ಬಸವನಗುಡಿಯ ಉತ್ತರಾಧಿಮಠದಲ್ಲಿ ತಪ್ತ ಮುದ್ರಾಧಾರಣೆ
ಬೆಂಗಳೂರು, ಜುಲೈ 4 : ಆಷಾಢ ತಿಂಗಳ ಮೊದಲ ಏಕಾದಶಿಯ ದಿನವಾದ ಇಂದು(ಜುಲೈ 4) ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿಯ ಉತ್ತರಾದಿಮಠದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮ ವೈಭವೋಪೇತವಾಗಿ ನಡೆಯುತ್ತಿದೆ.
ಬೆಳಗ್ಗಿನ ಜಾವ 3ರ ಸುಮಾರಿಗೆ ಮುದ್ರಾಧಾರಣೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತಗಣ, ಶ್ರೀಗಳಿಂದ ಮುದ್ರಾಧರಣೆಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಸ್ವಲ್ಪವೂ ಆಯಾಸಗೊಳ್ಳದೆ ಭಕ್ತರಿಗೆ ಮುದ್ರೆ ಹಾಕಕುತ್ತಿರುವ ದೃಶ್ಯ ಭಕ್ತಗಣವನ್ನು ಪುಳಕಿತರನ್ನಾಗಿಸುತ್ತಿದೆ. ಮಳೆಯ ನಡುವೆಯೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಮುದ್ರೆ ಹಾಕಿಸಿಕೊಂಡರು.
ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?
ಮುದ್ರಾಧಾರಣೆ ಮಾಧ್ವರಲ್ಲಿ ವಿಶೇಷ ಸಂಪ್ರದಾಯ. ನಮ್ಮ ದೇಹ ಭಗವಂತನ ಅಧೀನ ಎಂಬ ನಂಬಿಕೆ ಇದೆ. ಹೀಗಾಗಿ ಆಷಾಢ ತಿಂಗಳ ಮೊದಲ ಏಕಾದಶಿಯಂದು ದೇಹದಲ್ಲಿ ಶಂಖ, ಚಕ್ರದ ಮುದ್ರೆಗಳನ್ನು ಹಾಕಿಸಿಕೊಳ್ಳಲಾಗುತ್ತದೆ. ಮಾಧ್ವರಲ್ಲಿ 24 ಮಠಗಳಿವೆ. ಈ ಪೈಕಿ ಶೇ 70 ಮಂದಿ ಉತ್ತರಾದಿ ಮಠದ ಶಿಷ್ಯರು. ಭಕ್ತರಿಗೆ ಅನುವಾಗಲು ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.
ಏಕಾದಶಿ ಉಪವಾಸಕ್ಕೂ ನೊಬೆಲ್ ಪ್ರಶಸ್ತಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ?
ಇಂದು ರಾತ್ರಿ ವರೆಗೆ 35,000 ಮಂದಿ ಮುದ್ರೆ ಹಾಕಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಆಷಾಢ ಏಕಾದಶಿ (ಪ್ರಥಮ ಏಕಾದಶಿ) ಅಂಗವಾಗಿ ಶುಕ್ರವಾರ (ಜುಲೈ 15) ಮಾಧ್ವ ಪರಂಪರೆಯ ಸಂಸ್ಥಾನದ ಮಠಾಧೀಶರು ಬೆಂಗಳೂರಿನ ವಿವಿಧೆಡೆ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ರಾಜಧಾನಿಯ ವಿವಿಧೆಡೆ ಒಂದು ಲಕ್ಷಕ್ಕೂ ಅಧಿಕ ಮಾಧ್ವರು ತಮ್ಮ ಮಠದ ಗುರುಗಳಿಂದ ಮುದ್ರೆ ಸ್ವೀಕಾರ ಮಾಡಲಿದ್ದಾರೆ. ಬಹುತೇಕ ಮಠಾಧೀಶರು ನಗರದಲ್ಲೇ ಮುದ್ರಾಧಾರಣೆ ಮಾಡುವುದರಿಂದ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ
ಮುದ್ರಾಧಾರಣೆ ಏಕೆ?
ಶಂಖ ಮತ್ತು ಚಕ್ರ ಚಿಹ್ನೆಗಳನ್ನು ಮೈಮೇಲೆ ಧರಿಸುವುದರಿಂದ ಆಂತರಿಕ ಮತ್ತು ಬಾಹ್ಯ ಶುದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಪ್ರಥಮ ಏಕಾದಶಿ. ವೈಷ್ಣವರಿಗೆ ಅತ್ಯಂತ ಪವಿತ್ರವೆನಿಸಿದ ಈ ದಿನ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುವುದು ಸಂಪ್ರದಾಯ. ತಪ್ತ ಮುದ್ರಾ ಧಾರಣೆಯಿಂದ ಮಾನಸಿಕ ಹಾಗೂ ಶಾರೀರಿಕ ಶುದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ಚಾತುರ್ಮಾಸದ ವೇಳೆ ಭಗವಂತ ಯೋಗ ನಿದ್ರೆಯಲ್ಲಿರುತ್ತಾನೆ.
ಭಗವಂತನ ಸಂತೃಪ್ತಿಗೊಳಿಸಲು
ಆತನನ್ನು ಸಂಪ್ರೀತಗೊಳಿಸಲು ವಿಶೇಷ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಅದರ ಭಾಗವಾಗಿ ಸುದರ್ಶನ ಹೋಮ ನಡೆಸಲಾಗುತ್ತದೆ. ಭಕ್ತರ ಶಾರೀರಿಕ ಆರೋಗ್ಯಕ್ಕಾಗಿ ತಪ್ತಾ ಮುದ್ರಾಧಾರಣೆ ಅತ್ಯವಶ್ಯಕ. ಮದ್ವಾಚಾರ್ಯರು ಶಂಖ ಚಕ್ರ ಮುದ್ರೆ ಧರಿಸುವುದರೊಂದಿಗೆ ಭಕ್ತರಿಗೆ ವೈಷ್ಣವ ದೀಕ್ಷೆ ದಯಪಾಲಿಸಿದರು. ವೈಷ್ಣವ ಪರಂಪರೆಯ ಎಲ್ಲ ಮಠಗಳಲ್ಲಿ ಮಾನಸಿಕ ಹಾಗೂ ಶಾರೀರಿಕ ಶುದ್ಧತೆಗಾಗಿ ಮುದ್ರಾಧಾರಣೆ ಮಾಡಲಾಗುತ್ತಿದೆ.
ಭಗವಂತನಿಗೆ ಹತ್ತಿರವಾಗಲು
ಕೇವಲ ಯತಿಗಳಿಂದ ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕೆನ್ನುವುದು ಪದ್ಧತಿ. ಸರ್ವಜ್ಞ ಪೀಠಾರೂಢ ಯತಿಗಳಲ್ಲಿ ಆಚಾರ್ಯ ಮಧ್ವರು ಸನ್ನಿಹಿತರಾಗಿರುತ್ತಾರೆ ಎಂಬ ನಂಬಿಕೆಯ ಹಿನ್ನೆಲೆ ಸಾವಿರಾರು ಭಕ್ತರು ಅವರಿಂದ ಮುದ್ರಾಧಾರಣೆ ಮಾಡಿಸಿಕೊಳ್ಳಲು ಮುಗಿಬೀಳುತ್ತಾರೆ. ನಾವು ಭಗವಂತನಿಗೆ ಸಂಬಂಧಿತರು ಎಂಬುದನ್ನು ನಿರೂಪಿಸುವುದೇ ಮುದ್ರಾಧಾರಣೆ ಮಾಡುವ ಮೂಲ ಉದ್ದೇಶ. ವಿಷ್ಣುವಿನ ಆಯುಧಗಳಾದ ಶಂಖ ಮತ್ತು ಚಕ್ರದ ಚಿಹ್ನೆಗಳನ್ನು ಕಾದ ಲೋಹದ ಮೂಲಕ ಮೈಮೇಲೆ ಧರಿಸುವುದು ಇಲ್ಲಿನ ಸಂಪ್ರದಾಯ.
ದೇವತೆಗಳಲ್ಲೂ ಮುದ್ರಾಧಾರಣೆ
ಬ್ರಹ್ಮಾದಿ ದೇವತೆಗಳು ಕೂಡಾ ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ. ಶ್ರೀ ಮಧ್ವಾಚಾರ್ಯರು ಈ ದಿನವೇ ಸ್ವರ್ಗದಲ್ಲಿ ಎಲ್ಲಾ ದೇವತೆಗಳಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ಪುರಾಣ ಕಥೆಯಿದೆ. ಪುರುಷರು ಪಂಚಮುದ್ರೆಯನ್ನು ಇರಿಸಿಕೊಂಡರೆ, ಮಹಿಳೆಯರು ಎಡತೋಳಿಗೆ ಶಂಖ ಮತ್ತು ಬಲತೋಳಿಗೆ ಚಕ್ರಮುದ್ರೆ ಇರಿಸಿಕೊಳ್ಳುತ್ತಾರೆ. ಇನ್ನು ಮುದ್ರಾಧಾರಣೆ ಮಾಡಿಸಿಕೊಂಡರೆ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂಬುದು ಭಕ್ತರ ನಂಬಿಕೆ.