ಚಾಮುಂಡಿ ತಾಯಿ ರಥ ಚಕ್ರದ ಬಣ್ಣದ ಪ್ರಕರಣಕ್ಕೆ ಟ್ವಿಸ್ಟ್
ಬೆಂಗಳೂರು, ಡಿಸೆಂಬರ್ 08: ಮೈಸೂರಿನ ಚಾಮುಂಡಿ ತಾಯಿಯ ರಥದ ಚಕ್ರದ ಮೇಲಿನ ಬಣ್ಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಹಾಕಿದ್ದ ಪೋಸ್ಟ್ ಮತ್ತು ಅದಕ್ಕೆ ಹಾಕಿದ್ದ ಪ್ರತಿಕ್ರಿಯೆಗೆ ಸಂಬಂಧಪಟ್ಟಂತೆ ದಾಖಲಾಗಿದ್ದ ಪ್ರಕರಣ ವಿಚಾರಣೆ ಶುರುವಾಗಿದೆ. ಸಂಸದ ಪ್ರತಾಪ್ ಸಿಂಹ ಅವರನಗನು ತೇಜೋ ವಧ ಮಾಡಿದ ಆರೋಪ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಾಂಗ್ರೆಸ್ ಕಾರ್ಯಕರ್ತೆ ಬಿಂದುಶ್ರಿ ಗೌಡ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಲಿಖಿತ ಹೇಳಿಕೆ ದಾಖಲಿಸಿರುವ ಬಿಂದುಶ್ರೀ ಗೌಡ, ಸಂಸದ ಪ್ರತಾಪ ಸಿಂಹ ವಿರದ್ಧ ಮೊದಲು ಕೇಸು ದಾಖಲಿಸಿ ಆನಂತರ ನನ್ನ ಮೇಲೆ ಕ್ರಮ ಜರುಗಿಸಿ ಎಂದು ಉತ್ತರ ಕೊಟ್ಟಿದ್ದಾರೆ. ಚಾಮುಂಡಿ ತಾಯಿ ರಥದ ಬಣ್ಣದ ಬಗ್ಗೆ ಹುಟ್ಟಿದ್ದ ವಿವಾದ ಇದಿಗ ಹೊಸ ಆಯಾಮ ಪಡೆದುಕೊಂಡಿದೆ.
ಕೇಮೇ ಇಲ್ಲದ ಪ್ರಕರಣ: 2020 ಮಾರ್ಚ್ 10 ರಂದು ಸಂಸದ ಪ್ರತಾಪ ಸಿಂಹ ಅವರು ಚಾಮುಂಡಿ ಬೆಟ್ಟದ ರಥದ ಚಕ್ರದ ಚಿತ್ರ ಹಾಕಿ, ಅದರ ಮೇಲಿದ್ದ ಹಸಿರು ಬಣ್ಣ ಉಲ್ಲೇಖಿಸಿ, " ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಮಾಡಿರುವ ಪೇಂಟಿಂಗ್ ನೋಡಿ. ಇದನ್ನು ನಾವು ಸಹಿಸಿಕೊಳ್ಳಬೇಕಾ ಹೇಳಿ ಎಂದು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಸಚಿವ ವಿ. ಸೋಮಣ್ಣ ಹಾಗೂ ಮೈಸೂರು ಜಿಲ್ಲಾಧಿಕಾರಿಗೆ ಟ್ಯಾಗ್ ಮಾಡಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಇದಾದ ಸ್ವಲ್ಪ ಸಮಯಕ್ಕೆ ಚಾಮುಂಡಿ ಬೆಟ್ಟ ರಥದ ಚಕ್ರ ( ಪೇಂಟಿಂಗ್ ಬದಲಿಸಿದ್ದ) ಪೋಸ್ಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಈಗ ನೋಡಿ ಎಂದು ಪೋಸ್ಟ್ ಮಾಡಿದ್ದರು. ಸಂಸದರ ಈ ಪೋಸ್ಟ್ ಗಳಿಗೆ ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಪ್ರಹ್ಲಾದ ಕೆ. ಹನುಮಂತಯ್ಯ ಎಂಬುವರು, ಚಾಮುಂಡವ್ವನ ರಥದ ಚಕ್ರ ಹಸಿರು ಇತ್ತು ಅದರಲ್ಲಿ ಧರ್ಮ ಹುಡುಕಿ ಬಣ್ಣ ಬದಲಾಯಿಸಿದ ಊಸರವಳ್ಳಿ, ಆಯಮ್ಮನಿಗೆ ಹಸಿರು ಸೀರೆ, ಹಸಿರು ಬಳೆ ತೊಡಿಸುತ್ತಾರೆ. ಯಾವಾಗ ಬದಲಾಯಿಸುವೆ ..ಮಾಡೋಕೆ ಕೇಮೆ ಇಲ್ಲದ ನಿನ್ನಂತವರು ಇಷ್ಟೇ ಮಾಡೋಕೆ ಆಗೋದು ಎಂದು ಕಿಚಡಾಯಿಸಿದ್ದರು.
ಇದೇ ರೀತಿ ಕಾಂಗ್ರೆಸ್ ಕಾರ್ಯಕರ್ತೆ ಬಿಂದುಶ್ರೀ ಗೌಡ ಅವರು ತನ್ನ ಫೇಸ್ ಬುಕ್ ನಲ್ಲಿ ಪ್ರತಾಪ್ ಸಿಂಹ ಅವರ ಪೋಸ್ಟ್ ಉಲ್ಲೇಖಿಸಿ " ಲೋ ಪ್ರತಾಪು ಚಾಮುಂಡವ್ವನ ರಥದ ಚಕ್ರ ಹಸಿರು ಇತ್ತು ಅದರಲ್ಲಿ ಧರ್ಮ ಹುಡುಕಿ ಬಣ್ಣ ಬದಲಾಯಿಸಿದ ಊಸರವಳ್ಳಿ ..ಆಯಮ್ಮನಿಗೆ ಹಸಿರು ಸೀರೆ, ಹಸಿರು ಬಳೆ ತೊಡಸಿರುತ್ತಾರೆ. ಅದನ್ನು ಯಾವಾಗ ಬದಲಾಯಿಸುವೆ. ಶಿವನ ತಲೆ ಮೇಲೆ ಇರುವ ಅರ್ಧ ಚಂದ್ರನನ್ನು ಯಾವಾಗ ಕಿತ್ತಾಕುತ್ತೀಯಾ ? ಮಾಡೋಕೆ ಕೇಮೆ ಇಲ್ಲದ ನಿನ್ನಂತರವರು ಇಷ್ಟೇ ಮಾಡೋಕೆ ಹಾಕೋದ ಎಂದು ಪೋಸ್ಟ್ ಹಾಕಿದ್ದಾರೆ. ಹೀಗೆ ಪೋಸ್ಟ್ ಮಾಡುವ ಮೂಲಕ ಸಂಸದರ ತೇಜೋವಧೆ ಮಾಡಿದ್ದಾರೆ ಎಂದು ಬಿಂದುಶ್ರೀಗೌಡ ಎಂಬುವರ ವಿರುದ್ಧ ಉಮೇಶ್ ಕುಮಾರ್ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೇ ಗಂಭೀರವಾಗಿ ಪರಿಗಣಿಸಿದ್ದ ಲಕ್ಷ್ಮೀಪುರಂ ಪೊಲೀಸರು ಬಿಂದುಶ್ರಿಗೌಡ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಬರುವಂತೆ ಸೂಚಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಲಿಖಿತ ಹೇಳಿಕೆ ದಾಖಲಿಸಿರುವ ಬಿಂದುಶ್ರೀಗೌಡ, ಸಂಸದ ಪ್ರತಾಪ್ ಸಿಂಹ ಅವರು ಮಾರ್ಚ್ 10, 2020 ರಂದು ಹಾಕಿರುವ ಪೋಸ್ಟ್ ಗಳನ್ನು ಲಗತ್ತಿಸಿದ್ದೇನೆ. ಚಾಮುಂಡಿ ಬೆಟ್ಟದ ರಥಕ್ಕೆ ಹಾಕಿರುವ ಬಣ್ಣ ಉಲ್ಲೇಖಿಸಿ ಇಂಥದ್ದನ್ನು ಸಹಿಸಬೇಕಾ ಎಂದು ಹಾಕಿದ್ದಾರೆ. ಅದೇ ದಿನ ಸಂಜೆ ನಿಮ್ಮ ಗಮನಕ್ಕೆ ಇರಲಿ ಅಂತ ಪೋಟೋ ಹಾಕಿದ್ದೇನೆ. ಪಾಠ ಕಲಿಸದೇ ಬಿಡಲ್ಲ, ಎಂದು ಪೂರಕ ಪೋಸ್ಟ್ ಹಾಕಿದ್ದಾರೆ.
Recommended Video
ಒಬ್ಬ ಸಂಸದರಾಗಿ ರಥವೊಂದರ ಚಕ್ರದ ಬಣ್ಣದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲರನ್ನು ಸಮಾನವಾಗಿ ಕಾಣಬೇಕಾದವರು, ರಥದ ಚಕ್ರ ಬಣ್ಣ ಇಟ್ಟುಕೊಂಡು ಕೋಮು ದ್ವೇಶ ಹುಟ್ಟಿಸುವ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾರೆ.ಸಂಸದರು ಹಾಕಿರುವ ಪೋಸ್ಟ್ ಗಳನ್ನು ಪರಮಾರ್ಶಿಸಿ, ಅವರ ಪೋಸ್ಟ್ ಬಗ್ಗೆ ನಾನು ಹಾಕಿರುವ ಪ್ರತಿಕ್ರಿಯೆ ಕಾನೂನು ಅಡಿ ಅಪರಾಧ ಎಂದು ಪರಿಗಣಿಸುವುದಾದರೆ ನನ್ನ ವಿರುದ್ಧ ಕ್ರಮ ಜರುಗಿಸಿ. ಅದರ ಜತೆಗೆ ಪೋಸ್ಟ್ ಹಾಕಿರುವ ಪ್ರತಾಪ ಸಿಂಹ ಅವರ ವಿರುದ್ಧ ಸಹ ಕೇಸು ದಾಖಲಿಸಿ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಹೇಳಿಕೆ ಪ್ರತಿ ಒನ್ ಇಂಡಿಯ ಕನ್ನಡಗೆ ಲಭ್ಯವಾಗಿದೆ.