ಮತದಾರರ ಬೆರಳು ಸೇರಲು ತಯಾರಾಗಿವೆ ಒಂದು ಲಕ್ಷ ಚಿನ್ನದುಂಗುರ!
ಹೊಸಕೋಟೆ, ನವೆಂಬರ್ 25: ಉಪ ಚುನಾವಣೆ 2019 ರ ಅತ್ಯಂತ ಜಿದ್ದಾಜಿದ್ದಿನ ಕಣ ಹೊಸಕೋಟೆ. ಆ ಕಾರಣಕ್ಕಾಗಿ ಈ ಉಪಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ.
ಕಣದಲ್ಲಿರುವ ಮೂವರು ಪ್ರಮುಖ ಅಭ್ಯರ್ಥಿಗಳೂ ಕೋಟ್ಯಧಿಪತಿಗಳಾಗಿದ್ದು, ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.
ಲಕ್ಷ್ಮೀಪುತ್ರ, 1200 ಕೋಟಿ ಒಡೆಯ, ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜು ಅವರಂತೂ ಉಪಚುನಾವಣೆಯಲ್ಲಿ ಗೆದ್ದೇ ತೀರಬೇಕೆಂದು ನಿರ್ಣಯಿಸಿದ್ದು, ಅದಕ್ಕಾಗಿ 'ಎಲ್ಲಾ' ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಶರತ್ ಬಚ್ಚೇಗೌಡ ಗೆ ಪ್ರೆಶರ್ ಕುಕ್ಕರ್: ಬುಡಮೇಲಾದ ಕಾಂಗ್ರೆಸ್ ಪ್ಲಾನ್
ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ 'ಸಾಂಪ್ರದಾಯಿಕ' ಆಮೀಷವಾದ ಕುಕ್ಕರ್ ನೀಡಿಕೆ, ಸೀರೆ ಹಂಚಿಕೆಯಲ್ಲಿದ್ದರೆ. ಎಂಟಿಬಿ ನಾಗರಾಜು ನೂರು ಹೆಜ್ಜೆ ಮುಂದೆ ಹೋಗಿ ಮತದಾರರಿಗೆ ಚಿನ್ನದ ಉಂಗುರವನ್ನೇ ನೀಡಲು ಸಜ್ಜಾಗಿದ್ದಾರೆ!
ಒಂದು ಕುಟುಂಬಕ್ಕೆ ಒಂದು ಚಿನ್ನದುಂಗುರ
ಚಿನ್ನದ ಉಂಗುರದ ಸುದ್ದಿ ಕ್ಷೇತ್ರದೆಲ್ಲೆಡೆ ಹರಡಿದ್ದು, ಪ್ರತಿ ಹಳ್ಳಿಯಲ್ಲೂ ಪಟ್ಟಣದಲ್ಲೂ ಅದೇ ಮಾತು. 'ಕುಟುಂಬವೊಂದಕ್ಕೆ ಚಿನ್ನದ ಉಂಗುರ ಕೊಡುತ್ತಿದ್ದಾರಂತೆ ಎಂಟಿಬಿ' ಎಂಬ ಮಾತು ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಎಂಟಿಬಿ ಸಮೀಪದ ಬೆಂಬಲಿಗರೇ ಹೀಗೊಂದು ಸುದ್ದಿ ಹರಡಿಸಿದ್ದಾರೆ.
ದೇವರ ಚಿತ್ರ ಒಳಗೊಂಡ ಐದು ಗ್ರಾಂ ಚಿನ್ನದ ಉಂಗುರ
ದೇವರ ಚಿತ್ರ ಒಳಗೊಂಡ ಐದು ಗ್ರಾಂ ನ ಒಂದು ಲಕ್ಷ ಉಂಗುರವನ್ನು ಎಂಟಿಬಿ ಈಗಾಗಲೇ ಮಾಡಿಸಿಟ್ಟಿದ್ದಾರಂತೆ. ಇದಕ್ಕಾಗಿ ನೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ. 1200 ಕೋಟಿಗೂ ಹೆಚ್ಚು ಆಸ್ತಿ ಒಡೆಯರಾದ ಎಂಟಿಬಿಗೆ ನೂರು ಕೋಟಿ ಹೆಚ್ಚಿನ ಬಾಬತ್ತೇನೂ ಅಲ್ಲ ಹಾಗಾಗಿ ಚಿನ್ನದುಂಗುರದ ಸುದ್ದಿಯನ್ನು ತಳ್ಳಿ ಹಾಕಲಾಗದು.
ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆ
ಚಿನ್ನದ ಉಂಗುರವನ್ನು ಮತದಾನ ನಡೆಯುವ ಎರಡು ದಿನದ ಹಿಂದೆ ಪ್ರತಿಯೊಬ್ಬರ ಮನೆಗೆ ತಲುಪಿಸಲಾಗುತ್ತದೆಯಂತೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯ ಚರ್ಚಿತವಾಗುತ್ತಿದೆ.
ಕುರುಡಾಗಿರುವ ಚುನಾವಣಾ ಆಯೋಗ
ಎಂಟಿಬಿ ನಾಗರಾಜು ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು, 'ದಿನವೊಂದಕ್ಕೆ 30 ಲಕ್ಷ ಖರ್ಚಾಗುತ್ತಿದೆ' ಎಂದು ಹೆಸರು ಹೇಳಲಿಚ್ಛಿಸದ ಹೊಸಕೋಟೆಯ ನಿವಾಸಿಯೊಬ್ಬರು ಹೇಳಿದ್ದಾರೆ. 'ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವುದು ಎಲ್ಲರಿಗೂ ಗೊತ್ತಿದೆ ಆದರೆ ಚುನಾವಣಾ ಆಯೋಗಕ್ಕೆ ಮಾತ್ರ ಕಾಣುತ್ತಿಲ್ಲ' ಎಂದು ಅವರು ವ್ಯಂಗ್ಯವಾಡಿದರು.
ಕೋಟ್ಯಧಿಪತಿ ಅಭ್ಯರ್ಥಿಗಳು ಕಣದಲ್ಲಿ
ಹೊಸಕೋಟೆ ಚುನಾವಣಾ ಕಣ ರಣಾಂಗಣವಾಗಿದ್ದು, 'ಅನರ್ಹ' ಎಂಟಿಬಿ ನಾಗರಾಜು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಿಂದ ಬೈರತಿ ಸುರೇಶ್ ಮಡದಿ ಪದ್ಮಾವತಿ ಸುರೇಶ್ ಕಣಕ್ಕೆ ಇಳಿದಿದ್ದಾರೆ.