ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ
ಬೆಂಗಳೂರು ಜೂ. 27: ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಮೆರವಣಿಗೆ, ಡೊಳ್ಳು ಕುಣಿತ, ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಕೇಂಪೇಗೌಡ ಜಯಂತ್ಯೋತ್ಸವ ಅಂಗವಾಗಿ ಜ್ಯೋತಿ ಮತ್ತು ಜಾನಪದ ಕಲಾತಂಡಗಳ ಮೆರವಣಿಗೆ ನಡೆಸಲಾಯಿತು. ನಾಲ್ಕು ಗಡಿ ಗೋಪುರಗಳ ಬಳಿ ಆರಂಭವಾದ ಮೆರವಣಿಗೆ ಒಕ್ಕಲಿಗರ ಸಂಘ ಆವರಣ ತಲುಪಿತು.
ಕೆಂಪೇಗೌಡರ ಅಶ್ವಾರೂಢ ಪುತ್ಥಳಿಗೆ ಪೂಜೆ ನೆರವೇರಿಸುವ ಮೂಲಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಬಣ್ಣ ಬಣ್ಣದ ಧಿರಿಸು ಧರಿಸಿದ್ದ ವಿವಿಧ ಜಾನಪದ ಕಲಾತಂಡದ ಕಲಾವಿದರು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದರು.
ನಗರ ಮಿನರ್ವ ವೃತ್ತ, ಲಾಲ್ ಬಾಗ್ ಗೇಟ್ (ಮಾವಳ್ಳಿ) ಮತ್ತು ದ್ವಾರ, ನ್ಯಾಷನಲ್ ಕಾಲೇಜು ವೃತ್ತ ಮೂಲಕ ಸಾಗಿತು. ಒಕ್ಕಲಿಗರ ಸಂಘದ ಜತೆಗೆ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡು ನಾಡ ಧ್ವಜ ಪ್ರದರ್ಶಿಸಿ ಮೆರವಣಿಗೆಗೆ ಕಳೆ ತಂದರು. ಕೆಂಪೇಗೌಡರ ವೇಷಧಾರಿಯೊಬ್ಬರು ಕುದುರೆ ಮೇಲೆ ಕೂತು ಸಾಗಿದ ದೃಶ್ಯ ವಿಶೇಷವಾಗಿತ್ತು.
ಕೆಂಪೇಗೌಡರು ಸದಾ ಸ್ಮರಣೀಯರು: ಸಚಿವ ಕೆ.ಗೋಪಾಲಯ್ಯ
ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಸದಾಕಾಲ ಸ್ಮರಿಸುವಂತೆ ಕೊಡುಗೆ ನೀಡಿದವರು. ಅವರ ಸಾಧನೆ ಅಜರಾಮರ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿನ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರು ನೀಡಿದ ಕೊಡುಗೆ ರಾಜ್ಯದ ಯಾವ ಪ್ರಜೆಯೂ ಮರೆಯುವಂತಿಲ್ಲ. ಅಂದಿನ ಅವರ ಶ್ರಮ ಇಂದು ಹೆಮ್ಮರವಾಗಿ ಬೆಳೆದು ಬೆಂಗಳೂರು ವಿಶ್ವ ಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ" ಎಂದರು.
ಕೆಂಪೇಗೌಡರ ಪುತ್ಥಳಿಗೆ ಮೋದಿ ಅನಾವರಣ?
"ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುತ್ಥಳಿ ಲೋಕಾರ್ಪಣೆಗೊಳಿಸಲಿದ್ದಾರೆ. ಕ್ಷೇತ್ರದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹತ್ತಾರು ಉದ್ಯಾನಗಳು ಹಸಿರುಮಯವಾಗಿ ಕಂಗೊಳಿಸುತ್ತಿವೆ. ಜನರು ಗಮನಕ್ಕೆ ತಂದರೆ ಹಿಂದುಳಿದ ಉದ್ಯಾನಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು" ಎಂದು ಸಚಿವ ಕೆ. ಗೋಪಾಲಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ, ಎಸ್. ಹರೀಶ್, ರೈಲ್ವೆ ನಾರಾಯಣ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ಯಲಹಂಕದಲ್ಲಿ ಕಂಚಿನ ಪ್ರತಿಮೆ ಅನಾವರಣ
ಕೆಂಪೇಗೌಡರ 513ನೇ ಜಯಂತಿ ಪ್ರಯುಕ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ಶಾಸಕ ಎಸ್. ಆರ್. ವಿಶ್ವನಾಥ ಯಲಹಂಕ ತಾಲೂಕಿನಲ್ಲಿರುವ ತಮ್ಮ ಕಚೇರಿ ಮುಂದೆ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು. ನಂತರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಜಯಂತಿ ಆಚರಿಸಿದರು. ಬಿಬಿಎಂಪಿ ಜಂಟಿ ಆಯುಕ್ತೆ ಪೂರ್ಣಿಮಾ, ಎಇಇ ಸುಧಾಕರ್ ರೆಡ್ಡಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಯ ಕರ್ನಾಟಕ ಜನಪರ ವೇದಿಕೆಯಿಂದ ಮಾಲಾರ್ಪಣೆ
ಬಿಬಿಎಂಪಿ ಕೇಂದ್ರ ಕಚೇರಿ ಮುಂದಿನ ಕೆಂಪೇಗೌಡರ ಪ್ರತಿಮೆಗೆ ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷರು ಮತ್ತು ಪರಿಸರವಾದಿಗಳು ಬಿ.ಗುಣರಂಜನ್ ಅವರು ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ವೇದಿಕೆ ರಾಜ್ಯಾಧ್ಯಕ್ಷ, ರಾಜ್ಯ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಶಾಸಕ ಎಂ.ಕೃಷ್ಣಪ್ಪ, ಕರವೇ ಶಿವರಾಮೇಗೌಡ, ನಿರ್ಮಾಪಕ ಸಾ.ರಾ.ಗೋವಿಂದು, ಮಾಜಿ ಶಾಸಕ ರಾಮು ಸೇರಿದಂತೆ ಮೊದಲಾದವರು ವಿಜಯನಗರಲ್ಲಿರುವ ಕೆಂಪೇಗೌಡರ ಪ್ರತಿಮೆ ಮುಂದೆ ಜಯಂತಿ ಆಚರಿಸಿದರು.