ!
ಕೆಲವು ಪುಟ್ಟ ಪುಟ್ಟ ಊರುಗಳಲ್ಲಿ ವೈಯಕ್ತಿಕ ನೆಲೆಯಲ್ಲಿ ಸದಭಿರುಚಿಯ ಸಿನಿಮಾ ಕೃಷಿ ಮಾಡುತ್ತಿರುವ ಮತ್ತು ನೋಡುತ್ತಿರುವ ವ್ಯಕ್ತಿಗಳಿದ್ದಾರೆ.ಇವರೆಲ್ಲರನ್ನೂ ಒಟ್ಟುಗೂಡಿಸಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಕ್ರಿಯಾಶೀಲ ಚಿತ್ರ ಸಮಾಜವನ್ನು ಹುಟ್ಟುಹಾಕುವ ಮೂಲಕ ಸದಭಿರುಚಿಯ ಪ್ರೇಕ್ಷಕರನ್ನು ಒಟ್ಟು ಮಾಡಿ ದೊಡ್ಡ ಆಂದೋಲನ ಮಾಡಬೇಕು ಎಂದುಕೊಂಡಿದ್ದೇನೆ,ಕೇರಳ,ಬಂಗಾಳದಲ್ಲಿ ಇಂತಹ ಆಂದೋಲನ ಕ್ರಾಂತಿ ನಡೆದಿದೆ.ವಿಶ್ವದಲ್ಲಿ ಎಲ್ಲೆಲ್ಲಿ ಫಿಲ್ಮ್ ಸೊಸೈಟಿ ಅಕ್ಟೀವ್ ಇದ್ದಾವೆ, ಅದನ್ನು ಇಲ್ಲಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದೇನೆ ಎಂದರು.
ಪದವಿ, ಪಿಜಿಗಳಲ್ಲಿ ಸಿನಿಮಾ ಕುರಿತು ಚರ್ಚೆ ಆಗಲು ಶೈಕ್ಷಣಿಕ ಸ್ವರೂಪ ತಂದುಕೊಡಬೇಕು.ಇದಕ್ಕೆ ಅಧ್ಯಯನ ಗ್ರಂಥಗಳ ಕೊರತೆ ಇದೆ, ಇಂಗ್ಲೀಷ್ ನಲ್ಲಿ ಸಾಕಷ್ಟು ಗ್ರಂಥಗಳಿವೆ.ಕನ್ನಡಕ್ಕೆ ಅನುವಾದ ಕಷ್ಟ.ಹಾಗಾಗಿ ಇರುವ ಕನ್ನಡ ಗ್ರಂಥಿಗಳನ್ನು ಪ್ರದರ್ಶನ ಮಾಡಬೇಕು.
ಯೂಟ್ಯೂಬ್ ಕೂಡ ದೊಡ್ಡ ವೇದಿಕೆಯಾಗಿದೆ, ಅವರಿಗೆ ಮಾಹಿತಿ ನೀಡುವ ಅಪ್ ಡೇಟ್ ಪುಸ್ತಕಗಳನ್ನು ಕೊಡಬೇಕು,ಪ್ರಕಟಿಸಬೇಕು,ನಮಗಿರುವ ಮಿತಿಯಲ್ಲಿ ಎಲ್ಲವನ್ನೂ ಮಾಡುವ ಪ್ರಯತ್ನ ಮಾಡುತ್ತೇನೆ ಎಂದರು.
ಅಕಾಡಮಿಗೆ ಒಳ್ಳೆಯ ಕಟ್ಟಡ ನಿರ್ಮಿಸಿದ್ದಾರೆ, ಅಲ್ಲಿ ಚಿತ್ರಮಂದಿರ ಅಪೂರ್ಣವಾಗಿದೆ ಅದನ್ನು ಬೇಗ ಪೂರ್ಣಗೊಳಿಸಬೇಕು, ಸರ್ವಶ್ರೇಷ್ಠ ಚಿತ್ರಗಳು ವಾರ್ತಾ ಇಲಾಖೆಯಲ್ಲಿ ರೀಲ್ ನಲ್ಲಿವೆ.ಅವು ಹಾಳಾಗುವ ಸಾಧ್ಯತೆ ಇದ್ದು, ಸಿನಿಮಾಗಳನ್ನು ಡಿಜಿಟಲ್ ನಲ್ಲಿಡಬೇಕು,ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದಿಷ್ಟ ದಿನದಂದೇ ನಡೆಯುವ ವ್ಯವಸ್ಥೆ ಮಾಡುತ್ತೇನೆ ಎಂದರು.