ಮಧ್ಯಪ್ರದೇಶ ಸರ್ಕಾರ ಉಳಿಸಲು ಅಖಾಡಕ್ಕೆ ಇಳಿದ ಡಿ. ಕೆ. ಶಿವಕುಮಾರ್!
ಬೆಂಗಳೂರು, ಮಾರ್ಚ್ 18 : ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಬೆಂಗಳೂರಿನಲ್ಲಿ ಸುದ್ದಿ ಮಾಡುತ್ತಿದೆ. ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸರ್ಕಾರವನ್ನು ಉಳಿಸಲು ಅಖಾಡಕ್ಕೆ ಇಳಿದಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ.
ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸುಪ್ರೀಂ ಅಂಗಳ ತಲುಪಿದ ಮಧ್ಯಪ್ರದೇಶ ರಾಜಕೀಯ ಹೈಡ್ರಾಮ
ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಯಲಹಂಕ ಬಳಿಯ ರಮಡಾ ಹೋಟೆಲ್ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್, ಡಿ. ಕೆ. ಶಿವಕುಮಾರ್ಗೆ ಪೊಲೀಸರು ಅವಕಾಶ ನೀಡುತ್ತಿಲ್ಲ.
ಮಧ್ಯಪ್ರದೇಶ ರಾಜಕೀಯಕ್ಕೆ ತಿರುವು; 5 ಅಂಶಗಳು
ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಸುಪ್ರೀಂಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದೆ. ಬಿಜೆಪಿ ನಮ್ಮ ಶಾಸಕರನ್ನು ಅಪಹರಣ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ. ರಮಡಾ ಹೋಟೆಲ್ಗೆ ಕರ್ನಾಟಕ ಸರ್ಕಾರದ ಕಡೆಯಿಂದ ಪೊಲೀಸ್ ಭದ್ರತೆ ನೀಡಲಾಗಿದೆ.
ಮಧ್ಯಪ್ರದೇಶ ಹೈಡ್ರಾಮ; ಬೆಂಗಳೂರಲ್ಲೇ ಇರುವ ಕಾಂಗ್ರೆಸ್ ಶಾಸಕರು!
ದಿಗ್ವಿಜಯ್ ಸಿಂಗ್ ಪೊಲೀಸ್ ವಶಕ್ಕೆ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ. ಬುಧವಾರ ಮುಂಜಾನೆ ಅವರು ಶಾಸಕರ ಭೇಟಿಗೆ ಅವಕಾಶ ನೀಡಬೇಕು ಎಂದು ಯಲಹಂಕ ಬಳಿಯ ರಮಡಾ ಹೋಟೆಲ್ ಮುಂದೆ ಧರಣಿ ಕೂತಿದ್ದರು. ಅಮೃತಹಳ್ಳಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಡಿ. ಕೆ. ಶಿವಕುಮಾರ್ ಅಖಾಡಕ್ಕೆ
ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದಿಗ್ವಿಜಯ್ ಸಿಂಗ್ ಭೇಟಿ ಮಾಡಿದರು. "ಕರ್ನಾಟಕ ಬಿಜೆಪಿ ಸರ್ಕಾರ, ಬೆಂಗಳೂರಿನ ಹೋಟೆಲ್ನಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬಲವಂತವಾಗಿ ಕೂಡಿಟ್ಟಿದ್ದು, ನನಗೆ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್ಗೆ ಶಾಸಕರೊಂದಿಗೆ ಮಾತಾಡಲು ಅವಕಾಶ ನೀಡುತ್ತಿಲ್ಲ" ಎಂದು ಆರೋಪ ಮಾಡಿದರು.
ಆಪರೇಷನ್ ಕಮಲ
"ಪ್ರತಿಭಟನೆಗೂ ಅವಕಾಶ ನೀಡದೇ, ನಮ್ಮನ್ನೂ ಬಂಧಿಸಿರುವ ಪೊಲೀಸರು, ಸದ್ಯ ಅಮೃತಹಳ್ಳಿ ಠಾಣೆಯಲ್ಲಿ ಇರಿಸಿದ್ದಾರೆ. ಅಧಿಕಾರದ ದುರಾಸೆಯಿಂದಾಗಿ ಆಪರೇಷನ್ ಕಮಲದ ಮೂಲಕ ಶಾಸಕರನ್ನ ಖರೀದಿಸಲು ಹೊರಟಿರುವ ಬಿಜೆಪಿ, ಇಂದು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ" ಎಂದು ಡಿ. ಕೆ. ಶಿವಕುಮಾರ್ ದೂರಿದ್ದಾರೆ.
ಬಹುಮತ ಸಾಬೀತು ಮಾಡಬೇಕು
ಮುಖ್ಯಮಂತ್ರಿ ಕಮಲನಾಥ್ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ. ಮಧ್ಯಪ್ರದೇಶ ವಿಧಾನಸಭೆ ಒಟ್ಟು ಸದಸ್ಯ ಬಲ 230. ಪ್ರಸ್ತುತ ಸದಸ್ಯ ಬಲ 222. ಬಹುಮತ ಸಾಬೀತು ಪಡಿಸಲು 112 ಸದಸ್ಯ ಬಲ ಬೇಕು. ಕಾಂಗ್ರೆಸ್ ಸದನದಲ್ಲಿ 108 ಶಾಸಕರ ಬಲ ಹೊಂದಿದೆ. 7 ಇತರ ಶಾಸಕರು ಕಾಂಗ್ರೆಸ್ ಬೆಂಬಲಕ್ಕಿದ್ದಾರೆ. ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿದ್ದು, ಅಂಗೀಕಾರವಾಗಿಲ್ಲ.