ದೇವನಹಳ್ಳಿಯ ಕ್ವಾರಿಯಲ್ಲಿ ಹುತಾತ್ಮ ಸೈನಿಕರ ವೀರಗಲ್ಲಿಗೆ ಗೌರವ ನಮನ
ದೇವನಹಳ್ಳಿ, ಮೇ 29 : ರಾಷ್ಟ್ರೀಯ ಸೇನಾ ಸ್ಮಾರಕ ಬೆಂಗಳೂರಿನಲ್ಲಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಇಂಥದ್ದೊಂದು ಸ್ಮಾರಕ ನಿರ್ಮಾಣಕ್ಕೆ ಶ್ರಮ ಹಾಕಿದವರು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಅವರ ತಂದೆ ಏರ್ ಕಮ್ಯಾಂಡರ್ ಎಂ.ಕೆ.ಚಂದ್ರಶೇಖರ್. ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಣಾರ್ಥ ಕರ್ನಾಟಕದಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಉದ್ದೇಶ ಇದರ ಹಿಂದಿತ್ತು.
ಇಲ್ಲಿ ಅಡಿಗಲ್ಲು ಹಾಕಿದ ದಿನದಿಂದ ಅಂತಿಮ ರೂಪ ಪಡೆಯುವ ದಿನದ ತನಕ ಆ ಸ್ಥಳ ಪ್ರವಾಸಿಗರ ಆಕರ್ಷಣೆಯೇ. ಆದರೆ ವೀರಗಲ್ಲು ಇಲ್ಲದೆ ಅದು ಅಪೂರ್ಣ. ಸಂತೋಷದ ಸುದ್ದಿ ಏನೆಂದರೆ, ಬುಧವಾರದಂದು ದೇವನಹಳ್ಳಿಯ ಕ್ವಾರಿಯಲ್ಲಿ ವೀರಗಲ್ಲಿಗೆ ಅಂತಿಮ ರೂಪ ಸಿಕ್ಕಿದೆ. ರಾಷ್ಟ್ರೀಯ ಸ್ಮಾರಕ ಇರುವೆಡೆಗೆ ಶಾಶ್ವತವಾಗಿ ಸ್ಥಳಾಂತರಿಸಲು ಎಲ್ಲ ಸಿದ್ಧವಾಗಿದೆ.
ಸಾವಿರ ಕೋಟಿ ರೂ. ಕಾರಿಡಾರ್ಗೆ 3 ವರ್ಷದ ಆಯಸ್ಸೇ?
ಎಂಬತ್ತು ಅಡಿಯಷ್ಟು ದೊಡ್ಡದಾದ, ಹತ್ತಿರ ಹತ್ತಿರ ನಾನೂರೈವತ್ತು ಟನ್ ತೂಕದ ಹಾಗೂ ಇಪ್ಪತ್ತೆರಡು ಸಾವಿರದ ಆರು ನೂರು ಹುತಾತ್ಮರ ಹೆಸರನ್ನು ಒಳಗೊಂಡ ವೀರಗಲ್ಲು ಸದ್ಯಕ್ಕೆ ಬೆಂಗಳೂರಿನಿಂದ ನಲವತ್ತೈದು ಕಿ.ಮೀ. ದೂರದ ದೇವನಹಳ್ಳಿ ಕ್ವಾರಿಯಲ್ಲಿದೆ. ರಾಷ್ಟ್ರೀಯ ಸ್ಮಾರಕ ಸ್ಥಳಕ್ಕೆ ತಲುಪಲು ಎಂಟು ವರ್ಷಗಳ ಸುದೀರ್ಘ ಕಾಯುವಿಕೆಯಲ್ಲಿದೆ.
ಸಣ್ಣದೊಂದು ಕಾರ್ಯಕ್ರಮದಲ್ಲಿ ಧ್ವಜ ವಂದನೆ ಮಾಡಲಾಯಿತು. ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಸೈನಿಕರು, ಸರಕಾರಿ ಅಧಿಕಾರಿಗಳು ದೇವನಹಳ್ಳಿ ಸಮೀಪ ಭೇಟಿ ನೀಡಿದ್ದರು. ಎಪ್ಪತ್ತೈದು ಅಡಿ ಎತ್ತರದ ಸ್ತೂಪದ ಪರಿಶೀಲನೆ ನಡೆಸಲಾಯಿತು. ನಾನೂರಾ ಐವತ್ತು ಅಡಿ ತೂಕದ ವೀರಗಲ್ಲನ್ನು ಮೇ ಮೂವತ್ತನೇ ತಾರೀಕಿನಂದು ಸಾಗಿಸಿ, ಜುಲೈ ಮೊದಲ ವಾರದಲ್ಲಿ ರಾಷ್ಟ್ರೀಯ ಸ್ಮಾರಕದಲ್ಲಿ ಸ್ಥಾಪಿಸಲಾಗುತ್ತದೆ.
ನಮ್ಮ ಹುತಾತ್ಮ ಸೈನಿಕರ ಗುರುತು ಈ ವೀರಗಲ್ಲು. ಗ್ರಾನೈಟ್ ನಿಂದ ಮಾಡಲಾಗಿದೆ. ಹುತಾತ್ಮರ ಕುಟುಂಬದವರು ಬಂದು ರಾಷ್ಟ್ರೀಯ ಸ್ಮಾರಕದಲ್ಲಿ ಗೌರವ ಸಲ್ಲಿಸಬಹುದು. ಬಿಡಿಎನವರು ಈ ವೀರಗಲ್ಲನ್ನು ಇಲ್ಲಿಂದ ಸ್ಥಳಾಂತರ ಮಾಡುವ ಮುನ್ನ ಒಂದು ಗೌರವ ಸಲ್ಲಿಸುವ ಸಲುವಾಗಿ ನಾವೆಲ್ಲ ಇಲ್ಲಿದ್ದೇವೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಧ್ಯಮಗಳಿಗೆ ಹೇಳಿದ್ದಾರೆ.