ಶಾಸಕ ಬೈರತಿ ಸುರೇಶ್ ಹತ್ಯೆ ಪ್ರಯತ್ನಕ್ಕೆ ಕಾರಣವೇನು?
ಬೆಂಗಳೂರು, ಅಕ್ಟೋಬರ್ 18: ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಹತ್ಯೆಗೆ ಯುವಕನೊಬ್ಬ ಪ್ರಯತ್ನಿಸಿದ ಘಟನೆ ವರದಿಯಾಗಿದೆ.
ಶುಕ್ರವಾರ ಬೈರತಿ ಸುರೇಶ್ ಅವರ ನಿವಾಸದ ಎದುರೇ ಶುಕ್ರವಾರ ಮಧ್ಯಾಹ್ನ ಈ ಹತ್ಯೆ ಪ್ರಯತ್ನ ನಡೆದಿದ್ದು, ಚಾಕುವಿನಿಂದ ಇರಿದು ಅವರನ್ನು ಕೊಲೆ ಮಾಡಲು ಯುವಕನೊಬ್ಬ ಮುಂದಾಗಿದ್ದ. ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸುರೇಶ್ ಪಾರಾಗಿದ್ದಾರೆ. ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕೆಆರ್ ಪುರಂನ ಬೈರತಿ ಗ್ರಾಮದ ಸಮೀಪದಲ್ಲಿನ ಅವರ ಮನೆ ಎದುರು ದಾಳಿಗೆ ಮುಂದಾದ ವ್ಯಕ್ತಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಬಡಗಿಯಾಗಿರುವ ಈತ ಬೈರತಿ ಸುರೇಶ್ ಅವರ ಮನೆ ಪಕ್ಕದಲ್ಲಿಯೇ ವಾಸವಾಗಿದ್ದು, ಆತನ ತಾಯಿ ಶಾಸಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
'ಆತನನ್ನು ಚಿಕ್ಕಮಗುವಿನಿಂದ ನೋಡುತ್ತಿದ್ದೇನೆ. ಆತನ ತಾಯಿ ನನ್ನ ಮನೆಯಲ್ಲಿಯೇ ಕೆಲಸ ಮಾಡುತ್ತಾರೆ. ನಮ್ಮ ಜತೆ ಆತ ಚೆನ್ನಾಗಿಯೇ ಇದ್ದ. ಅವರ ಕುಟುಂಬಕ್ಕೆ ಎಲ್ಲ ನೆರವುಗಳನ್ನು ನೀಡಿದ್ದೆವು, ಮನೆ ಕಟ್ಟಿಸಿಕೊಟ್ಟಿದ್ದೆವು. ಆದರೆ ಆತ ಏಕೆ ಈ ಪ್ರಯತ್ನ ನಡೆಸಿದ್ದಾನೆ ಎನ್ನುವುದು ಗೊತ್ತಾಗಿಲ್ಲ' ಎಂದು ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಬೈರತಿ ಸುರೇಶ್ ತಿಳಿಸಿದ್ದಾರೆ.
ಸಂಚು ಏನೆಂದು ಗೊತ್ತಾಗಲಿಲ್ಲ
'ಮನೆಯಿಂದ ಹೊರಗೆ ಬಂದಾಗ ಆತ ಮಾತನಾಡುವ ನೆಪದಲ್ಲಿ ಚಾಕುವಿನಿಂದ ಇರಿಯಲು ಮುಂದಾಗಿದ್ದ. ಆದರೆ ಆತ ಸ್ವಲ್ಪ ದೂರದಲ್ಲಿ ಇದ್ದಿದ್ದರಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲ. ಕೂಡಲೇ ನಮ್ಮ ಗನ್ಮ್ಯಾನ್ ಮತ್ತು ಇತರರು ಆತನನ್ನು ಹಿಡಿದುಕೊಂಡರು. ಆತ ಬಡಕುಟುಂಬದ ಹುಡುಗ. ಆತ ಏಕೆ ಕೊಲೆ ಮಾಡಲು ಪ್ರಯತ್ನಿಸಿದ, ಈ ಸಂಚು ಏನು ಏನಿರಬಹುದು, ಇದಕ್ಕೆ ಕಾರಣಗಳೇನು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ' ಎಂದು ಹೇಳಿದರು.
ನನಗೆ ಯಾವ ಶತ್ರುಗಳಿಲ್ಲ
'ನನಗೆ ಯಾವ ಶತ್ರು ಕೂಡ ಇಲ್ಲ. ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ನನ್ನೊಂದಿಗೆ ದ್ವೇಷ ಸಾಧಿಸಿದವರು ಇಲ್ಲ. ನನ್ನ ಮೇಲೆ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣವೂ ಇಲ್ಲ. ಈ ಘಟನೆಯ ಹಿನ್ನೆಲೆ ಏನೆಂದು ತಿಳಿದುಕೊಳ್ಳಬೇಕಾಗಿದೆ. ಪೊಲೀಸ ವಶದಲ್ಲಿರುವುದರಿಂದ ಅವರು ತನಿಖೆ ನಡೆಸಲಿದ್ದಾರೆ' ಎಂದು ಹೇಳಿದರು.
ಬಾಕ್ಸರ್ ಥರ ಆಗಿದ್ದ
'ಆತನಿಗೆ ಅಂದಾಜು 35 ವರ್ಷ ಇರಬಹುದು. ಆತನ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಆದರೆ 2-3 ದಿನದಿಂದ ಇಲ್ಲಿಯೇ ಮನೆ ಸಮೀಪ ಓಡಾಡುತ್ತಿದ್ದ ಎಂದು ಈಗ ಎಲ್ಲರೂ ಹೇಳುತ್ತಿದ್ದಾರೆ. ಇಲ್ಲಿಯೇ ಬೆಳೆದವನಾಗಿದ್ದರಿಂದ ಆತನ ಮೇಲೆ ಅನುಮಾನ ಬರಲು ಸಾಧ್ಯವಿಲ್ಲ. ಕೆಲವು ದಿನದ ಮುಂಚೆ ಅವನನ್ನು ನೋಡಿದ್ದೆ ಆಗ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಇಂದು ಬಾಕ್ಸರ್ ಥರ ಆಗಿದ್ದ' ಎಂದರು.
ಕಾರಿಗೆ ಗುದ್ದಿ ಹೋಗಿದ್ದ
'ಮೊದಲು ಆತ ನನ್ನ ಕಾರಿಗೆ ಬೈಕ್ನಿಂದ ಗುದ್ದಿಸಿದ್ದ. ಬಳಿಕ ವಾಪಸ್ ಬಂದು ಚಾಕುವಿನಿಂದ ಇರಿದು ಹಲ್ಲೆಗೆ ಪ್ರಯತ್ನಿಸಿದ್ದಾನೆ. ಆತ ಯಾಕೆ ಹೀಗೆ ಮಾಡಿದ್ದಾನೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ಘಟನೆ ಬಗ್ಗೆ ಗೃಹಸಚಿವರು ಕರೆ ಮಾಡಿ ನನ್ನೊಂದಿಗೆ ಮಾತನಾಡಿದರು' ಎಂದು ತಿಳಿಸಿದರು.
ಅಪಘಾತವೇ ಕಾರಣ
ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರು ಮತ್ತು ಬೈಕಿನ ನಡುವೆ ಅಪಘಾತ ಉಂಟಾಗಿದೆ. ಈ ಅಪಘಾತವೇ ಹಲ್ಲೆಯ ಪ್ರಯತ್ನಕ್ಕೆ ಕಾರಣ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ. ಅಪಘಾತದ ಬಳಿಕ ಗಲಾಟೆಯಾಗಿದೆ. ಆಗ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸುರೇಶ್ ಅವರ ಕಾರಿನ ನಂಬರ್ ಪ್ಲೇಟ್ ಪುಡಿಯಾಗಿದೆ. ಅಪಘಾತವೇ ಹಲ್ಲೆಯ ಪ್ರಯತ್ನಕ್ಕೆ ಕಾರಣ ಎಂದಾಗಿದ್ದರೆ ಆತನ ಬಳಿ ಚಾಕು ಏಕೆ ಇತ್ತು ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ದ್ವೇಷ ರಾಜಕಾರಣ-ಕಾಂಗ್ರೆಸ್ ಆರೋಪ
ಹೆಬ್ಬಾಳದ ನಮ್ಮ ಪಕ್ಷದ ಶಾಸಕರಾದ ಭೈರತಿ ಸುರೇಶ್ ಅವರ ಹತ್ಯೆ ಮಾಡಲು ನಡೆದಿರುವ ಯತ್ನ ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ. ದೇಶ ಹಾಗೂ ರಾಜ್ಯ ರಾಜಕಾರಣದಲ್ಲಿ "ದ್ವೇಷ" ತಾಂಡವವಾಡುತ್ತಿದೆ. ಕೂಡಲೇ ಸರ್ಕಾರ ಸುರೇಶ್ ಅವರಿಗೆ ಸೂಕ್ತ ರಕ್ಷಣೆ ನೀಡಿ, ಈ ಪ್ರಕರಣದ ಸಮಗ್ರ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸ್ಪರ್ಧೆ ತಡೆಯುವ ಹುನ್ನಾರ
ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಮೇಲೆ ಹತ್ಯೆಯ ಯತ್ನ ನಡೆಸುವ ಮೂಲಕ ಮುಂದೆ ನಡೆಯುವ ಉಪ ಚುನಾವಣೆಗಳಲ್ಲಿ ಇವರ ಕುಟುಂಬವರ್ಗ ಸ್ಪರ್ಧಿಸದಂತೆ ತಡೆಯುವ ಹುನ್ನಾರ ಇದಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಕೃತ್ಯ ಆತಂಕಕಾರಿ ಮತ್ತು ಭವಿಷ್ಯದಲ್ಲಿ ಏಕಪ್ರಭುತ್ವ ಹೇರುವ ಹುನ್ನಾರ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಆರೋಪಿಸಿದ್ದಾರೆ.