ಎಬಿ-ಇನ್ಬೆವ್ ಘಟಕ ವಿಸ್ತರಣೆಯಿಂದ ಸರ್ಕಾರಕ್ಕೆ ಅಧಿಕ ತೆರಿಗೆ ಸಂಗ್ರಹ, ಉದ್ಯೋಗ ಸೃಷ್ಟಿ: ಸಿಎಂ
ಬೆಂಗಳೂರು, ನವೆಂಬರ್ 06: ಬಿಯರ್ ಮತ್ತು ಇತರ ಪಾನೀಯ ತಯಾರಿಕಾ ಕಂಪೆನಿ ಎಬಿ-ಇನ್ಬೆವ್ 500 ಕೋಟಿ ರೂ. ಸಹಿತ ವಿಸ್ತರಣೆ ಆಗಲಿದೆ. ಇದರಿಂದ ರಾಜ್ಯಕ್ಕೆ ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಎಬಿ-ಇನ್ಬೆವ್ ಅಧ್ಯಕ್ಷ ಜಾನ್ ಕ್ರಾಪ್ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ರಾಜ್ಯದಲ್ಲಿ ಕೈಗಾರಿಕಾ ಸೌಲಭ್ಯಗಳು ಉತ್ತಮವಾಗಿವೆ. ಅತ್ಯುತ್ತಮ ಅಬಕಾರಿ ನೀತಿ ಯನ್ನು ಹೊಂದಿದೆ ಎಂದು ಜಾನ್ ಕ್ರಾಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಫ್ ಐ ಸೇರಿ ಎಂದು ಪೋಸ್ಟರ್ ಅಂಟಿಸಿರುವವರ ವಿರುದ್ದ ಕ್ರಮ: ಬಸವರಾಜ ಬೊಮ್ಮಾಯಿ
ನಂತರ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಎಬಿ-ಇನ್ಬೆವ್ ತಯಾರಿಕಾ ಘಟಕ ಈಗಾಗಲೇ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆ ಸಂಸ್ಥೆಯು ಸುಮಾರು 500 ಕೋಟಿ ರೂ. ಹೂಡಿಕೆಯೊಂದಿಗೆ ಈ ಘಟಕವನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಆ ಕಂಪೆನಿ ಅಧ್ಯಕ್ಷರು ರಾಜ್ಯದಲ್ಲಿ ಇನ್ನಷ್ಟು ಹೂಡಿಕೆಲ್ಲಿ ಮಾಡಲು ಉತ್ಸುಕರಾಗಿದ್ದಾರೆ. ಇದರಿಂದ ರಾಜ್ಯದ ಭೊಕ್ಕಸಕ್ಕೆ 200-300 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದೆ ಅವರು ವಿವರಿಸಿದರು.
ಈ ಎಬಿ-ಇನ್ಬೆವ್ ವಿಶ್ವದ ಫಾರ್ಚೂನ್ 500 ಕಂಪೆನಿಗಳಲ್ಲಿ ಒಂದಾಗಿದೆ. ದೇಶದಲ್ಲಿ ಒಟ್ಟು 150 ತಯಾರಿಕಾ ಘಟಕಗಳನ್ನು ಹೊಂದಿದೆ. ಭಾರತದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ಕಂಪನಿ ವಿಸ್ತರಣೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ಒದಗಿಸಲಿದೆ ಎಂದರು.
ಹಾಲಿ ಘಟಕದಲ್ಲಿ 2,000 ಉದ್ಯೋಗಿಗಳು
ಮೈಸೂರು ಘಟಕದಲ್ಲಿ ಸುಮಾರು 2,000 ಉದ್ಯೋಗಿಗಳಿದ್ದು, ಶೇ. 79 ರಷ್ಟು ಕಾರ್ಯಾಚರಣೆಯನ್ನು ನವೀಕರಿಸಬಹುದಾದ ಇಂಧನ ಬಳಕೆಯ ಮೂಲಕ ಮಾಡುತ್ತಿದೆ. ಈ ಘಟಕದ ವಿಸ್ತರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ತೆರಿಗೆ ಸಂಗ್ರಹವಾಗದ ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚಿನ ಉದ್ಯೋಗ ಸೃಜನೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದರು.
ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಾರ್ಯದರ್ಶಿಗಳಾದ ಎಂ.ಎಸ್. ಶ್ರೀಕರ್ ಮತ್ತು ಜಯರಾಂ ರಾಯಪುರ, ಎಬಿ-ಇನ್ಬೆವ್ ಇಂಡಿಯಾ ಮತ್ತು ಸೌತ್ ಈಸ್ಟ್ ಏಷ್ಯಾದ ಅಧ್ಯಕ್ಷ ಕಾರ್ತಿಕೇಯ ಶರ್ಮಾ, ಚೀಫ್ ಲೀಗಲ್ ಅಂಡ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ಕ್ರೆಗ್ ಕೇಟರ್ ಬರ್ಗ್, ಉಪಾಧ್ಯಕ್ಷೆ ಅನಸೂಯಾ ರೇ, ಪ್ರಾದೇಶಿಕ ನಿರ್ದೇಶಕ ವಿನೋದ್ ಬಾಬು ಮತ್ತಿತರರು ಉಪಸ್ಥಿತರಿದ್ದರು.