ಸಿಎಂ ಕುಮಾರಸ್ವಾಮಿಗೆ ಆಣೆ ಪ್ರಮಾಣ ಸವಾಲೆಸೆದ ಎಂಪಿ ರೇಣುಕಾಚಾರ್ಯ
ಬೆಂಗಳೂರು, ಜುಲೈ 20: ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಹಳೆ ಸರ್ಕಾರ ಸ್ಥಾಪನೆ ವಿಷಯವನ್ನು ವಿವರವಾಗಿ ವಿವರಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೂರು ಬಾರಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಗೆ ಚುರುಕು ಮುಟ್ಟಿಸಿದರು. ಸದನದ ಕಲಾಪದ ವೇಳೆ ಸದಾ ಸಕ್ರಿಯವಾಗಿರುವ ರೇಣುಕಾಚಾರ್ಯ ಅವರು ಮೌನಕ್ಕೆ ಶರಣಾಗಿದ್ದರು. ಆದರೆ, ಇಂದು ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ.
"ವಿಧಾನಸೌಧದಲ್ಲಿ ನಿನ್ನೆ ಮೌನ ವಹಿಸಲು ಒಂದು ಅರ್ಥ ಇದೆ. ಈಗ ಬಹಿರಂಗವಾಗಿ ಪ್ರಮಾಣ ಮಾಡಿ ಅಥವಾ ಬಹಿರಂಗ ಚರ್ಚೆ ಬನ್ನಿ ಎಂದರು. ಅಲ್ಲದೇ ನೀವು ಹೇಳಿದ್ದೆಲ್ಲಾ ಸಾಬೀತು ಆದರೆ ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ. ಸಿಎಂ ಅವರು ನಂಬಿರುವ ಶೃಂಗೇರಿ ಮತ್ತು ಮಂಜುನಾಥ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡಿ" ಎಂದು ಸವಾಲು ಎಸೆದರು.
ಸದನದಲ್ಲಿ ರೇಣುಕಾಚಾರ್ಯ ಮಹಾತ್ಮೆ ಬಿಚ್ಚಿಟ್ಟ ಸಿಎಂ ಕುಮಾರಸ್ವಾಮಿ
ಸದ್ಯ ರಮಡಾ ರೆಸಾರ್ಟಿನಲ್ಲಿರುವ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಶನಿವಾರದಂದು ಸಿಎಂ ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ. 'ಸದನದಲ್ಲಿ ನನ್ನ ಹೆಸರನ್ನು ಮುರ್ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ಆದರೆ ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ.ನಾನು ನಿಮ್ಮ ಸಹಾಯದಿಂದ ಸಚಿವನಾಗಲಿಲ್ಲ, ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಲಿ' ಎಂದಿದ್ದಾರೆ.
"ಅಂದು ನಾನು ಗೋವಾಕ್ಕೆ ಹೋಗಿದ್ದು ನಿಜ. ಆದರೆ, ನಾನು ಅವರಿಂದ ಸಚಿವನಾಗಲಿಲ್ಲ. ಅಂದು ಸರ್ಕಾರ ರಚಿಸಲು ಪ್ರಸ್ತಾಪ ಮಾಡಿದ್ದ ಅವರೇ ನಮ್ಮನ್ನ ಗೋವಾ ಹಾಗೂ ಹೈದರಾಬಾದಿಗೆ ಬಂದು ಮಧ್ಯರಾತ್ರಿ ಭೇಟಿ ಮಾಡಿ, ಬೆಂಬಲ ನೀಡಲು ಮನವಿ ಮಾಡಿದ್ದರು. ಆದರೆ, ನಾನು ಅಂದು ಅವರೊಂದಿಗೆ ಜಗಳ ಮಾಡಿದ್ದೆ, ಬಿಎಸ್ ಯಡಿಯೂರಪ್ಪ ಅವರಿಗೆ ಮೋಸ ಮಾಡಲು ಒಪ್ಪಿರಲಿಲ್ಲ" ಎಂದು ರೇಣುಕಾಚಾರ್ಯ ವಾದ ಮಂಡಿಸಿದ್ದಾರೆ.