ಸಿದ್ದರಾಮಯ್ಯ ಹೇಳಿಕೆಗೆ ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಮುನಿರತ್ನ!
ಬೆಂಗಳೂರು, ಅ. 28: ಆರ್ ಆರ್ ನಗರ ಬಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಣ್ಣೀರು ಹಾಕಿದ್ದಾರೆ. ರಾಜಕಾರಣಿಗಳು ಕಣ್ಣೀರು ಹಾಕುವುದು ಸಾಮಾನ್ಯವೇ. ಆದರೆ ಮುನಿರತ್ನ ಅವರು ಕಣ್ಣೀರು ಹಾಕಿರುವುದರ ಹಿಂದೆ ಮನಮಿಡಿಯುವ ಕಥೆಯಿದೆ. ಅಷ್ಟಕ್ಕೂ ಅವರು ಕಣ್ಣೀರು ಹಾಕಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಒಂದು ಕಾಲದಲ್ಲಿ ರಾಜಕೀಯ ಗುರುವಾಗಿದ್ದ ಸಿದ್ದರಾಮಯ್ಯ ಅವರ ಹೇಳಿಕೆಯಿಂದ.
Recommended Video
ಹೌದು ನಿನ್ನೆ ಆರ್ ಆರ್ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದಿನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಪ್ರಚಾರ ನಡೆಸಿದ್ದರು. ಅವರು ಯಶವಂತಪುರದಲ್ಲಿ ಪ್ರಚಾರ ಮಾಡುವಾಗ ಬಿಜೆಪಿ ಕಾರ್ಯಕರ್ತರು ಅಡ್ಡಿಯನ್ನುಂಟು ಮಾಡಿದ್ದರು. ಅದಕ್ಕೆ ತೀವ್ರವಾಗಿ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಅದಕ್ಕೆ ಸಂಬಂಧಿದಂತೆ ಪಾಲಿಕೆ ಮಾಜಿ ಸದಸ್ಯ ಜಿ.ಕೆ. ವೆಂಕಟೇಶ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಜಾಲಹಳ್ಳಿ ಪೊಲೀಸರು ಬಿಡುಗಡೆಯನ್ನೂ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಕುರಿತು ನಿಖಿಲ್ ಕುಮಾರಸ್ವಾಮಿ ಮಹತ್ವದ ಹೇಳಿಕೆ!
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಪ್ರಚಾರ ಮಾಡುವಾಗ ಸಿದ್ದರಾಮಯ್ಯ ಅವರು ಆಡಿದ ಆ ಒಂದು ಮಾತಿನಿಂದ ಮುನಿರತ್ನ ಅವರು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಅವರು ಹೇಳಿದ್ದಾದರೂ ಏನು?
ನಿನ್ನೆ ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿ
ನಿನ್ನೆ ಸಿದ್ದರಾಮಯ್ಯ ಅವರು ಪ್ರಚಾರ ಮಾಡುವಾಗ ಬಿಜೆಪಿ ಕಾರ್ಯಕರ್ತರು ಅದಕ್ಕೆ ಅಡ್ಡಿಪಡಿಸಿದ್ದರು. ಯಶವಂತಪುರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪ್ರಚಾರ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಣಕಟೇಶ್ ಹಾಗೂ ಬೆಂಬಲಿಗರು ಪ್ರಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ ಘೋಷಣೆ ಹಾಕಿ ಕಾಂಗ್ರೆಸ್ ರೋಡ್ ಸೋ ತಡೆದಿದ್ದರು. ಅದಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಇಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗೆ ಸ್ಪಷ್ಟನೆ ಕೊಡುವಾಗ ಕಣ್ಣೀರು ಹಾಕಿದ್ದಾರೆ.
ಅದು ಸಾಮಾನ್ಯ ಎಂದ ಮುನಿರತ್ನ
ಘಟನೆ ಕುರಿತು ಮಾತನಾಡಿರುವ ಮುನಿರತ್ನ ಅವರು, ದೇಶದ ಎಲ್ಲಾ ಕಡೆ ಕೂಡಾ ಒಂದು ಪಕ್ಷದ ನಾಯಕರು ಹೋದಾಗ ಪ್ರತಿಪಕ್ಷದವರು ಜಿಂದಾಬಾದ್ ಕೂಗುವುದು ಸಾಮಾನ್ಯ. ಹಿಂದೆ ನಾನು, ಸಿದ್ದರಾಮಯ್ಯ ಒಂದು ವಾಹನದಲ್ಲಿ ಇದ್ದಾಗ ಅಂದು ಬಿಜೆಪಿ ಯುವ ಮೋರ್ಛಾದವರು ನಮ್ಮ ಮುಂದೆ ಬಂದು ಮೋದಿ ಜಿಂದಾಬಾದ್ ಅಂತಾ ಕೂಗಿದ್ದರು. ಸ್ವಲ್ಪ ಹೊತ್ತು ಕೂಗಿ ಬಿಡಲಿ ಬಿಡ್ರಣ್ಣಾ ಅಂತ ಅವತ್ತು ನಾನೇ ಸಮಾಧಾನ ಮಾಡಿದ್ದೆ ಎಂದು ಹಿಂದಿನ ಚುನಾವಣೆಯಲ್ಲಿ ನಡೆದಿದ್ದ ಘಟನೆಯನ್ನು ಮುನಿರತ್ನ ಅವರು ನೆನಪಿಸಿಕೊಂಡರು.
ತಾಯಿ ನೆನೆದು ಕಣ್ಣೀರಾದ ಮುನಿರತ್ನ
ಆದರೆ ಪ್ರಚಾರದ ಭಾಷಣದಲ್ಲಿ ಮುನಿರತ್ನ ಅವರು ತಮ್ಮ ತಾಯಿಯನ್ನು ಮಾರಾಟ ಮಾಡಿಬಿಟ್ಟಿದ್ದಾರೆ ಅಂತಾ ಒಬ್ಬರು ಮಾತಾಡುತ್ತಾರೆ. ಮಾತಾಡಬಹುದಾ ಈ ರೀತಿ? ಇಂತಹ ಮಾತು ಮಾತಾಡಿದಾಗ ಅಲ್ಲಿ ನಮ್ಮ ಕಾರ್ಯಕರ್ತರು ಧರಣಿ ಮಾಡಿದ್ದಾರೆ. ಯಾರ ಮೇಲೂ ಹಲ್ಲೆ ಮಾಡಿಲ್ಲ. ಪದ ವಾಪಸ್ ಪಡೆಯಬೇಕು ವಾಪಸ್ ಪಡೆಯಬೇಕು ಎಂದು ಧರಣಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಹೇಳುತ್ತೇನೆ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲು ನೀವು ಸ್ವತಂತ್ರರಿದ್ದೀರಿ ಎಂದು ಮುನಿರತ್ನ ಹೇಳಿದ್ದಾರೆ.
ಕೈ ಮುಗಿಯುತ್ತೇನೆ ತಾಯಿ ಬಗ್ಗೆ ಮಾತನಾಡಬೇಡಿ
ತೀರಿ ಹೋಗಿರುವ ನನ್ನ ತಾಯಿಯನ್ನು ಮಾರಾಟ ಮಾಡಿದ್ದೇನೆ ಅಂತಾ ಹೇಳಿದ್ದೀರಿ. ನನ್ನ ತಾಯಿ ತೀರಿ ಹೋಗಿ ಇಪ್ಪತ್ತೈದು ವರ್ಷಗಳಾಗಿವೆ. ನಾನು ನಿಮ್ಮ ಪಕ್ಷದಲ್ಲಿ ಶಾಸಕನಾಗಿ ಹತ್ತು ವರ್ಷ ಆಗಿದೆ. ಇಪ್ಪತ್ತೈದು ವರ್ಷಗಳ ಹಿಂದೆ ತೀರಿ ಹೋಗಿರುವ ತಾಯಿಯನ್ನು ಮಾರಾಟ ಮಾಡಿದ್ದೇನೆ ಎಂದು ಹೇಳುವುದು ನಿಮಗೆ ಶೋಭೆ ತರುತ್ತಾ? ನೀವು ಮಾತಾಡ್ತಿರೋದು ಒಳ್ಳೆಯ ಮಾತುಗಳಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತಾಡ್ತಿರಲ್ಲಾ ನೀವು? ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಬಗ್ಗೆ ಮಾತಾಡಿ, ಬೇಡ ಅನ್ನಲ್ಲ. ಸತ್ತೋಗಿರುವವರನ್ನು ಎಲ್ಲಿಂದ ಮಾರಾಟ ಮಾಡಲಿ ನಾನು? ಎಲ್ಲಿಂದ ತರಲಿ ನಾನು? ಎಂದು ಮುನಿರತ್ನ ಅವರು ಕಣ್ಣೀರು ಹಾಕಿದ್ದಾರೆ.