ಯಡಿಯೂರಪ್ಪ ರಾಜೀನಾಮೆಗೆ 'ಮಾನಸಪುತ್ರ'ನ ಭಾವನಾತ್ಮಕ ಟ್ವೀಟ್
ಬೆಂಗಳೂರು, ಜುಲೈ 26: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಈ ನಿರ್ಧಾರ ಅವರ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯಾಗಿದೆ.
ಬಿಎಸ್ವೈಯವರ ಮಾನಸ ಪುತ್ರ ಅಂತಲೇ ಕರೆಯಿಸಿಕೊಳ್ಳುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯನವರು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ರಾಜೀನಾಮೆಗೆ ಕಾಂಗ್ರೆಸ್ ವ್ಯಂಗ್ಯ
ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, "ಇಂದು ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ,'' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
"ದಶಕಗಳ ನಿಮ್ಮ(BSY) ಸಂಘಟನೆ ಮತ್ತು ರಾಜಕೀಯ ಸೇವೆ ಲಕ್ಷಾಂತರ ಕಾರ್ಯಕರ್ತರು ಮತ್ತು ಅನೇಕ ನಾಯಕರನ್ನು ಸೃಷ್ಟಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಪಾರ. ಮುಂದೆಯು ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗೂ ಇರಲೇಬೇಕು. ನನ್ನ ರಾಜಕೀಯ ಜೀವನದ ಆದಿಯಿಂದ ಇಂದಿನವರೆಗೆ ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ ಇಂದು,'' ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಕಳೆದ ಹಲವು ದಿನಗಳಿಂದಲೇ ಕೇಳಿಬಂದಿತ್ತು. ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ತಾನು ಬದ್ಧ ಎಂದು ಮಾಧ್ಯಮಗಳಿಗೆ ಪದೇ ಪದೇ ಹೇಳುತ್ತಿದ್ದರು.
ಜುಲೈ ೨೬ರಂದು ಈ ಊಹಾಪೋಹಗಳಿಗೆ ಇಂದು ತೆರೆ ಎಳೆದ ಬಿಎಸ್ವೈ, ತಮ್ಮ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ವಿದಾಯ ಭಾಷಣ ಮಾಡಿ, ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಅದರಂತೆ ಸೋಮವಾರ ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಂಗಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ, "ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟ ಕೇಂದ್ರದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸುವುದಿಲ್ಲ,'' ಎಂದು ಸ್ಪಷ್ಟಪಡಿಸಿದರು.
Recommended Video