ಒಡೆಯರ್ ರನ್ನು ಬಿಡದಂತೆ ಕಾಡಿದ 138 ಸಂಖ್ಯೆ
ಬೆಂಗಳೂರು, ಡಿ.11: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಅಗಲಿಕೆಗೆ ಕರುನಾಡು ಕಂಬನಿಗೆರೆದಿದೆ. ನಿಧನಕ್ಕೆ ಕಾರಣ ಏನು? ಅಪಶಕುನಗಳು ಮೂಢನಂಬಿಕೆಗಳು ಕಾಡಿತ್ತೆ? ಸಾವಿನ ಮುನ್ಸೂಚನೆ ಸಿಕ್ಕಿತ್ತೇ? ಎಂಬ ಪ್ರಶ್ನೆಗಳು ಒಂದೆಡೆಯಾದರೆ ವೈದ್ಯಕೀಯವಾಗಿ ಒಡೆಯರ್ ಅವರ ಸಾವಿಗೆ ಸ್ಥೂಲಕಾಯವೇ ಕಾರಣ ಎನ್ನಲಾಗಿದೆ.
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮಂಗಳವಾರ ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇತ್ತೀಚೆಗೆ ಎರಡು ಬಾರಿ ಲಿಪೊಸಕ್ಷನ್ ಸರ್ಜರಿಗೆ ಒಳಗಾಗಿದ್ದರು. ಆದರೆ, ಈಗಲೇ ಸರ್ಜರಿ ಬೇಡ ಎಂದು ಫ್ಯಾಮಿಲಿ ಡಾಕ್ಟರ್ ಅವರು ಸಲಹೆ ನೀಡಿದ್ದರೂ ಲೆಕ್ಕಿಸದೆ ಸರ್ಜರಿಗೆ ಒಳಪಟ್ಟಿದ್ದು ಅವರ ಹೃದಯಕ್ಕೆ ಘಾಸಿ ಮಾಡಿದೆ ಎನ್ನಲಾಗಿದೆ.
ಶ್ರೀಕಂಠದತ್ತ ಒಡೆಯರ್ ಅವರಿಗೆ ಸ್ಥೂಲಕಾಯ ವಂಶಪಾರಂಪಾರ್ಯವಾಗಿ ಬಂದಿತ್ತು. ವಂಶವಾಹಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಒಡೆಯರ್ ಅವರು ತಮ್ಮ ಡಯಟ್, ವ್ಯಾಯಾಮದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದರು. 2009 ರಲ್ಲಿ ಹಾಗೂ ಸಾವಿಗೂ ಕೆಲ ತಿಂಗಳುಗಳ ಮುನ್ನ liposuction ಸರ್ಜರಿಗೆ ಒಳಗಾಗಿದ್ದರು. ಹೇಗಾದರೂ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು ಎಂಬುದು ಅವರನ್ನು ಕಾಡುತ್ತಿತ್ತು ಎಂದು ಸುಮಾರು 35 ವರ್ಷಗಳಿಂದ ಒಡೆಯರ್ ಮನೆತನದ ವೈದ್ಯರಾಗಿರುವ ಡಾ. ರಮಣರಾವ್ ಹೇಳಿದ್ದಾರೆ.
2009ರಲ್ಲಿ ಲಿಪೊಸೆಕ್ಷನ್ ಚಿಕಿತ್ಸೆಗೆ ಒಳಪಟ್ಟಾಗ ಅವರ ತೂಕ 120 ಕೆಜಿ ಇತ್ತು. ಆದರೆ, ನಾಲ್ಕು ವರ್ಷಗಳಲ್ಲಿ ಸಹಜವಾಗಿ ಇಳಿಯ ಬೇಕಿದ್ದ ಮೈತೂಕ ಹೆಚ್ಚಾಗತೊಡಗಿತ್ತು. ಸಾವಿನ ದಿನ ವಿಕ್ರಮ್ ಆಸ್ಪತ್ರೆಯಲ್ಲಿ ಅವರ ತೂಕದ ಲೆಕ್ಕ ಹಾಕಿದಾಗ 118 ಕೆಜಿ ಎಂದು ತಿಳಿದು ಬಂದಿತ್ತು.
ಕಳೆದ ತಿಂಗಳು ನವೆಂಬರ್ 19 ರಂದು ಶ್ವಾಸಕೋಶದಲ್ಲಿ ಅಧಿಕ ನೀರು ತುಂಬಿಕೊಂಡಿರುವ ಸಮಸ್ಯೆಗೆ ಪರಿಹಾರ ಬಯಸಿ ಆಸ್ಪತ್ರೆ ಸೇರಿದ್ದರು. ಆಗ ಹೃದಯ ಯಾವುದೇ ಸಮಸ್ಯೆ ಇಲ್ಲದೆ ವರ್ಕ್ ಆಗುತ್ತಿತ್ತು. ಡಯಾಲಿಸಸ್ ಕೂಡಾ ಮಾಡಿರಲಿಲ್ಲ. ಮೂರು ದಿನಗಳ ನಂತರ ಮತ್ತೊಮ್ಮೆ ಚೆಕ್ ಮಾಡಿದಾಗ ತೂಕ 138 ಎಂದು ತೋರಿಸಿದ್ದು ಒಡೆಯರ್ ಗೆ ಅಚ್ಚರಿ ಮೂಡಿಸಿತ್ತು. ಒಡೆಯರ್ ಗೆ ಸ್ಥೂಲಕಾಯವಲ್ಲದೆ, ಸಿರಿಯಾಸಿಸ್, ಸರ್ಪ ಸುತ್ತು ಮುಂತಾದ 'ರಾಜ' ಕಾಯಿಲೆಗಳು ಇತ್ತು ಎನ್ನಲಾಗಿದೆ.