ಎಸ್ಡಿಪಿಐ ರಕ್ಷಣೆ ಮಾಡುವುದು ಸಿದ್ದರಾಮಯ್ಯ ಪ್ಲಾನ್!
ಬೆಂಗಳೂರು, ಆ. 20: ಶಾಸಕ ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ಸಿಂಹ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಗಲಭೆ ನಡೆದ ಎಲ್ಲಾ ಕಡೆ ಜಮೀರ್ ಅಹ್ಮದ್ ಏಕೆ ಹೋಗುತ್ತಾರೆ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
Recommended Video
ಇದನ್ನು ನಿಯಂತ್ರಣ ಮಾಡಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪುಂಡ ಮುಸಲ್ಮಾನರ ಹೆಸರು ಹೇಳದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಿಂಹ ಮಾಡಿದ್ದಾರೆ. ರಾಜ್ಯದಲ್ಲಿ ಸ್ಲೀಪರ್ ಸೆಲ್ಗಳು ಆ್ಯಕ್ಟೀವ್ ಆಗಿವೆ. ಕೇರಳ ಮಾದರಿಯಲ್ಲಿ ರಾಜಕೀಯ ಹತ್ಯೆಗೆ ಸಂಚು ನಡೆಯುತ್ತಿದೆ. ಇದು ಎಸ್ಡಿಪಿಐ ಕೆಎಫ್ಡಿ ಮೂಲಕ ರಾಜ್ಯಕ್ಕೆ ಕೇರಳ ಮಾದರಿ ಕಾಲಿಟ್ಟಿದೆ. ಕಾಂಗ್ರೆಸ್ ಪಕ್ಷದವರು ಇದನ್ನು ಮಟ್ಟ ಹಾಕುವ ಪ್ರಯತ್ನದ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ.
ಎಸ್ಡಿಪಿಐ ನಿಷೇಧ ವಿಚಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವೇದನೆಯಾಗುತ್ತಿರುವುದು ಆಶ್ಚರ್ಯ ತಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಎಸ್ಡಿಪಿಐ ವಿರುದ್ಧದ 175 ಪ್ರಕರಣಗಳನ್ನು 2015ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ವಾಪಾಸ್ ಪಡೆದಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ ಮಾಡುವುದು ತನಿಖೆ ವಿಳಂಬವಾಗುವಂತೆ ನೋಡಿಕೊಂಡು ವ್ಯವಸ್ಥಿತವಾಗಿ ಎಸ್ಡಿಪಿಐ ರಕ್ಷಣೆ ಮಾಡುವುದು ಸಿದ್ದರಾಮಯ್ಯ ಅವರ ಪ್ಲ್ಯಾನ್.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಯವರನ್ನು ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಅವರಿಗೆ ನಿರಂತರವಾಗಿ ಒಳ ಏಟು ಕೊಟ್ಟಿದ್ದಾರೆ. ಡಾ. ಜಿ ಪರಮೇಶ್ವರ ಅವರಿಗೆ ಸಿಎಂ ಹುದ್ದೆ ತಪ್ಪಿಸಿದ್ದು ಸಿದ್ದರಾಮಯ್ಯ. ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ತುಳಿದಿದ್ದು ಸಿದ್ದರಾಮಯ್ಯ. ಜೊತೆಗೆ ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಎಂದು ಪ್ರತಾಪ್ಸಿಂಹ ಪ್ರಶ್ನೆ ಮಾಡಿದ್ದಾರೆ.
ಈಗಲೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಒತ್ತಡ ಹಾಕಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಸ್ಡಿಪಿಐ ಛೂ ಬಿಟ್ಟು ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ಮಾಡಿಸಿದ್ದಾರೆ. ಸಿದ್ದರಾಮಯ್ಯ ಎಲ್ಲರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.