ಎಚ್ ಡಿ ಕುಮಾರಸ್ವಾಮಿಗೂ, ಮಂಗಳೂರಿಗೂ ಏನು ಸಂಬಂಧ?
ಬೆಂಗಳೂರು, ಜನವರಿ 10: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿದ್ದರ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಕುಮಾರಸ್ವಾಮಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 'ಕುಮಾರಸ್ವಾಮಿ ಕಳೆದ ಆರೇಳು ವರ್ಷಗಳಲ್ಲಿ ಹಲವಾರು ಸಿಡಿ ಬಿಡುಗಡೆ ಮಾಡಿದ್ದಾರೆ. ಆದರೆ, ಯಾವುದೇ ಸಿಡಿಯಲ್ಲಿನ ವಿಚಾರವನ್ನು ಈವರೆಗೆ ತುದಿ ಮುಟ್ಟಿಸಿಲ್ಲ. ಗಂಭೀರ ವಿಷಯಗಳಲ್ಲಿ ಎಷ್ಟು ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಕುಮಾರಸ್ವಾಮಿಗೂ, ಮಂಗಳೂರಿಗೂ ಏನು ಸಂಬಂಧ? ಎಂದು ಪ್ರಶ್ನೆ ಮಾಡಿದ್ದಾರೆ.
ಜೆಎನ್ಯುನಲ್ಲಿ ತಯಾರಾಯ್ತಾ?
'ಕುಮಾರಸ್ವಾಮಿ ಇಂದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಿದ್ದಾರೆ. ಮಂಗಳೂರು ಪೊಲೀಸರು ಬಿಜೆಪಿ ಸರ್ಕಾರ ಬಂದ ಮೇಲೆ ನೇಮಕವಾದವರಲ್ಲ. ಮಂಗಳೂರು ಕಮಿಷನರ್ ಕುಮಾರಸ್ವಾಮಿ ಅವಧಿಯಲ್ಲೂ ಕೆಲಸ ಮಾಡಿದ್ದಾರೆ. ಆ ಸಿಡಿ ನಿಮಗೆ ಯಾರು ತಯಾರು ಮಾಡಿಕೊಟ್ಟರು? ಆ ಸಿಡಿ ಕೇರಳದಲ್ಲಿ ತಯಾರಾಯ್ತಾ? ಪಶ್ಚಿಮ ಬಂಗಾಳದಲ್ಲಿ ತಯಾರಾಯ್ತಾ? ಅಥವಾ ಜೆಎನ್ಯುನಲ್ಲಿ ತಯಾರಾಯ್ತಾ? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ
ರಾಜ್ಯಕ್ಕೆ ಹೇಳಬೇಕು
'ಮಂಗಳೂರು ಗಲಾಟೆಯಲ್ಲಿ 80 ಪೊಲೀಸರಿಗೆ ಗಾಯ ಆಗಿದ್ದರೂ, ಕುಮಾರಸ್ವಾಮಿ ಅವರು ಯಾವುದೇ ಪೋಲೀಸರ ಆರೋಗ್ಯ ವಿಚಾರಿಸಿಲ್ಲ. ಕೇವಲ ರಾಜಕೀಯಕ್ಕಾಗಿ ಕುಮಾರಸ್ವಾಮಿ ರಾಜಕೀಯ ಮಾಡ್ತಿದ್ದಾರೆ. ಇಂತಹದ್ದರಿಂದಲೇ ಎಚ್ಡಿಕೆ ಅಧಿಕಾರ ಕಳೆದುಕೊಂಡಿದ್ದು. ಕುಮಾರಸ್ವಾಮಿ ಅವರಿಗೆ ಸಿಡಿ ಯಾರು ತಯಾರು ಮಾಡಿಕೊಟ್ಟರು? ಎಂಬುದನ್ನು ಅವರೇ ಇಡೀ ರಾಜ್ಯಕ್ಕೆ ಹೇಳಬೇಕು' ಎಂದು ಶೋಭಾ ಕಿಡಿ ಕಾರಿದರು.
ವಿಡಿಯೋದಲ್ಲಿ ಏನಿದೆ?
ಮಂಗಳೂರು ಗೋಲಿಬಾರ್ಗೆ ಸಂಬಂಧಿಸಿದಂತೆ ಎಚ್ಡಿಕೆ ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು ಪೊಲೀಸರು ಹಿಗ್ಗಾ-ಮುಗ್ಗಾ ಥಳಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದವರ ಮೇಲೆ, ಬ್ಯಾಗ್ ಹಾಕಿಕೊಂಡು ಕಾಲೇಜುಗಳಿಗೆ ತೆರಳುತ್ತಿದ್ದ ಸಣ್ಣ ವಯಸ್ಸಿನ ಯುವಕರ ಮೇಲೂ ಹತ್ತು-ಹನ್ನೆರಡು ಮಂದಿ ಪೊಲೀಸರು ಮುಗಿಬಿದ್ದಿರುವುದು ಸೆರೆಯಾಗಿದೆ. ಒಬ್ಬ ಹುಡುಗನಿಗಂತೂ ತಲೆಗೆ ಹೊಡೆದು ರಕ್ತ ಒಸರುತ್ತಿದ್ದರೂ ಆತನನ್ನು ರಸ್ತೆ ಪಕ್ಕದಲ್ಲಿಯೇ ಬಿಟ್ಟು ಹೋಗುವ ದೃಶ್ಯ ಸೆರೆಯಾಗಿದೆ.
ಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆ
ಪೊಲೀಸರೇ ಹಿಂಸಾಚಾರ ನಡೆಸುತ್ತಿರುವುದು
ಕೆಲವು ದಿನಗಳ ಹಿಂದೆಯಷ್ಟೆ ಪೊಲೀಸರು ವಿಡಿಯೋ ಬಿಡುಗಡೆ ಮಾಡಿ, ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರು ಎಂದು ಆರೋಪಿಸಿದ್ದರು, ಅಲ್ಲದೆ ಗೋಲಿಬಾರ್ಗೆ ಆ ವಿಡಿಯೋಗಳನ್ನು ಸಮರ್ಥನೆಯಾಗಿ ನೀಡಿದ್ದರು. ಆದರೆ ಇಂದು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪೊಲೀಸರೇ ಹಿಂಸಾಚಾರ ನಡೆಸುತ್ತಿರುವುದು ದಾಖಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ಎಚ್ಡಿಕೆ ಮೇಲೆ ಮುಗಿಬಿದ್ದಿದ್ದಾರೆ.