ಹೊಸಕೋಟೆ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ, ಕಾರಣವೇನು?
ಹೊಸಕೋಟೆ, ಡಿಸೆಂಬರ್ 05: ಹೊಡೆದಾಟ-ಬಡಿದಾಟದ ರಾಜಕೀಯದಿಂದ ಗುರುತಿಸಲ್ಪಡುವ ಹೊಸಕೋಟೆಯಲ್ಲಿ ಮತದಾನ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಎಂಟಿಬಿ ನಾಗರಾಜು ಮತ್ತು ಶರತ್ ಬಚ್ಚೇಗೌಡ ಬೆಂಬಲಿಗರ ನಡುವೆ ಕಿತ್ತಾಟ ನಡೆದಿದೆ.
ಇಂದು ಮತದಾನ ಪ್ರಾರಂಭವಾಗಿ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜು ಹಾಗೂ ಶರತ್ ಬಚ್ಚೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಅದಾದ ಕೆಲವೇ ಹೊತ್ತಿನಲ್ಲಿ ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ.
LIVE :ವೃದ್ಧೆಗೆ ಹೃದಯಾಘಾತ ಮತಗಟ್ಟೆಯಲ್ಲೇ ಸಾವು
ಇಂದು ಬೆಳಿಗ್ಗೆ ಎಂಟಿಬಿ ನಾಗರಾಜ್ ಅವರು ಬೆಂಡಿಗಾನಹಳ್ಳಿಯ ಮತಗಟ್ಟೆಗೆ ಹೋಗಿದ್ದರು. ಈ ಸಮಯ ಅಲ್ಲಿ ಶರತ್ ಬಚ್ಚೇಗೌಡ ಅವರ ಏಜೆಂಟ್ ಗಳು ಬೂತ್ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನೋಡಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಏರಿದ ದನಿಯಲ್ಲಿ ಪ್ರತಿಕ್ರಿಯಿಸಿದ ಶರತ್ ಬಚ್ಚೇಗೌಡ ಪರ ಏಜೆಂಟ್, ಎಂಟಿಬಿ ನಾಗರಾಜು ಗೆ ಐಡಿ ಕಾರ್ಡ್ ತೋರಿಸುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ಎಂಟಿಬಿ 'ನೀವ್ಯಾರು ನನ್ನನ್ನು ಐಡಿ ಕೇಳಲು ಎಂದು ಆವಾಜ್ ಹೊಡೆದಿದ್ದಾರೆ. ಅಲ್ಲದೆ ಚುನಾವಣಾಧಿಕಾರಿ ವಿರುದ್ಧವೂ ಕೆಂಡಾಮಂಡಲವಾಗಿದ್ದಾರೆ'.
ಬೆಂಡಗಾನಹಳ್ಳಿ ಶರತ್ ಬಚ್ಚೇಗೌಡ ಅವರ ಹುಟ್ಟೂರಾಗಿದ್ದು, ಇಲ್ಲಿ ಶರತ್ ಬೆಂಬಲಿಗರದ್ದೇ ಪಾರುಪತ್ಯವಾಗಿದೆ. ಹಾಗಾಗಿ ಎಂಟಿಬಿ ವಿರುದ್ಧವೇ ಶರತ್ ಬೆಂಬಲಿಗರು ಆವಾಜ್ ಹೊಡೆದಿದ್ದಾರೆ. ಎಂಟಿಬಿ ಬೂತ್ ಗೆ ಬರುವ ಕೆಲವೇ ಕ್ಷಣಗಳ ಮುನ್ನಾ ಇದೇ ಬೂತ್ ಗೆ ಶರತ್ ಬಚ್ಚೇಗೌಡ ಭೇಟಿ ನೀಡಿದ್ದರು.
ಎಂಟಿಬಿ ನಾಗರಾಜು ಬೆಂಬಲಿಗರ ಮೇಲೆ ಶರತ್ ಬಚ್ಚೇಗೌಡ ಬೆಂಬಲಿಗರ ಹಲ್ಲೆ
ಈ ಘಟನೆ ನಡೆದ ಕೆಲ ಹೊತ್ತಿನ ಬಳಿಕ ಹೊಸಪೇಟೆ ಪಟ್ಟಣದ ಬೂತ್ ಒಂದರ ಬಳಿ ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜು ಬೆಂಬಲಿಗರ ನಡುವೆ ಮಾತಿನ ಸಮರ ಏರ್ಪಟ್ಟಿದೆ. ಎರಡೂ ಕಡೆಯವರು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡಿದ್ದಾರೆ. ಜಗಳವು ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಹೊಸಕೋಟೆಯಲ್ಲಿ ಭಾರಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯ ಎಂಟಿಬಿ ನಾಗರಾಜು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
ಹೊಸಕೋಟೆಯು ಹಿಂದಿನಿಂದಲೂ ತೋಳ್ಬಲದ ರಾಜಕೀಯಕ್ಕೆ ಖ್ಯಾತಿಯಾಗಿತ್ತು. ಮತದಾನಕ್ಕೆ ಕೆಲ ದಿನಗಳ ಮುಂಚೆ ಎಂಟಿಬಿ ನಾಗರಾಜು ಬೆಂಬಲಿಗ ಮಂಜುನಾಥ್ ಎಂಬಾತನ ಮೇಲೆ ಶರತ್ ಬೆಂಬಲಿಗರು ತೀವ್ರ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ಸಹ ದಾಖಲಾಗಿತ್ತು.