ರೇವಾ ವಿಶ್ವವಿದ್ಯಾಲಯವನ್ನು ಕೊಂಡಾಡಿದ ನಾದಬ್ರಹ್ಮ ಹಂಸಲೇಖ
ಬೆಂಗಳೂರು, ಜೂನ್ 05 : ರೇವಾ ವಿಶ್ವವಿದ್ಯಾಲಯ ಹಚ್ಚ ಹಸಿರಿನ ನಿತ್ಯ ತೋರಣದ ವಿದ್ಯಾ ದೇವಾಲಯ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.
ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧ್ಯಮಕೇಂದ್ರ(ಮೀಡಿಯಾ ಸೆಂಟರ್)ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಒತ್ತಡದ ಮತ್ತು ಸಂಚಾರ ದಟ್ಟಣೆಯ ಕಿಷ್ಕಿಂದೆ ಎಂದು ಹೆಸರಾಗುತ್ತಿದೆ.
ವಿಧಾನದ ಸೌಧದ ಲಿಫ್ಟ್ ಗಳಲ್ಲಿ 'ಹಚ್ಚೇವು ಕನ್ನಡದ ದೀಪ' ಕಂಪು
ಅಂತಹ ಆಲೋಚನೆಗಳಿಂದ ಹೊರ ಬರಲು ಬೆಂಗಳೂರಿನಿಂದ ಕೊಂಚ ಹೊರವಲಯದಲ್ಲಿ ರೇವಾ ವಿದ್ಯಾದೇವಾಲಯವಿದೆ. ಇದರ ಮಾಧ್ಯಮಕೇಂದ್ರದ ಉದ್ಘಾಟನೆಗೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಇದು ನನ್ನ ಪುಣ್ಯ. ಈ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದೆ. ಆದರೆ ಇವತ್ತು ನೋಡುವಂತಹ ಭಾಗ್ಯ ಲಭಿಸಿದೆ.
ಒಳಗೆ ಬಂದು ನೋಡಿದಾಗ ಇದೊಂದು ಹಚ್ಚ ಹಸಿರಿನ ನಿತ್ಯ ತೋರಣವೆಂದು ಭಾಸವಾಯಿತು ಎಂದರು. ಈ ರೇವಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮಕೇಂದ್ರವನ್ನು ವೃತ್ತಿಪರವಾಗಿ ನಿರ್ಮಾಣ ಮಾಡಲಾಗಿದೆ. ಇಂತಹ ಕೇಂದ್ರ ಉದ್ಘಾಟನೆಗೊಳ್ಳುವ ಮೂಲಕ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಅವರ ಕನಸು ನನಸಾಗಿದೆ ಎಂದು ಪ್ರಶಂಸಿಸಿದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜುರವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ಉದ್ಘಾಟನೆಗೊಂಡಿರುವ ಸ್ಟುಡಿಯೋದಿಂದ ಪತ್ರಿಕೋದ್ಯಮ ಮತ್ತು ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ತರಗತಿಯಲ್ಲಿ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪದವಿಯ ಜತೆಗೆ ತಂತ್ರಜ್ಞಾನಗಳ ಬಗ್ಗೆಯೂ ತಿಳಿದು ಹೊರಜಗತ್ತಿಗೆ ಕಾಲಿಡಲಿ ಎಂಬ ಉದ್ದೇಶದಿಂದ ಈ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಮಲ್ಟಿ ಮೀಡಿಯಾ, ಮೀಡಿಯಾ ಎಡಿಟಿಂಗ್, ಅನಿಮೇಶನ್ ತಂತ್ರಜ್ಞಾನ, ಕಂಪ್ಯೂಟರ್ ಗ್ರಾಫಿಕ್ಸ್, ಆನ್ಲೈನ್ ವಿಡಿಯೋ ಎಡಿಟಿಂಗ್, ಕ್ಯಾಂಪಸ್ ಟಿ.ವಿ., ಕ್ಯಾಂಪಸ್ ರೇಡಿಯೋ, ವೆಬ್ ರೇಡಿಯೋ ಹಾಗೂ ವಾರ್ತಾ ನಿರೂಪಣೆ, ಚರ್ಚೆಗೆ ಸಂಬಂಧಿಸಿದ ಸ್ಟುಡಿಯೋಗಳು ಮಾಧ್ಯಮ ಕೇಂದ್ರದಲ್ಲಿದ್ದು, ಒಂದು ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.