ಜೂನ್ 22 ರಂದು ಮತ್ತೆ ಬರಲಿದ್ದಾರೆ ಮುಖ್ಯಮಂತ್ರಿ!, ತಪ್ಪದೇ ನೋಡಿ
ಬೆಂಗಳೂರು ಜೂನ್ 18: ಮತ್ತೆ ಬರುತ್ತಿದ್ದಾರೆ ಮುಖ್ಯಮಂತ್ರಿ...! ಅರರೇ! ನಿಲ್ಲಿ. ನೀವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರುತ್ತಿದ್ದಾರೆ ಅಂದುಕೊಂಡಿರಾ? ಕುಮಾರಸ್ವಾಮಿಯವರು ಕೇವಲ ಐದು ವರ್ಷ ಇದ್ದು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಆಗ ಮಾಜಿ ಮುಖ್ಯಮಂತ್ರಿಯಾಗುತ್ತಾರೆ.
ನಾವಿಲ್ಲಿ ಹೇಳ ಹೊರಟಿರುವುದು ಶಾಶ್ವತ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು. ಈಗ ಅರ್ಥವಾಯಿತಲ್ಲಾ? ಹೌದು. ಮುಖ್ಯಮಂತ್ರಿ' ನಾಟಕ ಮತ್ತೊಮ್ಮೆ ನಿಮ್ಮ ಬಳಿ ಬರುತ್ತಿದೆ.
ಈ ಮುಖ್ಯಮಂತ್ರಿ ನಾಟಕ ಎಂದಾಕ್ಷಣ ಮುಖ್ಯಮಂತ್ರಿ' ಚಂದ್ರು ಅವರ ನೆನಪಾಗುತ್ತದೆಯಲ್ಲವೇ? ಹೌದು ಅವರೇ ಈ ನಾಟಕದಲ್ಲಿನ ಮುಖ್ಯಮಂತ್ರಿ.
ಕಳೆದ ಮೂರು ದಶಕಗಳಿಂದ ಅಂದರೆ ಬರೋಬ್ಬರಿ 30 ವರ್ಷಗಳಿಂದ ಚಂದ್ರು ಅವರು ಮುಖ್ಯಮಂತ್ರಿ ಎಂಬ ರಾಜಕೀಯ ವಿಡಂಬನಾತ್ಮಕ ನಾಟಕವನ್ನು ಪ್ರದರ್ಶಿಸುತ್ತಾ ಬಂದಿದ್ದು, ಎಲ್ಲರ ಮನೆ ಮಾತಾಗಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ಅತ್ಯಂತ ಜನಪ್ರಿಯ ನಾಟಕಗಳಲ್ಲಿ ಒಂದಾಗಿರುವ ಈ ಮುಖ್ಯಮಂತ್ರಿ ಆಳುವ ವ್ಯವಸ್ಥೆಯನ್ನು ಅಂದಂದಿನ ಕಾಲಕ್ಕೆ ತಕ್ಕಂತೆ ತೆರೆದಿಡುತ್ತದೆ. ರಾಜಕಾರಣದಲ್ಲಿ ಯಾವ ರೀತಿ ಒಬ್ಬರು ಮತ್ತೊಬ್ಬರ ಬೆನ್ನಿಗೆ ಚೂರಿ ಇರಿಯುತ್ತಾರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತೊಬ್ಬರನ್ನು ತುಳಿಯಲು ಹೇಗೆ ಕೆಲಸ ಮಾಡುತ್ತವೆ ಎಂಬಿತ್ಯಾದಿ ವಿಚಾರಗಳನ್ನು ಈ ನಾಟಕದಲ್ಲಿ ತೋರಿಸಲಾಗುತ್ತದೆ. ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿಯಾದವರು ಯಾವ ರೀತಿ ತಮ್ಮ ಮುಖ್ಯಮಂತ್ರಿ ಗಾದಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುತ್ತಾರೋ ಅದೇ ರೀತಿ ಈ ನಾಟಕದಲ್ಲಿ ತೋರ್ಪಡಿಸಲಾಗುತ್ತದೆ.
ಇದೇ ರೀತಿಯ ನಾಟಕಗಳು ಹತ್ತು ಹಲವಾರು ಬಂದು ಹೋಗಿವೆ. ಆದರೆ, ಚಂದ್ರು ಅವರು ಈ ಮುಖ್ಯಮಂತ್ರಿ ನಾಟಕವನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಈ ಮೂಲಕ ಚಂದ್ರು ಅವರು ಕೇವಲ ಚಂದ್ರುವಾಗಿ ಉಳಿದಿಲ್ಲ. ಅವರು ಸ್ವತಃ ಮುಖ್ಯಮಂತ್ರಿ ಚಂದ್ರು ಎಂದೇ ಹೆಸರುವಾಸಿಯಾಗಿದ್ದಾರೆ.
ಕಲಾಗಂಗೋತ್ರಿಯು ಆಯೋಜಿಸುತ್ತಿರುವ 47 ರಂಗ ವರ್ಷಾಚರಣೆಯ ಅಂಗವಾಗಿ ಈ ಮುಖ್ಯಮಂತ್ರಿ ನಾಟಕವನ್ನು ಜೂನ್ 22 ರಂದು ಸಂಜೆ 6.30 ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಪ್ರದರ್ಶಿಸಲಾಗುತ್ತಿದೆ.
ಮುಖ್ಯ ಭೂಮಿಕೆಯಲ್ಲಿ:- ಮುಖ್ಯಮಂತ್ರಿಯಾಗಿ ಡಾ.ಮುಖ್ಯಮಂತ್ರಿ ಚಂದ್ರು ಅವರು ಕಾಣಿಸಿಕೊಳ್ಳಲಿದ್ದಾರೆ. ಹೆಸರಾಂತ ರಂಗ ನಿರ್ದೇಶಕರಾದ ಡಾ.ಬಿ.ವಿ.ರಾಜಾರಾಂ ಅವರು ನಾಟಕದ ನಿರ್ದೇಶನ ಮತ್ತು ಟಿ.ಎಸ್.ಲೋಹಿತಾಶ್ವ ತಂಡದ ಸದಸ್ಯರು ಇನ್ನಿತರೆ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.