ರಮೇಶ್ ಕುಮಾರ್ ಆದೇಶ ಕಾನೂನುಬಾಹಿರ: ಸಂಸದ ರಾಜೀವ್
ಬೆಂಗಳೂರು, ಜುಲೈ 29: ರಾಜೀನಾಮೆ ನೀಡಿದ್ದ 17 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಇತ್ಯರ್ಥ ಮಾಡದೆ ಎಲ್ಲರನ್ನು ಅನರ್ಹಗೊಳಿಸಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಆದೇಶ ಕಾನೂನುಬಾಹಿರ, ದುರುದ್ದೇಶಪೂರಿತ ಮತ್ತು ಅವರ ಅಧಿಕಾರವನ್ನು ಮೀರಿದ್ದಾಗಿದೆ"
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಎಂದು ಬಿಜೆಪಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
"ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಅಧಿಕಾರವನ್ನು ಬಳಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಆದರೆ, ಸ್ವಾರ್ಥ ರಾಜಕೀಯ ಮೇಲಾಟಕ್ಕಾಗಿ, ಸಂವಿಧಾನ ಮತ್ತು ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್ ಏಜೆಂಟರಂತೆ ವರ್ತಿಸುವವರು, ಸಾಂವಿಧಾನಾತ್ಮಕ ಹುದ್ದೆಗಳಲ್ಲಿದ್ದರೆ ಆಗುವ ಅಪಾಯವನ್ನು ರಮೇಶಕುಮಾರ್ ರಂಥವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ರಮೇಶ್ ಕುಮಾರ್ ಅವರ ಆದೇಶ ಕಾನೂನುಬಾಹಿರವಷ್ಟೇ ಅಲ್ಲದೇ ಅವರ ಅಧಿಕಾರವನ್ನು ಮೀರಿದ್ದಾಗಿದೆ" ಎಂದು ರಾಜೀವ್ ಹೇಳಿದರು.
LIVE: ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
"ಇದು ಭ್ರಷ್ಟ ಸರ್ಕಾರದ ವಿರುದ್ಧ ಬಂಡಾಯ ಎದ್ದ ಶಾಸಕರ ವಿರುದ್ಧ, ತಮ್ಮ ನಾಯಕ ಸಿದ್ದರಾಮಯ್ಯನವರ ಪರವಾಗಿ, ರಮೇಶ್ ಕುಮಾರ್ ತೆಗೆದುಕೊಂಡ ಕೀಳು ಪ್ರತೀಕಾರದ ಕ್ರಮವಾಗಿದೆ ಎನ್ನದೇ ವಿಧಿಯಿಲ್ಲ.
ಇಂಥ ಅಧಿಕಾರದ ದುರ್ಬಳಕೆ ಮತ್ತು ಸರ್ವಾಧಿಕಾರಿತನವನ್ನು ಪ್ರಶ್ನಿಸದೇ ಇರಲು ಸಾಧ್ಯವಿಲ್ಲ. ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟದ್ದಲ್ಲದೆ, ಸಂವಿಧಾನ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಅಗೌರವ ತೋರಿ, ದುರುದ್ದೇಶದಿಂದ ಬಂಡಾಯ ಶಾಸಕರ ವಿರುದ್ಧ ಕಾನೂನು ಬಾಹಿರವಾಗಿ ತೆಗೆದುಕೊಂಡ ಕ್ರಮಗಳಿಗಾಗಿ ರಮೇಶ್ ಕುಮಾರ್ ಉತ್ತರದಾಯಿಗಳಾಗಲೇಬೇಕು." ಎಂದು ಸಂಸದ ರಾಜೀವ್ ಆಗ್ರಹಿಸಿದ್ದಾರೆ.
"ಭಾನುವಾರದಂದು 14 ಶಾಸಕರು ಹಾಗೂ ಗುರುವಾರದಂಡು ಮೂವರು ಶಾಸಕರನ್ನು ಅನರ್ಹಗೊಳಿಸಿ, 15ನೇ ವಿಧಾನಸಭೆ ಅವಧಿ ಮುಗಿಯುವವರೆಗೂ(2023) ಅನರ್ಹರಾಗಿರುತ್ತಾರೆ, ಉಪಚುನಾವಣೆಗೂ ಅವರಿಗೆ ಸ್ಪರ್ಧಿಸಲು ಅವಕಾಶ ಇಲ್ಲ" ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದರು.