ಪ್ರೇಯಸಿಯಿಂದ ಉದ್ಯಮಿ ಆರ್. ಪ್ರಭಾಕರ ರೆಡ್ಡಿ ಹತ್ಯೆ ಯತ್ನ
ಬೆಂಗಳೂರು, ಸೆಪ್ಟೆಂಬರ್ 24 : ರಿಯಲ್ ಎಸ್ಟೇಟ್ ಉದ್ಯಮಿ ಆರ್. ಪ್ರಭಾಕರ ರೆಡ್ಡಿ ಹತ್ಯೆಯತ್ನ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೃತ್ಯ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಭಾಕರ ರೆಡ್ಡಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ನೈಸ್ ರಸ್ತೆಯಲ್ಲಿ ಶುಕ್ರವಾರ ಈ ಕೃತ್ಯ ನಡೆದಿದೆ. ಪ್ರೇಯಸಿಯ ಜೊತೆ ಆರ್. ಪ್ರಭಾಕರ ರೆಡ್ಡಿ ಕಾರಿನಲ್ಲಿ ಹೋಗುವಾಗ ಅವರನ್ನು ಪ್ರೇಯಸಿಯೇ ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ: ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ
ಕಾರಿನ ಸೀಟ್ ಬೆಲ್ಟ್ ಅನ್ನು ಪ್ರಭಾಕರ ರೆಡ್ಡಿ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದಾರೆ. ಪ್ರಭಾಕರ ರೆಡ್ಡಿ ಜೋರಾಗಿ ಕಿರುಚಿಕೊಂಡಿದ್ದು, ಕಾರಿನ ಗ್ಲಾಸ್ ಇಳಿಸಿದ್ದಾರೆ. ಆಗ ಜನರು ಅಲ್ಲಿಗೆ ಬಂದಿದ್ದು, ಪ್ರೇಯಸಿ ಓಡಿ ಹೋಗಿದ್ದಾಳೆ.
ಪ್ರೇಯಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರ್. ಪ್ರಭಾಕರ ರೆಡ್ಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಪ್ರೇಯಸಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಪ್ರೇಯಸಿ ಪವಿತ್ರಾ
ರಿಯಲ್ ಎಸ್ಟೇಟ್ ಉದ್ಯಮಿ ಆರ್. ಪ್ರಭಾಕರ ರೆಡ್ಡಿಯನ್ನು ಪ್ರೇಯಸಿ ಪವಿತ್ರಾ ಎಂಬುವವರು ಹತ್ಯೆ ಮಾಡಲು ಯತ್ನಿಸಿದ್ದಾರೆ. ಪವಿತ್ರಾಳನ್ನು 2ನೇ ಪತ್ನಿ ಎಂದು ಪ್ರಭಾಕರ ರೆಡ್ಡಿ ಹೇಳಿಕೊಂಡಿದ್ದರು. ಅವರ ಜೊತೆಗೆ 2 ವರ್ಷದಿಂದ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದರು. ಆರ್. ಆರ್. ನಗರದಲ್ಲಿ ಆಕೆಗಾಗಿ ಮನೆಯನ್ನು ಕಟ್ಟಿಸಿಕೊಟ್ಟಿದ್ದರು.
ಆಸ್ತಿಗಾಗಿ ಹತ್ಯೆ ಯತ್ನ
ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪವಿತ್ರಾ ಹಲವು ದಿನದಿಂದ ಒತ್ತಾಯಿಸುತ್ತಿದ್ದರು. ಇದೇ ವಿಚಾರಕ್ಕಾಗಿ ಪ್ರಭಾಕರ ರೆಡ್ಡಿ ಮತ್ತು ಪವಿತ್ರಾ ನಡುವೆ ಜಗಳವೂ ನಡೆದಿತ್ತು. ಶುಕ್ರವಾರ ಕಾರಿನಲ್ಲಿಯೂ ಇದೇ ವಿಚಾರ ಮಾತನಾಡುತ್ತಿದ್ದರು. ಆಗ ಆಸ್ತಿಯನ್ನು ಬರೆದುಕೊಡಲು ಪ್ರಭಾಕರ ರೆಡ್ಡಿ ನಿರಾಕರಿಸಿದ್ದಾರೆ. ಆಗ ಸೀಟ್ ಬೆಲ್ಟ್ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಲು ಪವಿತ್ರಾ ಪ್ರಯತ್ನ ನಡೆಸಿದ್ದಾಳೆ.
ಪೊಲೀಸರು ಬಂಧಿಸಿದ್ದರು
ಭೂ ಕಬಳಿಕೆ, ವಂಚನೆ ಪ್ರಕರಣದಲ್ಲಿ ಆರ್. ಪ್ರಭಾಕರ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಆಗ ಪವಿತ್ರಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಳು. ಸಿಸಿಬಿ ಪೊಲೀಸರು ಆಗ ಆಕೆಯನ್ನು ಬಂಧಿಸಿದ್ದರು.
ಚುನಾವಣೆಗೆ ನಿಂತಿದ್ದರು
2014ರ ಲೋಕಸಭಾ ಚುನಾವಣೆಗೆ ಆರ್. ಪ್ರಭಾಕರ ರೆಡ್ಡಿ ಜೆಡಿಎಸ್ನಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಸರ್ಕಾರಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಅವರ ವಿರುದ್ಧ 20 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.