ಮುತ್ತೂಟ್ ಫೈನಾನ್ಸ್ ದರೋಡೆ, ಗನ್ ತೋರಿಸಿ 7 ಕೋಟಿ ರೂ. ಜೊತೆ ಎಸ್ಕೇಪ್..!
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕರ್ನಾಟಕ ಬಿಟ್ಟು ನಾವು ತಮಿಳುನಾಡಿಗೆ ಎಂಟ್ರಿ ಕೊಡುವುದೇ ಕೃಷ್ಣಗಿರಿ ಜಿಲ್ಲೆಯ ಮೂಲಕ. ಇನ್ನು ಕೃಷ್ಣಗಿರಿ ಜಿಲ್ಲೆಯ ಹಾಟ್ಸ್ಪಾಟ್ ಹೊಸೂರು. ಆದರೆ ಹೊಸೂರು ಇಂದು ಬೆಳಗ್ಗೆ ಕಾದ ಕಾವಲಿಯಾಗಿತ್ತು. ಅದಕ್ಕೆ ಕಾರಣ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ನಡೆದ ಭೀಕರ ದರೋಡೆ. ಈ ಕೃತ್ಯ ಜನರನ್ನು ಬೆಚ್ಚಿಬೀಳಿಸಿತ್ತು.
ಬಂದೂಕಿನ ಸಮೇತ ಕಚೇರಿಗೆ ನುಗ್ಗಿದ್ದ ದರೋಡೆಕೊರರ ಗ್ಯಾಂಗ್ ಸುಮಾರು 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ ಮಾಡಿತ್ತು. ಹೊಸೂರು ಶಾಖೆ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕೃತ್ಯ ನಡೆದಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 6 ಬಂದೂಕುಧಾರಿಗಳು ದಿಢೀರ್ ಅಂತಾ ಕಚೇರಿಗೆ ನುಗ್ಗಿ ಮ್ಯಾನೇಜರ್ಗೆ ಬೆದರಿಕೆ ಹಾಕಿದ್ದಾರೆ.
ಬೆಳಗಿನ ಸಮಯವಾಗಿದ್ದ ಪರಿಣಾಮ ಗ್ರಾಹಕರ ಸಂಖ್ಯೆ ಕೂಡ ಕಡಿಮೆ ಇತ್ತು. ಇದು ಕೂಡ ದರೋಡೆಕೋರರಿಗೆ ನೆರವಾಗಿದೆ. ತಕ್ಷಣ ಚಿನ್ನಾಭರಣ ದೋಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆಂದು ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ನಡುಗಿ ಹೋದ ಕಚೇರಿ ಸಿಬ್ಬಂದಿ
ಘಟನೆ ಅದೆಷ್ಟು ಭಯಾನಕವಾಗಿತ್ತು ಎಂದರೆ, ಬಂದೂಕಿನ ಸಮೇತ ಆಗಂತುಕರು ಎಂಟ್ರಿ ಕೊಡುತ್ತಿದ್ದಂತೆಯೇ ಸಿಬ್ಬಂದಿಗೆ ಭಯ ಶುರುವಾಗಿ ಹೋಗಿತ್ತು. ಅಷ್ಟರಲ್ಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನೂ ಕಟ್ಟಿಹಾಕಿದ್ದರಂತೆ ಈ ಕಿರಾತಕರು. ಬಳಿಕ ಬಂದೂಕುಧಾರಿ ದರೋಡೆಕೋರರು ಮ್ಯಾನೇಜರ್ನ್ನು ಹೆದರಿಸಿ ಲಾಕರ್ ತೆಗೆಸಿದ್ದಾರೆ, ನಂತರ ಲಾಕರ್ ಒಳಗಿದ್ದ ಹತ್ತಾರು ಕೆ.ಜಿ. ಚಿನ್ನ ಲೂಟಿ ಮಾಡಿದ್ದಾರೆ.
ಸಿಸಿ ಕ್ಯಾಮೆರಾ ದೃಶ್ಯ ಆಧಾರಿಸಿ ತನಿಖೆ
ಈ ಸೀನ್ ಸದ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. 2 ವಾರ ಹಿಂದಷ್ಟೇ ಮುತ್ತೂಟ್ ಫೈನಾನ್ಸ್ನ ಕೃಷ್ಣಗಿರಿ ಶಾಖೆಯಲ್ಲೂ ಕಳ್ಳತನ ಯತ್ನ ನಡೆದಿತ್ತು. ಆದರೆ ವಿಫಲವಾಗಿತ್ತು. ಆದರೆ ಹೊಸೂರಿನಲ್ಲಿ ಆ ದುರ್ಘಟನೆ ನಡೆದೇ ಹೋಗಿದೆ.
ಚಿನ್ನದ ಜೊತೆ ದುಡ್ಡೂ ಹೋಯ್ತು
ದರೋಡೆ ಮಾಡಿದ ಗ್ಯಾಂಗ್ 7 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳ ಜೊತೆಯಲ್ಲೇ ಸುಮಾರು 96 ಸಾವಿರ ರೂಪಾಯಿ ನಗದನ್ನೂ ಎಗರಿಸಿದೆ. ಇದು ಥೇಟ್ ಸಿನಿಮಾ ಸ್ಟೈಲ್ ದರೋಡೆ ಆಗಿತ್ತೆಂದು ಘಟನೆ ನೋಡಿದವರು ವಿವರಿಸುತ್ತಿದ್ದಾರೆ.
Recommended Video
ದರೋಡೆಕೋರರಿಗೆ ಬಲೆ ಬೀಸಿದ್ದಾರೆ
ತಮಿಳುನಾಡಿನ ಹೊಸೂರು ಪೊಲೀಸರು ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಕೊಟ್ಟ ಮಾಹಿತಿ ಮತ್ತು ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ದರೋಡೆಕೋರರಿಗೆ ಬಲೆ ಬೀಸಿದ್ದಾರೆ. ತಮಿಳುನಾಡು ಗಡಿ ಭಾಗಗಳು ಸೇರಿದಂತೆ ರಾಜ್ಯದ ಉದ್ದಗಲಕ್ಕೂ ತಮಿಳುನಾಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.