ಡಾ ರಾಜ್ಗೆ 'ಭಾರತ ರತ್ನ' ನೀಡುವಂತೆ ಮೋದಿಗೆ ಪತ್ರ ಬರೆದ ಸಂಸದ
ಬೆಂಗಳೂರು, ಜುಲೈ 25: ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ಕುಮಾರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನಿ ಮೋದಿಗೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ.
ಕನ್ನಡ ಚಿತ್ರರಂಗ ಹಾಗೂ ಭಾರತೀಯ ಸಿನಿಮಾ ಕ್ಷೇತ್ರಕ್ಕೆ, ಕಲಾ ಕ್ಷೇತ್ರಕ್ಕೆ ಡಾ ರಾಜ್ ಕುಮಾರ್ ನೀಡಿರುವ ಸೇವೆ ಗೌರವಿಸಿ ದೇಶದ ಅತ್ಯುನ್ನತ 'ಭಾರತ ರತ್ನ' ನೀಡಬೇಕು ಎಂದು 8 ಕೋಟಿ ಕನ್ನಡಿಗರ ಪರವಾಗಿ ಜಿಸಿ ಚಂದ್ರಶೇಖರ್ ಪ್ರಧಾನಿ ಬಳಿ ವಿನಂತಿಸಿದ್ದಾರೆ.
ಡಾ.ರಾಜ್ಕುಮಾರ್, ಇಂದಿರಾ ಗಾಂಧಿ ಜೊತೆ ಮೋದಿ! ಇದು ಸತ್ಯವೇ?
ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗಳಾದ, ಅಭಿಮಾನಿಗಳನ್ನು ದೇವರು ಎಂದಿದ್ದ ಮೇರು ನಟ ಡಾ.ರಾಜ್ ಕುಮಾರ್ ರವರಿಗೆ ಮರಣೋತ್ತರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತ 'ಭಾರತ ರತ್ನ' ನೀಡಬೇಕೆಂದು ಮಾನ್ಯ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದೇನೆ.@PMOIndia @INCKarnataka @DKShivakumar @INCIndia @BJP4India @nalinkateel pic.twitter.com/Jnu9jRZtIV
— GC ChandraShekhar (@GCC_MP) July 25, 2020
ಕರ್ನಾಟಕ ಸಾಂಸ್ಕೃತಿಕ ರಾಯಭಾರಿಗಳಾದ, ಅಭಿಮಾನಿಗಳನ್ನು ದೇವರು ಎಂದಿದ್ದ ಮೇರು ನಟ ಡಾ.ರಾಜ್ ಕುಮಾರ್ ರವರಿಗೆ ಮರಣೋತ್ತರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಬೇಕೆಂದು ಮಾನ್ಯ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಾವು ಬರೆದಿರುವ ಪತ್ರವನ್ನು ಜಿಸಿ ಚಂದ್ರಶೇಖರ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
'ಸುಮಾರು 40 ವರ್ಷಕ್ಕು ಹೆಚ್ಚು ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡು 206ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗ ಅಭಿವೃದ್ದಿಯಲ್ಲಿ ಅವರ ಪಾತ್ರ ಪ್ರಮುಖವಾದದು. ಅವರನ್ನು 'ಬಂಗಾರದ ಮನುಷ್ಯ' ಎಂದು ಕರೆಯುತ್ತಾರೆ. ಅವರ ಚಿತ್ರಗಳಿಂದ ಅನೇಕರು ಸ್ಫೂರ್ತಿ ಪಡೆದುಕೊಂಡು ಜೀವನ ಬದಲಿಸಿಕೊಂಡಿದ್ದಾರೆ' ಎಂದು ಮೋದಿ ಅವರ ಗಮನಕ್ಕೆ ತಂದಿದ್ದಾರೆ.
ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ, ಕರ್ನಲ್ ಕೆಂಟಕಿ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿದೆ. ಈ ಹಿಂದೆ ಸಿನಿಮಾ ಕಲಾವಿದರ ಸಾಧನೆ ಗುರುತಿಸಿ ಕೆಲವರಿಗೆ ಭಾರತ ರತ್ನ ನೀಡಲಾಗಿದೆ. ಈ ನಿಟ್ಟಿನಲ್ಲಿ ಡಾ ರಾಜ್ ಕುಮಾರ್ ಅವರಿಗೂ ಉನ್ನತ ಗೌರವ ಸಿಗಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.