'ನೂರಿ ಕುಸ್ತಿ' ಮಾಡ್ತಾರಲ್ಲ? ಆ ರೀತಿ ಕಂದಾಯ ಸಚಿವ ಆರ್. ಅಶೋಕ್!
ಬೆಂಗಳೂರು, ಅ. 28: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಣ್ಣೀರು ಹಾಕಿರುವುದು ಇದೀಗ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸಿದೆ. ಹೀಗಾಗಿ ಮುನಿರತ್ನ ಅವರ ಕಣ್ಣೀರು ಮತಗಳಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಅವರು ಸುದೀರ್ಘವಾಗಿ ಮಾತನಾಡಿ, ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಅವರಿಗೆ ಕಣ್ಣೀರು ಹಾಕುವುದು ಗೊತ್ತು, ಹಾಕಿಸುವುದು ಗೊತ್ತು ಎಂದು ಬೆಂಗಳೂರು ಗ್ರಾಮಾಂತರ ಶಾಕ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ. ಮುನಿರತ್ನ ಅವರು ಹೇಳಿಕೇಳಿ ಸಿನಿಮಾ ನಿರ್ಮಾಪಕ, ನಿರ್ಮಾಪಕರಿಗೆ ಕಣ್ಣೀರು ಹಾಕೋದು ಗೊತ್ತು. ಹಾಗೆ ಹಾಕಿಸುವುದು ಇನ್ನೂ ಚೆನ್ನಾಗಿ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಕಣ್ಣೀರಾದ ಬಿಜೆಪಿ ಅಭ್ಯರ್ಥಿ ಮುನಿರತ್ನ!
ಯಾವ್ಯಾವ ವೇಳೆಯಲ್ಲಿ ಯಾವ ಸೀನ್, ಯಾವಾಗ ಸೀನ್ ಕಟ್ ಮಾಡ್ಬೇಕು, ಯಾವಾಗ್ ಜೋಡಿಸಬೇಕು ಅನ್ನೋದು ಅವರಿಗೆ ಗೊತ್ತಿದೆ. ಅದರಲ್ಲಿ ಅವರಿಗೆ ಸಾಕಷ್ಟು ಅನುಭವವೂ ಇದೆ. ಈಗ ಹೊಸ ಡ್ರಾಮಾ ಶುರು ಮಾಡಿದ್ದಾರೆ. ಇದು ಹೊಸ ಅವತಾರ. ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಇದೇ ಮುನಿರತ್ನ. ಯಾಕ್ ಅವರಿಗೆ ಮರೆತು ಹೋಗಿದೆಯಾ? ಅವರಿಗೆ ಮರೆತಿರಬಹುದು, ಆದ್ರೆ ಕ್ಷೇತ್ರದ ಜನರು ಮರೆತಿಲ್ಲ ಎಂದು ಡಿಕೆ ಸುರೇಶ್ ಹೇಳಿದರು.
ಕೆಂಪು ಹೋಗಿ ಕೇಸರಿ ರಕ್ತ
ಯಾಕಂದ್ರೆ ಕಟ್ ಅಂಡ್ ಪೇಸ್ಟ್ ಮಾಡೋದು ಅವರ ಅಭ್ಯಾಸ. ಹೀಗಾಗಿ ಮರೆತು ಹೋಗಿರಬಹುದು. ನಿಮಗೆ (ಮುನಿರತ್ನ) ಯಾವಾಗ ಯಾರನ್ನು ಅಳಿಸಬೇಕು, ಯಾವಾಗ ಹೊಡಿಯಬೇಕು ಅನ್ನೋದು ತುಂಬಾ ಚೆನ್ನಾಗಿ ಗೊತ್ತಿದೆ. ಜನರೇ ನಿಮಗೆ ಬುದ್ದಿ ಕಲಿಸುತ್ತಾರೆ. ನಿಮಗೆ ಈಗ ಕಾಂಗ್ರೆಸ್ ತಾಯಿ ಮರೆತು ಹೋಗಿದೆ. ರಕ್ತ ಬದಲಾಗಿದೆ. ಕೆಂಪು ಹೋಗಿ ಈಗ ಕೇಸರಿ ಆಗಿದೆ ಎಂದರು..
ನಮಗೂ ಜವಾಬ್ದಾರಿ ಇದೆ
ಸಿನಿಮಾ ತೆಗೆಯೋರಿಗೆ ಯಾವಾಗ ಅಳಿಸಬೇಕು? ಯಾವಾಗ ಹೊಡೆಸಬೇಕು ಅನ್ನೋದು ಗೊತ್ತಿರುತ್ತದೆ. ಯಾರು ಏನೇ ಹೇಳಿಕೆ ನೀಡಿದರೂ ಅದು ಬರೀ ರಾಜಕೀಯ ಹೇಳಿಕೆ ಮಾತ್ರ, ನಾವು ವೈಯಕ್ತಿಕ ನಿಂದನೆ ಮಾಡಲ್ಲ. ನಮಗೂ ಜವಾಬ್ದಾರಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಿಕೆ ಸುರೇಶ್ ಸಮರ್ಥಿಸಿಕೊಂಡರು.
ಅಶೋಕ್ ಅವರದ್ದು 'ನೂರಿ ಕುಸ್ತಿ'
ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಅಂತಾ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, ಅಶೋಕ್ ಅವರಿಗೆ, ಮಂತ್ರಿ ಮಂಡಲದ ಒಕ್ಕಲಿಗ ಸಚಿವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ನೇರವಾದ ಹೋರಾಟ ಅವರವರಿಗೆ ಇರಲಿ. ನೂರಿ ಕುಸ್ತಿ ಮಾಡ್ತಾರಲ್ಲ? ಆ ರೀತಿ ಅವರು. ನೂರಿ ಕುಸ್ತಿ ಏನು ಅಂತಾ ಅವರನ್ನೇ ಕೇಳಿ ಹೇಳ್ತಾರೆ ಎಂದರು.
ಈಗ ಕಪಾಲಿ ಬೆಟ್ಟದ ವಿಚಾರ ಬೇಡ
ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ವಿಚಾರ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ. ಈಗ ದರ ಬಗ್ಗೆ ಚರ್ಚೆ ಬೇಡ. ಈ ಚುನಾವಣಾ ಡ್ರಾಮಾ ಮುಗಿದ್ಮೇಲೆ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಈಗ ಸದ್ಯಕ್ಕೆ ಕುಸುಮಾ ಮತ್ತು ಮುನಿರತ್ನ ವಿಚಾರ ಅಷ್ಟೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು.