ತತ್ವಶಾಸ್ತ್ರದ ಅರಳುವಿಕೆಗೆ ಸಾಹಿತ್ಯವೆಂಬ ನೀರು ಮುಖ್ಯ : ಭೈರಪ್ಪ
ಬೆಂಗಳೂರು, ಜು, 06 : ತತ್ವಶಾಸ್ತ್ರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುವವರು ಸಾಹಿತ್ಯದ ಬಗ್ಗೆಯೂ ಆಳವಾದ ಜ್ಞಾನ ಹೊಂದಿರಬೇಕಾಗುತ್ತದೆ ಎಂದು ಕನ್ನಡ ಕಾದಂಬರಿಕಾರ, ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಭಾನುವಾರ ತಿಳಿಸಿದ್ದಾರೆ.
ಸಾಹಿತ್ಯ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ಫೆಲೋಷಿಪ್ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು. ಇವರು ಸುಮಾರು ೬ ದಶಕಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು, ಪ್ರಕಟಿತಗೊಂಡ ಎಲ್ಲಾ ಬರಹಗಳು, ಕಾದಂಬರಿಗಳು ಪ್ರಾದೇಶಿಕ ಎಲ್ಲೆಯನ್ನು ಮೀರಿದ್ದಂತಹವುಗಳು.[ಅಮೆರಿಕದಲ್ಲಿ ಎಸ್ಎಲ್ ಭೈರಪ್ಪನವರ ವಿಶೇಷ ಸಂದರ್ಶನ]
ತತ್ಚಜ್ಞಾನದ ಅರಿವಿಲ್ಲದವರು ನನ್ನ ಎಲ್ಲಾ ಕಾದಂಬರಿಗಳಲ್ಲಿ ತತ್ವಜ್ಞಾನ ಬಿಟ್ಟರೆ ಬೇರೇನೂ ಇರುವುದಿಲ್ಲ ಎಂದು ಗಾಳಿಸುದ್ದಿ ಹಬ್ಬಿಸಿದರು. ಆದರೆ ಬದುಕಿನ ವಾಸ್ತವತೆಯ ಹುಡುಕಾಟ ನನ್ನ ಎಲ್ಲಾ ಕಾದಂಬರಿಗಳ ಮೂಲ. ಈಗ ಹೊಸತಾಗಿ ಪ್ರಕಟಿತಗೊಳ್ಳುತ್ತಿರುವ 'ಸಾರ್ಥ' ಕಾದಂಬರಿ ತತ್ವಜ್ಞಾನವನ್ನು ಆಧರಿಸಿದ್ದು, ಸಮಾಜದ ವಿಶಾಲ ವ್ಯಾಪ್ತಿಯನ್ನು ತಲುಪಲಿದೆ ಎಂದು ಕಾದಂಬರಿಕಾರ ಭೈರಪ್ಪನವರು ಭರವಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರಾದ ವಿಶ್ವನಾಥ್ ತಿವಾರಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಕಂಬಾರ ಹಾಗೂ ಬರಹಗಾರರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.