ಸಂಸದ ತೇಜಸ್ವಿ ಸೂರ್ಯ ಅವರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 1.2 ಲಕ್ಷ ಪುಸ್ತಕ ವಿತರಣೆ
ಬೆಂಗಳೂರು, ಮಾರ್ಚ್ 4: ತಮ್ಮ ಬೆಂಗಳೂರು ದಕ್ಷಿಣ ಕ್ಷೇತ್ರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 1.2 ಲಕ್ಷಕ್ಕೂ ಅಧಿಕ ನೋಟ್ಬುಕ್ಗಳನ್ನು ತಮ್ಮ ಕಚೇರಿ ವಿತರಣೆ ಮಾಡಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಕಟಿಸಿದ್ದಾರೆ.
ಈ ಯೋಜನೆಯು, ಬೆಂಗಳೂರು ದಕ್ಷಿಣ ಭಾಗದಲ್ಲಿನ ಶಿಕ್ಷಣದ ಗುಣಮಟ್ಟ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳನ್ನು ಸುಧಾರಣೆ ಮಾಡುವ ಗುರಿ ಹೊಂದಿರುವ ತೇಜಸ್ವಿ ಸೂರ್ಯ ಅವರ ಬೆಂಗಳೂರು ದಕ್ಷಿಣ ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆ (ಬೆಸ್ಟ್) ಕಾರ್ಯಕ್ರಮದ ಭಾಗವಾಗಿದೆ. ದಯಾನಂದ ಸಾಗರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಸ್ಟ್ ಕಾರ್ಯಕ್ರಮದ ಎರಡನೆಯ ಆವೃತ್ತಿಯನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡುವ ವೇಳೆ ಸೂರ್ಯ, ತಮ್ಮ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳು ಅವರ ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಗಾಗಿ 60,000 ಗೈಡ್ ಪುಸ್ತಕಗಳು ಮತ್ತು 60,000 ವರ್ಕ್ಬುಕ್ಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಪ್ರಕಟಿಸಿದರು. ಗೈಡ್ಬುಕ್ನ ಸಾಫ್ಟ್ ಕಾಪಿ ಕೂಡ ಇದೇ ವೇಳೆ ಇತರರಿಗೂ ಲಭ್ಯವಾಗಲಿದೆ.
'ಅತಿ ಹೆಚ್ಚು ಪಿಎಚ್ಡಿ ಪದವೀಧರರಿರುವ ನಗರದಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅತಿ ಕಳಪೆ ಪ್ರದರ್ಶನ ನೀಡುತ್ತಿರುವ ಜಿಲ್ಲೆಗಳ ಪೈಕಿ ಬೆಂಗಳೂರು ದಕ್ಷಿಣ ಕೂಡ ಒಂದಾಗಿರುವುದು ಖೇದಕರ' ಎಂದು ಬಿಡುಗಡೆ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ವಿಷಾದಿಸಿದರು.
ಆರ್ಥಿಕ ಕೊರತೆ ಇದಕ್ಕೆ ಕಾರಣ
'ಅದು ಬಡತನವಾಗಿರಬಹುದು ಅಥವಾ ನಿರುದ್ಯೋಗವಾಗಿರಬಹುದು, ಶಿಕ್ಷಣ ಅಥವಾ ಅದರ ಸೌಲಭ್ಯ ಪಡೆದುಕೊಳ್ಳಲು ಆಗದೆ ಇರುವುದಕ್ಕೆ ಆರ್ಥಿಕ ಕೊರತೆ ಮೂಲ ಕಾರಣ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣೆ ವ್ಯವಸ್ಥೆಯನ್ನೇ ತ್ಯಜಿಸುವುದನ್ನು ಕೂಡ ನಾವು ನೋಡಿದ್ದೇವೆ. ಈ ರೀತಿ ಹತ್ತನೇ ತರಗತಿಯಲ್ಲಿ ಕಳಪೆ ಸಾಧನೆ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಚಟುವಟಿಕೆ ವೃದ್ಧಿಸುವುದು ಮತ್ತು ಅವರನ್ನು ಶಿಕ್ಷಣದ ಮೂಲಕ ಮೇಲಕ್ಕೆತ್ತುವ ಕೆಲಸ ಮಾಡುವುದು ನಮ್ಮ ಉದ್ದೇಶ. ಮಗುವಿನ ಮೇಲೆ 30-40 ವರ್ಷಗಳಷ್ಟು ಸಮಯ ಪ್ರಭಾವ ಬೀರುವುದನ್ನು ಶಿಕ್ಷಣದ ಹೊರತಾಗಿ ಯಾವ ಕೆಲಸವೂ ಮಾಡಲಾರದು. ಈ ಹೊಸ ಚೈತನ್ಯ ತುಂಬಲು ನಾವು ಬೆಸ್ಟ್ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ' ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಸಂಸದರ ಕಚೇರಿಯಿಂದ ನಿರ್ವಹಣೆ
ಈ ಕಾರ್ಯಕ್ರಮದ ಮೂಲಕ ಸಂಸದರ ಕಚೇರಿಯು ಬೆಂಗಳೂರು ದಕ್ಷಿಣದಲ್ಲಿ ಎಂಟು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತಿದೆ. ಈ ಎಂಟು ಶಾಲೆಗಳನ್ನು ಮಾದರಿ ಶಾಲೆಗಳಾಗಿ ಹೊಸ ಸ್ವರೂಪ ಪಡೆದುಕೊಳ್ಳಲಿದ್ದು, ವಿಷಯಗಳ ಗುಣಮಟ್ಟ, ತರಗತಿ ಕೋಣೆಗಳ ಡಿಜಿಟಲೀಕರಣ ಮತ್ತು ಶಾಲಾ ಮೂಲಸೌಕರ್ಯಗಳ ನವೀಕರಣದಂತಹ ಚಟುವಟಿಕೆಗಳನ್ನು ಸಂಸದರ ಕಚೇರಿ ಪರಿಶೀಲಿಸಲಿದೆ. ಬೆಸ್ಟ್ ಯೋಜನೆಯು ಬೆಂಗಳೂರು ದಕ್ಷಿಣದಲ್ಲಿನ ಸುಮಾರು 800 ಸರ್ಕಾರಿ ಉದ್ಯೋಗಿ ಶಿಕ್ಷಕರಿಗೆ ತರಬೇತಿ ನೀಡಲಿದೆ. ಜತೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಖಾಮುಖಿ ಆಪ್ತಸಲಹೆ ನೀಡಲು ಸಾರ್ವಜನಿಕ ಕ್ಷೇತ್ರದಿಂದ 3,000 ಸ್ವಯಂ ಸೇವಕರನ್ನು ಬಳಸಿಕೊಳ್ಳಲಿದೆ.
ಯೋಜನೆಯಿಂದಾಗಿ ಶ್ರೇಯಾಂಕ ಸುಧಾರಣೆ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿನ ಬೆಂಗಳೂರು ದಕ್ಷಿಣ ವಿಭಾಗದ ಸ್ಥಾನವನ್ನು ಸುಧಾರಿಸಲು ಕಳೆದ ವರ್ಷ ಬೆಸ್ಟ್ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಬೆಸ್ಟ್ ಯೋಜನೆಯ ಆರಂಭದಲ್ಲಿ ಬೆಂಗಳೂರು ದಕ್ಷಿಣದಲ್ಲಿನ ನೂರಕ್ಕೂ ಹೆಚ್ಚು ಶಾಲೆಗಳಲ್ಲಿನ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಸ್ವಯಂಸೇವಕ ಶಿಕ್ಷಕರು ಪಾಲ್ಗೊಂಡಿದ್ದರು. ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ ಮತ್ತು ಅದರ ಸಂದರ್ಭದಲ್ಲಿ ನುರಿತ ಶಿಕ್ಷಕರಿಂದ ಆನ್ಲೈನ್ ಪುನರಾವರ್ತನೆ ತರಗತಿಗಳು ನಡೆದಿದ್ದವು. 'ಸಂಜೀವಿನಿ' ಎಂಬ ಶೀರ್ಷಿಕೆಯ ಮಾರ್ಗದರ್ಶಿ ಪುಸ್ತಕಗಳನ್ನು 10,000 ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಜತೆಗೆ ಇತರೆ ನಗರಗಳ ವಿದ್ಯಾರ್ಥಿಗಳ ಮನವಿ ಮೇರೆಗೆ ಆನ್ಲೈನ್ನಲ್ಲಿಯೂ ಬಿಡುಗಡೆ ಮಾಡಲಾಗಿತ್ತು. ಇದರ ತರುವಾಯ ಬೆಂಗಳೂರು ದಕ್ಷಿಣವು, ಸಾಂಕ್ರಾಮಿಕದಿಂದ ಅಡ್ಡಿಯಾದ ಶೈಕ್ಷಣಿಕ ಮತ್ತು ಪರೀಕ್ಷೆಗಳ ವರ್ಷದಲ್ಲಿಯೂ ಮೂರು ಶ್ರೇಯಾಂಕದಷ್ಟು ಸುಧಾರಣೆ ಕಂಡಿದೆ.
Recommended Video
ಶಿಕ್ಷಣ ಇಲಾಖೆ ಬೆಂಬಲ
'ಬೆಂಗಳೂರು ದಕ್ಷಿಣ ಶಿಕ್ಷಣ ಜಿಲ್ಲೆಯು ಕೆಳಮಟ್ಟದಿಂದ ಐದು ಅಥವಾ ಆರನೇ ಸ್ಥಾನದಲ್ಲಿದೆ. ಈ ಸ್ಥಿತಿಯು ನಾವೆಲ್ಲರೂ ವಿಮರ್ಶೆ ಮಾಡಬೇಕಿರುವಂತಿದೆ. ಬೆಂಗಳೂರು ದಕ್ಷಿಣದ ಸ್ಥಾನವನ್ನು ಸುಧಾರಿಸಲು ಬೆಸ್ಟ್ ಕಾರ್ಯಕ್ರಮವು ದೀರ್ಘಾವಧಿಯಲ್ಲಿ ನೆರವು ನೀಡಲಿದೆ. ಇಲಾಖೆಯ ಕಡೆಯಿಂದ ನಾವು ಈ ಮಹತ್ವದ ಯೋಜನೆಗಾಗಿ ಸಂಸದರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ' ಎಂದು ದಕ್ಷಿಣ ವಿಭಾಗದ ಡಿಡಿಪಿಐ ಎಸ್. ರಾಜೇಂದ್ರ ತಿಳಿಸಿದ್ದಾರೆ.