ಕ್ರೈಮ್ ಸ್ಟೋರಿ: ಒಂದು ಸೆಲ್ಫಿಯಿಂದ ಸಿಕ್ಕಿಬಿದ್ದ ಕೊಲೆಗಾರ
ಬೆಂಗಳೂರು, ಮೇ 24: ಕ್ರೈಮ್ ಸ್ಟೋರಿಗಳು ಎಷ್ಟು ಭಯಾನಕವೋ ಅಷ್ಟೇ ಕುತೂಹಲಕರವೂ ಇರುತ್ತವೆ. ಯಾವುದೇ ಕೊಲೆಗಾರ ಎಂಥಾದರೂ ಒಂದು ಸುಳಿವು ಬಿಟ್ಟೇ ಇರುತ್ತಾನೆ ಎಂಬುದು ಓಪನ್ ಸೀಕ್ರೆಟ್ಗಳಲ್ಲಿ ಒಂದು. ಕೆಲ ಪ್ರಕರಣಗಳಲ್ಲಿ ಕೊಲೆಗಾರ ಎಷ್ಟೇ ಚಾಲಾಕಿಯಾದರೂ ಏನಾದರೂ ಒಂದು ಯಡವಟ್ಟು ಮಾಡಿ ಪೊಲೀಸರಿಗೆ ಸುಳಿವು ಕೊಡುವುದುಂಟು. ಇಂಥದ್ದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಗಾರನೊಬ್ಬ ಸೆಲ್ಫೀ ತೆಗೆದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನೇ ಮೈಸೂರು ನಿವಾಸಿ ಮಧುಸೂದನ್. ಐದು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಈತ ಸೆಲ್ಫಿ ಯಡವಟ್ಟು ಮತ್ತೆ ಕಂಬಿ ಎಣಿಸುವಂತೆ ಮಾಡಿದೆ.
35 ವರ್ಷದ ಮಧುಸೂದನ್ ಅಲಿಯಾಸ್ ಮಧು ಸೇರಿ ಏಳು ಮಂದಿಯ ತಂಡ 2014ರ ಮಾರ್ಚ್ 5ರಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ರೊಬ್ಬರನ್ನು ಹತ್ಯೆ ಮಾಡಿರುತ್ತಾರೆ. 65 ವರ್ಷದ ಆ ವೃದ್ಧ ಉದಯ್ ರಾಜ್ ಸಿಂಗ್ ಅವರನ್ನು ಕೊಂದದ್ದಲ್ಲದೆ ಅವರ ಪತ್ನಿ ಸುಶೀಲಮ್ಮರಿಗೆ ಇರಿದು ಗಾಯಗೊಳಿಸಿರುತ್ತಾರೆ. ಬಳಿಕ ಕೋಟ್ಯಂತರ ರೂ ಮೌಲ್ಯದ ವಜ್ರದ ಹಾರವನ್ನು ಕದ್ದೊಯ್ದಿರುತ್ತಾರೆ.
ಬೈಕ್ ಕಳ್ಳರ ಬಂಧನ: ಹತ್ತು ಲಕ್ಷ ಮೌಲ್ಯದ ಬೈಕ್ಗಳು ವಶ!
ನಷ್ಟದಲ್ಲಿದ್ದ ಮಧು
ಮಧುಸೂದನ್ ಖಾಸಗಿ ಬ್ಯಾಂಕ್ನಲ್ಲಿ ಸಹಾಯಕ ಮ್ಯಾನೇಜರ್ ಆಗಿರುತ್ತಾನೆ. ತಮ್ಮ ಸ್ನೇಹಿತರ ಜೊತೆಗೂಡಿ ಫ್ರಾಂಚೈಸಿ ಟ್ರೇಡಿಂಗ್ ಕಂಪನಿ ಆರಂಭಿಸುತ್ತಾನೆ. ಆದರೆ, ಒಂದು ಕೋಟಿ ರೂಗೂ ಅಧಿಕ ಮೊತ್ತದಷ್ಟು ನಷ್ಟ ಮಾಡಿಕೊಳ್ಳುತ್ತಾನೆ. ಅಧೇ ವೇಳೆ ಉದಯ್ ರಾಜ್ ಸಿಂಗ್ ತಮ್ಮ ಬಳಿ ಇದ್ದ ಪುರಾತನ ಚಿನ್ನ ಮತ್ತು ಡೈಮಂಡ್ ನೆಕ್ಲೇಸ್ ಅನ್ನು ಮಾರುವುದಾಗಿ ಆನ್ಲೈನ್ನಲ್ಲಿ ಜಾಹೀರಾತು ನೀಡುತ್ತಾರೆ. ಆಗ ಮಧು ಕ್ರಿಮಿನಲ್ ಆಲೋಚನೆ ಜಾಗೃತವಾಗುತ್ತದೆ. ವಜ್ರದ ಹಾರ ಕೊಳ್ಳುವ ಸೋಗಿನಲ್ಲಿ ಮಧು ಮತ್ತವನ ಸಹಚರರು ಸಿಂಗ್ ಮನೆಗೆ ಹೋಗುತ್ತಾರೆ. ಅವರ ಕತ್ತು ಸೀಳಿ ಸಾಯಿಸುತ್ತಾರೆ. ಅವರ ಪತ್ನಿಗೂ ಇರಿದು ಗಂಭೀರವಾಗಿ ಗಾಯಗೊಳಿಸಿ ಆಭರಣ ಸಮೇತ ಪರಾರಿಯಾಗುತ್ತಾರೆ.
ಕುಡಿತ ಬಿಡು ಎಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಕೊಂದ ಕುಡುಕ ತಂದೆ
ಬೇಲ್ ಪಡೆದು ಪರಾರಿ
ಈ ಪ್ರಕರಣವನ್ನು ಪೊಲೀಸರು ಭೇದಿಸಿ ಎಲ್ಲಾ ಆರೋಪಿಗಳನ್ನೂ ಬಂಧಿಸುತ್ತಾರೆ. ಆದರೆ, 2017 ಮೇ ತಿಂಗಳಲ್ಲಿ ಮಧುಸೂದನ್ಗೆ ಹೈಕೋರ್ಟ್ ಜಾಮೀನು ಕೊಡುತ್ತದೆ. ಆದರೆ, ಬೇಲ್ ಸಿಗುತ್ತಿದ್ದಂತೆಯೇ ಪಾತಕಿ ಮಧು ನಾಪತ್ತೆಯಾಗಿಬಿಡುತ್ತಾನೆ. 2019ರಲ್ಲಿ ಆರೋಪಿಗಳು ಪಾತಕಕೃತ್ಯ ಎಸಗಿದ್ದು ಸಾಬೀತಾಗಿ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟವಾಗಿದೆ. ಆದರೆ, ಮಧುಸೂದನ್ ಮಾತ್ರ ನಾಪತ್ತೆಯಾಗಿರುತ್ತಾನೆ. ಪೊಲೀಸರು ಎಷ್ಟೇ ಬಲೆಬೀಸಿದರೂ ಈತನ ಸುಳಿವು ಸಿಗುವುದಿಲ್ಲ. ಇದೇ ವೇಳೆ, ಜಾಮೀನು ಪಡೆದು ಪರಾರಿಯಾಗುವ ಕ್ರಿಮಿನಲ್ಗಳ ಮೇಲೆ ನಿಗಾ ಇರಿಸಲೆಂದೇ ಬೆಂಗಳೂರು ಪೊಲೀಸರ ಒಂದು ತಂಡ ಇದೆ. ಆದರೂ ಬಹಳ ಕಾಲ ಈತನ ಸುಳಿವು ಪೊಲೀಸರಿ ಸಿಗುವುದಿಲ್ಲ.
ಅಪರಿಚಿತ ವ್ಯಕ್ತಿ ತೋರಿಸಿದ ಫೋಟೋ
ಪಾತಕಿ ಮಧುಸೂದನ್ ತನ್ನ ಸ್ನೇಹಿತನೊಂದಿಗೆ ತೆಗೆಸಿಕೊಂಡ ಸೆಲ್ಫಿ ಫೋಟೊ ಫೇಸ್ಬುಕ್ನಲ್ಲಿ ಪೋಸ್ಟ್ ಆಗುತ್ತದೆ. ಆಗಂತುಕ ವ್ಯಕ್ತಿಯೊಬ್ಬರು ಆಡುಗೋಡಿ ಠಾಣೆಗೆ ಹೋಗಿ ಮಧು ಫೋಟೋ ಬಗ್ಗೆ ಪೊಲೀಸರ ಗಮನಕ್ಕೆ ತರುತ್ತಾರೆ. ಪೊಲೀಸರು ಆ ಫೋಟೋದಲ್ಲಿರುವುದು ಮಧುವೇ ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುತ್ತಾರೆ.
ಪಟ್ನಾ, ಪುಣೆಯಲ್ಲಿ ಕೆಲಸ
ಎಂಬಿಎ ಓದಿರುವ ಪಾತಕಿ ಮಧುಸೂದನ್ ಜೈಲಿನಿಂದ ಹೊರಬಂದು ತಪ್ಪಿಸಿಕೊಂಡ ಬಳಿಕ ತನ್ನ ಹೆಸರು ಬದಲಾಯಿಸಿಕೊಂಡು ಪಟ್ನಾ, ಪುಣೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ. ಇತ್ತೀಚೆಗಷ್ಟೇ ಆತ ತನ್ನ ಸ್ನೆಹಿತನನ್ನು ನೋಡಲೆಂದು ಬೆಂಗಳೂರಿಗೆ ಬಂದಿರುತ್ತಾನೆ. ಪೀಣ್ಯ ಬಳಿಯ ಮಾಲ್ವೊಂದಕ್ಕೆ ಇಬ್ಬರೂ ಹೋಗಿದ್ದಾಗ ಒಂದು ಸೆಲ್ಫೀ ತೆಗೆದುಕೊಳ್ಳುತ್ತಾರೆ. ಈತನ ಸ್ನೇಹಿತ ಆ ಫೋಟೋವನ್ನು ಫೇಸ್ಬುಕ್ಗೆ ಪೋಸ್ಟ್ ಮಾಡುತ್ತಾನೆ. ಈ ರೀತಿಯಲ್ಲಿ ಮಧು ಸಿಕ್ಕಿಬಿದ್ದಿದ್ದಾನೆ.
(ಒನ್ಇಂಡಿಯಾ ಸುದ್ದಿ)
Recommended Video